ದಾವಣಗೆರೆ : ಆವರಗೊಳ್ಳದ ತ್ಯಾಜ್ಯ ವಿಲೇವಾರಿ ಘಟಕದಲ್ಲಿ ಮಂಗಳವಾರ ರಾತ್ರಿ ಬೆಂಕಿ ಕಾಣಿಸಿಕೊಂಡು ಕಸದ ರಾಶಿ ಹೊತ್ತಿ ಉರಿಯಿತು. ಘಟನಾ ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ಮತ್ತು ಮಹಾನಗರ ಪಾಲಿಕೆಯ 50 ಜನ ಸಿಬ್ಬಂದಿ ಧಾವಿಸಿ ರಾತ್ರಿಯಿಡೀ ಕಾರ್ಯಾಚರಣೆ ನಡೆಸಿದರು. ಬುಧವಾರ ಬೆಳಗ್ಗೆ 6 ಗಂಟೆಯ ವೇಳೆಗೆ ಬೆಂಕಿ ಹತೋಟಿಗೆ ಬಂದಿತು. ಈ ಅವಘಡಕ್ಕೆ ಕಾರಣ ತಿಳಿದು ಬಂದಿಲ್ಲ. ಆಕಸ್ಮಿಕವಾಗಿ ಹೊತ್ತಿಕೊಂಡ ಬೆಂಕಿಯು ಎರಡು ಎಕರೆ ಪ್ರದೇಶಕ್ಕೆ ಕೆನ್ನಾಲಿಗೆ ಚಾಚಿತು. ಗಾಳಿ ಇದ್ದುದರಿಂದ ಬೆಂಕಿ ಮತ್ತು ಹೊಗೆ ವೇಗವಾಗಿ ಆವರಿಸಿತು. ನಿಯಂತ್ರಣಕ್ಕೆ ತರಲು ಸಿಬ್ಬಂದಿ ಪ್ರಯಾಸ ಪಡಬೇಕಾಯಿತು. ಆವರಗೊಳ್ಳದ ಬಳಿ 33 ಎಕರೆ ಜಾಗದಲ್ಲಿ ತ್ಯಾಜ್ಯ ವಿಲೇವಾರಿ ಘಟಕವಿದೆ. ಅದರಲ್ಲಿ 16 ಎಕರೆಯಲ್ಲಿ 2.5 ಲಕ್ಷ ಟನ್ ಪಾರಂಪರಿಕ ತ್ಯಾಜ್ಯವಿದೆ. ಇದು 2004 ರಿಂದಲೂ ಸಂಗ್ರಹಗೊಂಡು ಬೆಟ್ಟದಂತಾಗಿದೆ. ಅದರಲ್ಲಿ ಪ್ಲಾಸ್ಟಿಕ್, ಲೋಹ, ಕಾಗದ ಇನ್ನಿತರ ತ್ಯಾಜ್ಯಗಳಿವೆ. ನಗರದಲ್ಲಿ ಪ್ರತಿ ದಿನ 170 ರಿಂದ 180 ಟನ್ ತ್ಯಾಜ್ಯ ಉತ್ಪಾದನೆ ಆಗುತ್ತದೆ. ಅದು 80 ರಿಂದ 90 ಟನ್ ಹಸಿ ಕಸ ಮತ್ತು 60 ರಿಂದ 70 ಟನ್ ಒಣ ಕಸವನ್ನು ಒಳಗೊಂಡಿದೆ. ದಿನಕ್ಕೆ 200 ಟನ್ ಸಂಸ್ಕರಿಸುವ ಸಾಮರ್ಥ್ಯದ ಘಟಕದಲ್ಲಿ ಹಸಿ ತ್ಯಾಜ್ಯವನ್ನು ಸಂಸ್ಕರಿಸುವ ವ್ಯವಸ್ಥೆ ಆಗಿದೆ. ಒಣ ತ್ಯಾಜ್ಯವನ್ನು ವಿಂಗಡಿಸಿ ಸಂಸ್ಕರಿಸುವ ಎಂ.ಆರ್.ಎಫ್ ಸೌಲಭ್ಯ ಅಭಿವೃದ್ಧಿ ಪಡಿಸಲು ಟೆಂಡರ್ ಕರೆಯಲಾಗಿದೆ. ಕ್ರಮೇಣ ಎಲ್ಲ ಪಾರಂಪರಿಕ ತ್ಯಾಜ್ಯವನ್ನು ವಿಲೇವಾರಿ ಮಾಡುವ ಗುರಿ ಹೊಂದಲಾಗಿದೆ ಎಂದು ಮಹಾನಗರ ಪಾಲಿಕೆ ಆಯುಕ್ತೆ ರೇಣುಕಾ ಮತ್ತು ಪರಿಸರ ಇಂಜಿನಿಯರ್ ಬಸವಣ್ಣ ತಿಳಿಸಿದರು. ಈ ಹಿಂದೆ ಮೇ ತಿಂಗಳಲ್ಲಿ ಇದೇ ಸ್ಥಳದಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. … ಜಿಲ್ಲಾಧಿಕಾರಿ ಭೇಟಿ ಬೆಂಕಿ ಆಕಸ್ಮಿಕ ಸಂಭವಿಸಿದ ಆವರಗೊಳ್ಳದ ತ್ಯಾಜ್ಯ ವಿಲೇವಾರಿ ಘಟಕಕ್ಕೆ ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರ ಸ್ವಾಮಿ ಬುಧವಾರ ಭೇಟಿ ನೀಡಿದ್ದರು. ಘಟಕದ ಸುತ್ತಲೂ ಸಿಸಿ ಕ್ಯಾಮರಾ ಅಳವಡಿಸಬೇಕು. ಅಗ್ನಿ ನಂದಕ ಉಪಕರಣಗಳನ್ನು ಸಿದ್ಧವಾಗಿ ಇಟ್ಟುಕೊಳ್ಳಬೇಕು. ದಿನದ 24 ಗಂಟೆ ಕಾವಲುಗಾರರನ್ನು ನಿಯೋಜಿಸುವಂತೆ ಅಧಿಕಾರಿಗಳಿಗೆ ಡಿಸಿ ಸೂಚನೆ ನೀಡಿದರು. ಪಾಲಿಕೆ ಆಯುಕ್ತೆ ರೇಣುಕಾ, ಪರಿಸರ ಅಧಿಕಾರಿ ಬಸವಣ್ಣ ಇದ್ದರು.
