ದಾವಣಗೆರೆ : ವಸತಿ ಸೌಲಭ್ಯಕ್ಕೆ ಸರ್ಕಾರ ಬಿಡುಗಡೆಗೊಳಿಸಿದ ಅನುದಾನ ಮರಳಿ ಹೋಗದಂತೆ ಎಚ್ಚರ ವಹಿಸಬೇಕು ಎಂದು ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್ ಸೂಚನೆ ನೀಡಿದರು. ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಶನಿವಾರ ನಡೆದ ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿಯ (ದಿಶಾ) ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು. ಜನರಿಗೆ ಸೂರು ಕಲ್ಪಿಸುವ ಉದ್ದೇಶದಿಂದ ರೂಪಿಸಿದ ವಸತಿ ಯೋಜನೆಯ ಅನುದಾನ ಸದ್ಬಳಕೆಯಾಗಬೇಕು. ಆರ್ಥಿಕ ಸಾಮರ್ಥ್ಯ ಹೊಂದಿದ ಫಲಾನುಭವಿಗಳನ್ನು ಆಯ್ಕೆ ಮಾಡಬೇಕು ಎಂದು ತಿಳಿಸಿದರು. ಜನರು ಸೂರು ನಿರ್ಮಿಸಿಕೊಳ್ಳುವ ತವಕದಲ್ಲಿದ್ದಾರೆ. ವಸತಿ ಸೌಲಭ್ಯಕ್ಕೆ ಬಹಳ ಬೇಡಿಕೆ ಇದೆ. ಆದರೆ, ಕೇಂದ್ರ ಸರ್ಕಾರ ಒದಗಿಸುತ್ತಿರುವ ಅನುದಾನದಲ್ಲಿ ಮನೆ ಕಟ್ಟಿಕೊಳ್ಳಲು ಸಾಧ್ಯವಿಲ್ಲ. ನಿವೇಶನ ಹೊಂದಿದ, ಆರ್ಥಿಕ ಸಾಮರ್ಥ್ಯ ಇರುವ ಅರ್ಹ ಫಲಾನುಭವಿಗಳನ್ನು ಆಯ್ಕೆ ಮಾಡಬೇಕು. ಈ ಪ್ರಕ್ರಿಯೆ ಪಾರದರ್ಶಕವಾಗಿರಬೇಕು ಎಂದು ತಾಕೀತು ಮಾಡಿದರು. ವಸತಿ ಬೇಡಿಕೆ ಸಮೀಕ್ಷೆಯ ಪಟ್ಟಿ ಇಟ್ಟುಕೊಂಡು ಮನಬಂದಂತೆ ಫಲಾನುಭವಿಗಳನ್ನು ಆಯ್ಕೆ ಮಾಡಿದ ಪರಿಣಾಮವಾಗಿ ಯೋಜನೆ ನಿರೀಕ್ಷಿತ ಪ್ರಗತಿ ಕಾಣುತ್ತಿಲ್ಲ. ಯಾವ ನಿಗಮದ ವಸತಿ ಯೋಜನೆಗೆ ಫಲಾನುಭವಿ ಅರ್ಹ ಎಂಬುದನ್ನು ಮೊದಲು ಗುರುತಿಸಿ. ಮಂಜೂರಾಗಿರುವ ಮನೆಗಳನ್ನು ಕಟ್ಟಿಕೊಳ್ಳುವಂತೆ ಫಲಾನುಭವಿಗಳ ಮನವೊಲಿಸಿ ಎಂದು ಹೇಳಿದರು. ಹೊನ್ನಾಳಿ ತಾಲೂಕಿನ ಬನ್ನಿಕೋಡ ಗ್ರಾಮದ ಅನುದಾನಿತ ಶಾಲೆಗೆ ಈಚೆಗೆ ಭೇಟಿ ನೀಡಿದ್ದೆ. ಶಿಕ್ಷಣ ಸಂಸ್ಥೆಯೊಂದು ಹೊಂದಿರಬೇಕಾದ ಕನಿಷ್ಠ ಸೌಲಭ್ಯಗಳೂ ಅಲ್ಲಿಲ್ಲ. ಆ ಶಾಲೆಯ ಶಿಕ್ಷಣದ ಗುಣಮಟ್ಟದ ಬಗ್ಗೆ ಸಾರ್ವಜನಿಕರಿಂದ ದೂರು ಬಂದಿವೆ. ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಕಳಪೆ ಸಾಧನೆ ತೋರಿದ ಅನುದಾನಿತ ಶಿಕ್ಷಣ ಸಂಸ್ಥೆ ಹಾಗೂ ಶೂನ್ಯ ಫಲಿತಾಂಶ ಪಡೆದ ಶಾಲೆಗಳ ಮೇಲೆ ನಿಗಾ ಇಡಬೇಕು ಎಂದು ತಿಳಿಸಿದರು. ಸ್ವಚ್ಛ ಭಾರತ್ ಯೋಜನೆಯಡಿ ಗ್ರಾಮೀಣ ಪ್ರದೇಶದಲ್ಲಿ ಮನೆ ಮನೆ ಕಸ ಸಂಗ್ರಹಿಸುವ ಶೇ. 80ರಷ್ಟು ವಾಹನಗಳಿಗೆ ಜಿಪಿಎಸ್ ಸಾಧನ ಅಳವಡಿಸಿ ಕಣ್ಗಾವಲು ವ್ಯವಸ್ಥೆ ರೂಪಿಸಲಾಗಿದೆ ಎಂದು ಜಿ.ಪಂ. ಸಿಇಒ ಸುರೇಶ್ ಇಟ್ನಾಳ್ ಮಾಹಿತಿ ನೀಡಿದರು.
