ದಾವಣಗೆರೆ : ಕ್ಯಾನ್ಸರ್ಮುಕ್ತ ರಾಷ್ಟ್ರ ನಿರ್ಮಾಣಕ್ಕೆ ಪ್ರತಿಯೊಬ್ಬರೂ ಕೈ ಜೋಡಿಸಬೇಕು ಎಂದು ಅಪರ ಜಿಲ್ಲಾಧಿಕಾರಿ ಪಿ.ಎನ್. ಲೋಕೇಶ್ ಹೇಳಿದರು. ನಗರ ಹೊರ ವಲಯದ ಶಾಮನೂರು-ಬನಶಂಕರಿ ಬಡಾವಣೆಯಲ್ಲಿರುವ ಮಯೂರ್ ಗ್ಲೋಬಲ್ ಶಾಲೆ ಗ್ರೇಸ್ ಕ್ಯಾನ್ಸರ್ ಫೌಂಡೇಶನ್ ಸಂಯುಕ್ತ ಆಶ್ರಯದಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ ಗರ್ಭಾಶಯ ಕ್ಯಾನ್ಸರ್ಗೆ ಉಚಿತ ಲಸಿಕೆ ಹಾಕುವ ಹಾಗೂ ಕ್ಯಾನ್ಸರ್ ತಪಾಸಣಾ ಶಿಬಿರದಲ್ಲಿ ಮಾತನಾಡಿದರು. ಹೆಣ್ಣು ಮಕ್ಕಳಿಗೆ ಸ್ತನ ಕ್ಯಾನ್ಸರ್ ಮತ್ತು ಗರ್ಭಾಶಯದ ಕ್ಯಾನ್ಸರ್ ಇತ್ತೀಚೆಗೆ ತುಂಬಾ ಕಾಣಿಸಿಕೊಳ್ಳುತ್ತಿದೆ. ಲಸಿಕೆ ತೆಗೆದುಕೊಂಡರೆ ಜೀವನ ಪೂರ್ತಿ ರೋಗದಿಂದ ದೂರ ಇರಬಹುದು ಎಂದರು. ಮಯೂರ್ ಶಾಲೆಯವರು ತಮ್ಮ ಶಾಲಾ ಮಕ್ಕಳಿಗಲ್ಲದೇ ಇತರರಿಗೂ ಉಚಿತವಾಗಿ ಈ ಲಸಿಕೆ ಕೊಡಿಸುತ್ತಿರುವುದು ಶ್ಲಾಘನೀಯ. ಶಾಲೆ, ಗ್ರೇಸ್ ಫೌಂಡೇಶನ್, ಮ್ಯಾಕ್ಸಿಮಾ ಕಂಪನಿಯ ಈ ಸಮಾಜಮುಖಿ ಸೇವೆ ಅಭಿನಂದನೀಯ ಎಂದು ಹೇಳಿದರು. ಹೈದರಾಬಾದ್ನ ಕ್ಯಾನ್ಸರ್ ಸರ್ಜನ್ ಡಾ. ಚಿನ್ನಬಾಬು ಮಾತನಾಡಿ ಗರ್ಭಾಶಯದ ಕ್ಯಾನ್ಸರ್ಗೆ ಲಸಿಕೆ ಬಂದಿರುವುದು ಎಲ್ಲ ಹೆಣ್ಣು ಮಕ್ಕಳಿಗೆ ಗೊತ್ತಾಗಬೇಕು ಮತ್ತು ಅದನ್ನು ಹಾಕಿಸಿಕೊಳ್ಳಬೇಕು. ಅದಕ್ಕಾಗಿಯೇ ಮಯೂರ್ ಶಾಲೆಯಲ್ಲಿ ಉಚಿತವಾಗಿ ಲಸಿಕೆ ಹಾಕುತ್ತಿದ್ದೇವೆ. ಎಲ್ಲರೂ ಇದರ ಪ್ರಯೋಜನ ಪಡೆಯಬೇಕು ಎಂದರು. ಮ್ಯಾಕ್ಸಿಮಾ ಕಂಪನಿಯ ಉಪಾಧ್ಯಕ್ಷೆ ಪ್ರವೀಣ ಭೀಮವರಪು ಮಾತನಾಡಿ ಈಗ ಕ್ಯಾನ್ಸರ್ಗೆ ಒಳ್ಳೆಯ ಚಿಕಿತ್ಸೆ ಬಂದಿದೆ. ಆರಂಭದಲ್ಲೇ ಪತ್ತೆಯಾದರೆ ಗುಣಪಡಿಸಬಹುದು ಎಂದು ತಿಳಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲೆಯ ಆಡಳಿತಾಧಿಕಾರಿ ಬಿ.ಎನ್. ಮಲ್ಲೇಶ್ ವಹಿಸಿದ್ದರು. ಟ್ರಸ್ಟಿ ಆನಂದಗೌಡ ಪಾಟೀಲ್ ಇದ್ದರು. ಶಿಬಿರದಲ್ಲಿ 400 ಕ್ಕೂ ಹೆಚ್ಚು ಹೆಣ್ಣು ಮಕ್ಕಳು ಲಸಿಕೆ ಪಡೆದುಕೊಂಡರು. ಅವರ ಪಾಲಕರು ತಪಾಸಣೆ ಮಾಡಿಸಿಕೊಂಡರು. ಕೋ-ಆರ್ಡಿನೇಟರ್ ನಾಜಿಯಾ ಸೈಯದ್ ಸ್ವಾಗತಿಸಿದರು. ಶಿಕ್ಷಕಿ ಪ್ರತಿಮಾ ವಂದಿಸಿದರು. ಕೋ ಆರ್ಡಿನೇಟರುಗಳಾದ ಗಾಯತ್ರಿ, ಮೇಘಾ, ವಿಕಾಸ್ ಹಾಗೂ ಸಿಬ್ಬಂದಿ ಶಿಬಿರವನ್ನು ಯಶಸ್ವಿಯಾಗಿ ನಡೆಸಿಕೊಟ್ಟರು.
