ದಾವಣಗೆರೆ : ಚಿತ್ರಕಲೆ ಭಾವನೆಗಳನ್ನು ಉದ್ದೀಪಿಸುತ್ತದೆ. ಅದು ಕರಗತವಾಗಲು ಸತತ ಪರಿಶ್ರಮ, ತಾಳ್ಮೆ ಬೇಕು ಎಂದು ಕರ್ನಾಟಕ ರಾಜ್ಯ ವಿಶ್ವ ವಿದ್ಯಾಲಯಗಳ ಮತ್ತು ಕಾಲೇಜು ಅಧ್ಯಾಪಕರ ಒಕ್ಕೂಟದ ಮಾಜಿ ಅಧ್ಯಕ್ಷ ಸಿ.ಎಚ್. ಮುರಿಗೇಂದ್ರಪ್ಪ ಹೇಳಿದರು. ನಗರದ ದೃಶ್ಯಕಲಾ ಮಹಾವಿದ್ಯಾಲಯದ ದೃಶ್ಯ ವಿಶ್ವ ಕಲಾ ಗ್ಯಾಲರಿಯಲ್ಲಿ ಇತ್ತೀಚೆಗೆ ಏಕ ವ್ಯಕ್ತಿ ಕಲಾ ಪ್ರದರ್ಶನ ಮತ್ತು ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು. ಚಿತ್ರ ಕಲಾವಿದರು ಬೆಳೆಯಲು ಅವರಲ್ಲಿ ಇಂದಿನ ಕಾಲಮಾನಕ್ಕೆ ತಕ್ಕಂತೆ ಮಾರುಕಟ್ಟೆ ಸೃಜಿಸಿಕೊಳ್ಳಬಲ್ಲ ಸೃಜನಶೀಲತೆ, ಕಲಾ ಮೌಲ್ಯ, ತಾಂತ್ರಿಕ ಪ್ರಬುದ್ಧತೆ ಇರಬೇಕು. ಇಂತಹ ಕಲಾ ಪ್ರದರ್ಶನ ಮತ್ತು ಕಾರ್ಯಾಗಾರ ವಿದ್ಯಾರ್ಥಿಗಳ ಕಲಾ ಜ್ಞಾನ ವೃದ್ಧಿಗೆ ಎಂದರು. ಲೇಖಕ ಬಾ.ಮ. ಬಸವರಾಜಯ್ಯ ಮಾತನಾಡಿ, ಇಲ್ಲಿ ಪ್ರದರ್ಶನಗೊಳ್ಳುತ್ತಿರುವ ಪ್ರತಿಯೊಂದು ಕಲಾ ರಚನೆಯೂ ಸೂಕ್ಷ್ಮ ನಿರ್ವಹಣೆ, ಸೊಬಗಿನ ಶೇಡ್ ಮತ್ತು ಲೈಟ್ ಆಯೋಜನೆ ಮೂಲಕ ಬಹಳ ಆಪ್ಯಾಯಮಾನವೆನಿಸುತ್ತವೆ. ಇತ್ತೀಚಿನ ವರ್ಷಗಳಲ್ಲಿ ಈ ಮಹಾವಿದ್ಯಾಲಯದಲ್ಲಿ ನಿರಂತರವಾಗಿ ಕಲಾ ಕಾರ್ಯಕ್ರಮ ನಡೆಯುತ್ತಿದ್ದು ಇದರಿಂದ ಕಾಲೇಜಿನ ವರ್ಚಸ್ಸು ಹೆಚ್ಚಾಗಿದೆ ಎಂದು ಹೇಳಿದರು. ದೃಶ್ಯ ಕಲಾ ಕಾಲೇಜಿನ ಪ್ರಾಚಾರ್ಯ ಡಾ.ಜೈರಾಜ ಚಿಕ್ಕ ಪಾಟೀಲ್ ಮಾತನಾಡಿದರು. ಈ ಸಂದರ್ಭದಲ್ಲಿ ಏಕವ್ಯಕ್ತಿ ಕಲಾ ಪ್ರದರ್ಶನ ಮತ್ತು ಕಾರ್ಯಾಗಾರ ನಡೆಸಿಕೊಡುವ ಕಲಾವಿದರಾದ ಎಸ್.ಎಂ. ಲೋಹಾರ್, ಎಸ್.ಕೆ. ಪತ್ತಾರ, ಬಾಬು ಜತ್ತಕರ್, ಭೀಮರಾವ್ ಕೆ.ಬಡಿಗೇರ್ ಅವರು ತಮ್ಮ ಅನಿಸಿಕೆ ಹಂಚಿಕೊಂಡರು. ಸಹಾಯಕ ಪ್ರಾಧ್ಯಾಪಕ ಡಾ.ಸತೀಶ್ ಕುಮಾರ್ ಪಿ. ವಲ್ಲೇಪುರೆ ಸ್ವಾಗತಿಸಿದರು. ಶಾರದಾ ಜಾವಗಲ್ ಪ್ರಾರ್ಥಿಸಿದರು. ಬೋಧನಾ ಸಹಾಯಕ ದತ್ತಾತ್ರೇಯ ಎನ್. ಭಟ್ಟ ವಂದಿಸಿದರು. ಸುಭಾಷ್ ಕುಂಬಾರ ಕಾರ್ಯಕ್ರಮ ನಿರೂಪಿಸಿದರು. ನಿವೃತ್ತ ಪ್ರಾಚಾರ್ಯ ಡಾ.ರವೀಂದ್ರ ಕಮ್ಮಾರ, ಎಲ್.ಕೆ. ಹನುಮಂತಾಚಾರ್, ಚಂದ್ರಶೇಖರ್ ಸಂಗಾ, ಚಂದ್ರಶೇಖರ್ ತೆಗ್ಗಿನಮಠ, ಸಂತೋಷ ಕುಲಕರ್ಣಿ, ಸುರೇಶ್ ಡಿ. ಎಚ್, ಶಿವಶಂಕರ್ ಸುತಾರ್, ರಂಗನಾಥ್ ಕುಲಕರ್ಣಿ, ದರ್ಶನ್ ಚಕ್ರಸಾಲಿ, ಕೆ.ವಿ. ಪ್ರಮೋದ, ಅರುಣ್ ಕಮ್ಮಾರ, ನಂದಕುಮಾರ್, ಶಿವಕುಮಾರ್ ಇದ್ದರು.
