ದಾವಣಗೆರೆ : ಮುಂಗಾರು ಹಂಗಾಮು ಆರಂಭವಾಗಲಿದ್ದು ಕೃಷಿ ಪರಿಕರ ಮಾರಾಟಗಾರರು ಇಲಾಖೆಯೊಂದಿಗೆ ಕೈಜೋಡಿಸಿ ರೈತರಿಗೆ ಸೇವೆ ಒದಗಿಸಬೇಕು ಎಂದು ಇಲಾಖೆಯ ಉಪ ನಿರ್ದೇಶಕ ಅಶೋಕ್ ಹೇಳಿದರು. ನಗರದ ಕೃಷಿ ತಂತ್ರಜ್ಞರ ಸಂಸ್ಥೆಯಲ್ಲಿ ಗುರುವಾರ, ತಾಲೂಕಿನ ಕೃಷಿ ಪರಿಕರ ಮಾರಾಟಗಾರರಿಗೆ ‘ಮುಂಗಾರು ಹಂಗಾಮಿನಲ್ಲಿ ರಸಗೊಬ್ಬರ, ಕೀಟನಾಶಕ ಹಾಗೂ ಬಿತ್ತನೆ ಬೀಜಗಳ ಸಮರ್ಪಕ ದಾಸ್ತಾನು ಹಾಗೂ ವಿತರಣೆ’ ಕುರಿತು ಏರ್ಪಡಿಸಿದ್ದ ತರಬೇತಿ ಕಾರ್ಯಾಗಾರದಲ್ಲಿ ಮಾತನಾಡಿದರು. ಕೃಷಿ ಪರಿಕರ ಮಾರಾಟಗಾರರು ಇಲಾಖೆ ಮತ್ತು ರೈತರ ನಡುವಿನ ಕೊಂಡಿಯಾಗಿದ್ದು ಉತ್ಪಾದಕತೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ. ಗುಣಮಟ್ಟದ ಬೀಜ, ಗೊಬ್ಬರ, ಕೀಟನಾಶಕಗಳನ್ನು ಒದಗಿಸುವ ಮೂಲಕ ಸಹಕಾರ ನೀಡಬೇಕು ಎಂದು ತಿಳಿಸಿದರು. ಪರಿಕರ ಮಾರಾಟಗಾರರು ದಾಖಲಾತಿಗಳನ್ನು ಸರಿಯಾಗಿ ನಿರ್ವಹಣೆ ಮಾಡಬೇಕು. ಇಲ್ಲದಿದ್ದರೆ ಕಾನೂನಾತ್ಮಕವಾಗಿ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ದಾಸ್ತಾನು ನಿರ್ವಹಣೆಯನ್ನು ಅಚ್ಚುಕಟ್ಟಾಗಿ ಮಾಡಬೇಕು. ಪರಿಕರಗಳನ್ನು ಅಧಿಕೃತ ಸ್ಥಳಗಳಲ್ಲೇ ಖರೀದಿಸಬೇಕು ಎಂದು ಹೇಳಿದರು. ಕೃಷಿ ಜಾಗೃತ ದಳದ ಅಧಿಕಾರಿಗಳಾದ ಗೋವರ್ಧನ್, ಶ್ರೀನಿವಾಸುಲು, ಕೃಷಿ ಪರಿಕರ ಮಾರಾಟಗಾರರ ಸಂಘದ ತಾಲೂಕು ಅಧ್ಯಕ್ಷ ಮಂಜುನಾಥ್, ವಾಸವಿ ಶೆಟ್ಟರ್, ಬಾಳೇಹೊಲ ಕಿರಣ್, ಸೋಮಶೇಖರ್ ಇದ್ದರು. ಇದೇ ವೇಳೆ ಸಂಯುಕ್ತ ರಸಗೊಬ್ಬರ ಬಳಸುವ ಬಗ್ಗೆ ರೈತರಿಗೆ ಸಲಹೆ ನೀಡುವ ಕರಪತ್ರವನ್ನು ಬಿಡುಗಡೆ ಮಾಡಲಾಯಿತು.
