ಪುತ್ತಿಗೆ ಸುಗುಣೇಂದ್ರ ತೀರ್ಥ ಶ್ರೀಪಾದರ ಆಶಯ
ದಾಸವರೇಣ್ಯ ಶ್ರೀ ವಿಜಯ ದಾಸರು ಸಿನಿಮಾ ಪ್ರದರ್ಶನ
ವಿಜಯವಾಣಿ ಸುದ್ದಿಜಾಲ ಉಡುಪಿ
ದಾಸ ಸಾಹಿತ್ಯದ ಮೂಲಕ ಭಕ್ತರಿಗೆ ದೇವರನ್ನು ಸಂದರ್ಶಿಸುವ ಸುಲಭ ಮಾರ್ಗ ತೋರಿದ್ದ ಹಾಗೂ ಅತ್ಯಂತ ಕ್ಲಿಷ್ಟಕರ ಸಂದರ್ಭದಲ್ಲಿ ಧರ್ಮ, ಸಂಸ್ಕೃತಿ ರಕ್ಷಿಸುವಲ್ಲಿ ಮಹತ್ತರ ಕೊಡುಗೆ ನೀಡಿದ ದಾಸರ ಶ್ರೇಷ್ಠತೆ ಜಗದಗಲ ಪಸರಿಸಲಿ. ಆ ನಿಟ್ಟಿನಲ್ಲಿ ನಾಡಿಗೆ, ಧರ್ಮಕ್ಕೆ ವಿಜಯದಾಸರ ಕೊಡುಗೆ ಹಾಗೂ ಮಹತ್ವ ತಿಳಿಸುವ ಸಿನಿಮಾ ನಿರ್ಮಿಸಿರುವುದು ನಿಜಕ್ಕೂ ಉತ್ತಮ ಕಾರ್ಯ ಎಂದು ಪರ್ಯಾಯ ಸುಗುಣೇಂದ್ರ ತೀರ್ಥ ಶ್ರೀಪಾದರು ಮೆಚ್ಚುಗೆ ವ್ಯಕ್ತಪಡಿಸಿದರು.
ಉಡುಪಿಯ ರಾಜಾಂಗಣದಲ್ಲಿ ಪರ್ಯಾಯ ಪುತ್ತಿಗೆ ಮಠದ ಸಹಕಾರದಲ್ಲಿ ಸೋಮವಾರ ರಾತ್ರಿ ಆಯೋಜಿಸಿದ್ದ ಎಸ್.ಪಿ.ಜೆ. ಮೂವೀಸ್ನ ಹಾಗೂ ರಾಯಚೂರಿನ ತ್ರಿವಿಕ್ರಮ ಜೋಶಿ ನಟನೆ ಹಾಗೂ ನಿರ್ಮಾಣದ ದಾಸವರೇಣ್ಯ ಶ್ರೀ ವಿಜಯ ದಾಸರು ಸಿನಿಮಾ ಪ್ರದರ್ಶನಕ್ಕೆ ಚಾಲನೆ ನೀಡಿ ಆಶೀರ್ವಚನ ನೀಡಿದರು.
ದಾಸರ ಚಿತ್ರ ನಿರ್ಮಾಣ ಶ್ರೇಷ್ಠ ಕಾರ್ಯ
ಉಡುಪಿಯ ಶ್ರೀಕೃಷ್ಣನ ಸನ್ನಿಧಾನದಲ್ಲಿ ವಿಜಯದಾಸರ ಕುರಿತ ಸಿನಿಮಾ ಪ್ರದರ್ಶನ ಆಗುತ್ತಿರುವುದು ಶ್ರೇಷ್ಠಕರವಾದುದು. ಇಲ್ಲಿಗೆ ಹಿಂದಿನ ಎಲ್ಲ ದಾಸರೂ ಭೇಟಿ ನೀಡಿದ್ದಾರೆ. ಇಂತಹ ಪುಣ್ಯದ ನೆಲದಲ್ಲಿ ವಿಜಯದಾಸರ ಚರಿತ್ರೆ ಅನಾವರಣ ಆಗಿದೆ. ಭಕ್ತರಿಗೆ ಬಲು ಸುಲಭದಲ್ಲಿ ಉಡುಪಿ ಕೃಷ್ಣ ಒಲಿಯುತ್ತಾನೆ. ಕನಕದಾಸರ ಪ್ರಾರ್ಥನೆಗೆ ಸ್ವಯಂ ಪ್ರತ್ಯಕ್ಷನಾಗಿ ದರ್ಶನ ಭಾಗ್ಯ ಕರುಣಿಸಿದ ಪ್ರಸನ್ನ ಕೃಷ್ಣನೀತ. ವಿಜಯದಾಸರಿಗೂ ನೆಚ್ಚಿನ ತಾಣವಾಗಿದ್ದ ಉಡುಪಿಯಲ್ಲಿ ಅವರ ಚರಿತ್ರೆ ತಿಳಿಸುವ ಸಿನಿಮಾದ ಮೊದಲ ಪ್ರದರ್ಶನ ಇಲ್ಲಿ ನಡೆದಿರುವುದು ಅರ್ಥಪೂರ್ಣವಾಗಿದೆ ಎಂದರು.
ಪುತ್ತಿಗೆ ಕಿರಿಯ ಶಿಷ್ಯ ಸುಶ್ರೀಂದ್ರ ತೀರ್ಥ ಶ್ರೀಪಾದರು ಸಾನ್ನಿಧ್ಯ ವಹಿಸಿದ್ದರು. ತ್ರಿವಿಕ್ರಮ ಜೋಶಿ, ಫಣಿರಾಜ್ ಸಾರಂಗಂ, ಉಮಾ ಫಣಿರಾಜ್, ಮಠದ ಅಂತಾರಾಷ್ಟ್ರೀಯ ಕಾರ್ಯದರ್ಶಿ ಪ್ರಸನ್ನ ಆಚಾರ್ಯ ಉಪಸ್ಥಿತರಿದ್ದರು.
ಮಠದ ಸಾಂಸ್ಕೃತಿಕ ಕಾರ್ಯಕ್ರಮಗಳ ಸಂಚಾಲಕ ರಮೇಶ್ ಭಟ್ ಸಹಕರಿಸಿದರು. ಸುಗುಣಮಾಲಾ ಪತ್ರಿಕೆಯ ಸಂಪಾದಕ ಮಹಿತೋಷ್ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು. ಸಭಾ ಕಾರ್ಯಕ್ರಮದ ಬಳಿಕ ಪರ್ಯಾಯ ಶ್ರೀಗಳು ಹಾಗೂ ನೂರಾರು ಜನರು ದಾಸವರೇಣ್ಯ ಶ್ರೀ ವಿಜಯ ದಾಸರು ಸಿನಿಮಾ ವೀಕ್ಷಿಸಿ, ಮೆಚ್ಚುಗೆ ವ್ಯಕ್ತಪಡಿಸಿದರು.
ಈ ಸಿನಿಮಾದಲ್ಲಿ ನಟನೆ-ಖ್ಯಾತ ನಟರಿಗಿಂತ ಹೆಚ್ಚಾಗಿ ಮೌಲ್ಯಗಳಿಗೆ ಪ್ರಧಾನ್ಯತೆ ನೀಡಿದ್ದೇವೆ. ಇಂದಿನ ಹೊಡಿ-ಬಡಿ ಕಥಾ ಹಂದರದ ಸಿನಿಮಾಗಳಿಗೇ ಜನ ಹೆಚ್ಚು ಆಕರ್ಷಿತರಾಗಿರುವ ಸಂದರ್ಭದಲ್ಲಿ ಚರಿತ್ರೆಯ ಈ ಕಥೆ ಇಷ್ಟವಾಗದೇ ಇರಬಹುದು. ಆದರೆ, ಭಕ್ತಿ ಸಾಹಿತ್ಯಕ್ಕೆ ದಾಸರ ಕೊಡುಗೆ, ನಾಡಿನ ಸಂಸ್ಕೃತಿ ಎತ್ತಿ ಹಿಡಿದ ರೀತಿ ಇಂದಿನ ಹಾಗೂ ಮುಂದಿನ ಪೀಳಿಗೆಗೆ ದಾಖಲಾರ್ಹವಾಗಿ ಇರಬೇಕೆಂಬ ಸದಿಚ್ಛೆಯಿಂದ ಸಿನಿಮಾ ಮಾಡಿದ್ದೇವೆ. ಉಡುಪಿಯ ಶ್ರೀಕೃಷ್ಣನ ಸನ್ನಿಧಿಯಲ್ಲಿ ವಿಜಯದಾಸರ ಚರಿತ್ರೆ ಸಾರುವ ಸಿನಿಮಾ ಪ್ರದರ್ಶನ ಮಾಡಿರುವುದು ಸಾರ್ಥಕತೆ ತಂದಿದೆ.
| ತ್ರಿವಿಕ್ರಮ ಜೋಶಿ. ಚಿತ್ರದ ನಟ, ನಿರ್ಮಾಪಕ