| ಕೀರ್ತಿನಾರಾಯಣ ಸಿ. ಬೆಂಗಳೂರು
ರಾಜ್ಯದ ಗ್ರಾಮೀಣ ಪ್ರದೇಶಗಳಲ್ಲಿ ಮೈಕ್ರೋ ಫೈನಾನ್ಸ್ ಕಂಪನಿಗಳ ಹಾವಳಿ ಮಿತಿಮೀರಿದೆ. ಯಾವುದೇ ಭದ್ರತೆ ಇಲ್ಲದೆ ಕರೆದು ಕೊಡುವ ಸಾಲಕ್ಕೆ ಕೈಯೊಡ್ಡುವ ಬಡವರು, ಕೂಲಿ ಕಾರ್ವಿುಕರು ಬಳಿಕ ಅಕ್ರಮ ಬಡ್ಡಿ ದಂಧೆಯ ಕಿರುಕುಳ, ದೌರ್ಜನ್ಯ ಸಹಿಸಲಾಗದೆ ಊರನ್ನೇ ತೊರೆದು ಹೋಗುತ್ತಿರುವ ಪ್ರಕರಣಗಳು ರಾಷ್ಟ್ರಮಟ್ಟದಲ್ಲಿ ಸದ್ದು ಮಾಡಿವೆ. ಈ ಬೆಳವಣಿಗೆ ಬೆನ್ನಲ್ಲೇ, ಫೈನಾನ್ಸ್ ಕಂಪನಿಗಳ ದಾಖಲೆ ಪರಿಶೀಲಿಸಿ ಕಾನೂನು ರೀತಿ ಕ್ರಮ ತೆಗೆದುಕೊಳ್ಳುವಂತೆ ರಾಜ್ಯದ ಎಲ್ಲ ಪೊಲೀಸ್ ಠಾಣೆಗಳಿಗೆ ಸೂಚನೆ ಹೋಗಿದೆ. ಜತೆಗೆ ಸಾಲ ಮರುಪಾವತಿಸುವಂತೆ ಕಂಪನಿಗಳ ಪರವಾಗಿ ಜನರ ಮೇಲೆ ಒತ್ತಾಯ ಹೇರಬಾರದೆಂದು ಪೊಲೀಸರಿಗೆ ಖಡಕ್ ಎಚ್ಚರಿಕೆ ಕೂಡ ನೀಡಲಾಗಿದೆ.
ಏನಿದು ಬಡ್ಡಿ ದಂಧೆ?
ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಅನುಮತಿ ಇಲ್ಲದೆ ರಾಜ್ಯದ ಗ್ರಾಮೀಣ ಪ್ರದೇಶಗಳಲ್ಲಿ ಅಕ್ರಮ ಬಡ್ಡಿ ದಂಧೆ ನಡೆಸಲಾಗುತ್ತಿದೆ. ಆರ್ಥಿಕವಾಗಿ ಹಿಂದುಳಿದವರಿಗೆ ನಗದು ರೂಪದಲ್ಲಿ ನೂರಾರು ಕೋಟಿ ಸಾಲವನ್ನು ವಾರ, ತಿಂಗಳು ಲೆಕ್ಕದಲ್ಲಿ ಬಡ್ಡಿಗೆ ಕೊಡಲಾಗಿದೆ. ಕೆಲವೆಡೆ ರಾಷ್ಟ್ರೀಕೃತ ಬ್ಯಾಂಕ್ ಮುಖಾಂತರ ಗ್ರಾಮದ ಅಭಿವೃದ್ಧಿಗೆ ಕಡಿಮೆ ಬಡ್ಡಿ ದರದಲ್ಲಿ ಹಣ ನೀಡಲಾಗುತ್ತಿದೆ ಎಂದು ಸಂಘಗಳನ್ನು ರಚಿಸಿಕೊಂಡು ದಂಧೆ ನಡೆಸಲಾಗುತ್ತಿದೆ.
ಪ್ರಶ್ನಿಸಿದರೆ ದಾಂಧಲೆ: ಸರ್ಕಾರದ ಅನುಮತಿ
ಬ್ಯಾಂಕ್ ದಾಖಲೆಗಳ ಕುರಿತು ಪ್ರಶ್ನಿಸಿದವರ ಮೇಲೆ ಫೈನಾನ್ಸ್ ಸಂಸ್ಥೆಗಳ ಸಿಬ್ಬಂದಿ ಅವಾಚ್ಯ ಶಬ್ದಗಳಲ್ಲಿ ನಿಂದಿಸುತ್ತಾರೆ. ಕೆಲವೆಡೆ ಮನೆಗಳಿಗೆ ನುಗ್ಗಿ ದಾಂಧಲೆ ನಡೆಸಿರುವ ಸಂಬಂಧ ಹಲವು ಪೊಲೀಸ್ ಠಾಣೆಗಳಲ್ಲಿ ದೂರುಗಳು ದಾಖಲಾಗಿವೆ. ಆದರೆ, ಪೊಲೀಸರು ದಾಖಲೆ ಪರಿಶೀಲಿಸಿ ಕ್ರಮ ಕೈಗೊಳ್ಳುವ ಬದಲು ಫೈನಾನ್ಸ್ ಸಂಸ್ಥೆಗಳೊಂದಿಗೆ ಕೈಜೋಡಿಸಿರುವ ಆರೋಪ ಕೇಳಿಬಂದಿದೆ.
ಮುಖ್ಯಕಾರ್ಯದರ್ಶಿಗೆ ದೂರು
ಪೊಲೀಸರು ದಂಧೆಕೋರರಿಗೆ ಸಹಕಾರ ನೀಡುತ್ತಿದ್ದಾರೆಂದು ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ದೂರುಗಳು ಸಲ್ಲಿಕೆಯಾಗಿವೆ. ಇದನ್ನು ಗಂಭೀರವಾಗಿ ಪರಿಗಣಿಸಿರುವ ಸರ್ಕಾರ, ಒಳಾಡಳಿತ ಇಲಾಖೆ ಪ್ರಧಾನ ಕಾರ್ಯದರ್ಶಿ ಮೂಲಕ ರಾಜ್ಯ ಪೊಲೀಸ್ ಮಹಾನಿರ್ದೇಶಕ (ಡಿಜಿ-ಐಜಿಪಿ) ಡಾ.ಅಲೋಕ್ ಮೋಹನ್ಗೆ ಪತ್ರ ಬರೆದು ಕಾನೂನು ಕ್ರಮಕ್ಕೆ ಸೂಚನೆ ನೀಡಿದೆ.
ಬಡ್ಡಿ ದಂಧೆ ಹೇಗೆ?
- 50 ಸಾವಿರ ರೂ.ನಿಂದ 5 ಲಕ್ಷ ರೂ.ವರೆಗೆ ಕಿರುಸಾಲ ನೀಡಿಕೆ
- ಶೇ.20-25 ಬಡ್ಡಿಯಂತೆ ವಾರ, ತಿಂಗಳ ರೂಪದಲ್ಲಿ ವಿತರಣೆ
- ಆಧಾರ್ ಕಾರ್ಡ್ ನಕಲು ಪ್ರತಿ ಪಡೆದು ಯಾವುದೇ ಭದ್ರತೆ ಇಲ್ಲದೆ ಸಾಲ
- ಸುಲಭವಾಗಿ ಸಾಲ ಸಿಗುತ್ತದೆಯೆಂದು ಹಣ ಪಡೆಯುತ್ತಿರುವ ಜನರು
- ಬಡ್ಡಿ ಪಾವತಿಸುವುದು ಒಂದು ದಿನ ತಡವಾದರೂ ಕಿರುಕುಳ ಆರಂಭ
- ಕೆಲವೆಡೆ ಹಣ ಪಾವತಿಸದವರ ಮನೆ ಮುಂದೆ ಬೋರ್ಡ್ ಪ್ರತ್ಯಕ್ಷ
- ಮಾನಕ್ಕೆ ಅಂಜಿ ಮನೆ, ಗ್ರಾಮ ತೊರೆಯುತ್ತಿರುವ ಹಳ್ಳಿಗರು
10 ಲಕ್ಷಕ್ಕೆ 2.5 ಲಕ್ಷ ಬಡ್ಡಿ!
ಕೆಲ ಜಿಲ್ಲೆಗಳಲ್ಲಿ ಗೃಹಸಾಲದ ಹೆಸರಲ್ಲೂ ಲೋನ್ ಕೊಡಿಸಿ ಕಿರುಕುಳ ಕೊಡಲಾಗುತ್ತಿದೆ. 10 ಲಕ್ಷ ರೂ. ಸಾಲ ಕೊಡಿಸಿದರೆ ಆರಂಭದಲ್ಲೇ 2.50 ಲಕ್ಷ ರೂ. ಮುರಿದುಕೊಂಡು 7.50 ಲಕ್ಷ ರೂ. ಕೊಡಲಾಗುತ್ತದೆ. ಆದರೆ, ಸಾಲ ಪಡೆದ ವ್ಯಕ್ತಿ ನಿರ್ದಿಷ್ಟ ಸಮಯಕ್ಕೆ ಕಂತುಗಳ ರೂಪದಲ್ಲಿ 10 ಲಕ್ಷ ರೂ. ಮರುಪಾವತಿಸಬೇಕು. ಇಲ್ಲದಿದ್ದರೆ ಕಿರುಕುಳ ನೀಡಲಾಗುತ್ತದೆ. ಏಜೆನ್ಸಿಗಳ ಹೆಸರಲ್ಲಿ ಬ್ಯಾಂಕ್ಗಳಿಂದ ಸಾಲ ಕೊಡಿಸಿ ಕಿರುಕುಳ ನೀಡಲಾಗುತ್ತಿದೆ ಎಂದು ನೊಂದವರು ಅಳಲು ತೋಡಿಕೊಂಡಿದ್ದಾರೆ.
ಎಲ್ಲೆಲ್ಲಿ ನಡೆಯುತ್ತಿದೆ ದಂಧೆ?
ಚಾಮರಾಜನಗರ, ರಾಮನಗರ, ಕನಕಪುರ, ನಂಜನಗೂಡು ಮತ್ತು ವರುಣಾ ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಮೈಕ್ರೋ ಫೈನಾನ್ಸ್ ಕಂಪನಿಗಳ ಕಿರುಕುಳದಿಂದಾಗಿ ಹಲವು ಕುಟುಂಬಗಳು ಊರು ತೊರೆದಿವೆ. ಹುಲ್ಲಹಳ್ಳಿ, ರಾಂಪುರ, ಕುರಿಹುಂಡಿ, ಶಿರಮಳ್ಳಿ, ಕಗ್ಗಲೂರು, ಮಾದಾಪುರ, ಹೆಗ್ಗಡಹಳ್ಳಿ, ಮುದ್ದಹಳ್ಳಿ, ಗೋಳೂರು ಸೇರಿ ಹಲವು ಗ್ರಾಮಗಳಲ್ಲಿನ ಜನರು ಫೈನಾನ್ಸ್ ನವರ ಕಾಟಕ್ಕೆ ಬೇಸತ್ತು ಗುಳೆ ಹೊರಟಿದ್ದಾರೆ.
ಸ್ಟಾರ್ ನಟಿಯರಿಗೆ ಡಬ್ ಮಾಡೋದು ಯುವತಿ ಅಲ್ಲ ಯುವಕ! ಸೌತ್ ಬ್ಯೂಟಿಗಳ ಧ್ವನಿ ಹಿಂದಿದೆ ಈತನ ಜಾದು | Dubbing Artist