ಅಕ್ಕಿಆಲೂರ: ಸಮೀಪದ ಕೂಸನೂರ ಗ್ರಾಮದ ಗ್ರಾಮದೇವಿ ನೂತನ ಶಿಲಾಕಟ್ಟಡ ಲೋಕಾರ್ಪಣೆ ಹಾಗೂ ಕಳಸಾರೋಹಣ ಸಮಾರಂಭದ ಪ್ರಯುಕ್ತ ಗುರುವಾರ ಗಂಗಾಪೂಜೆ, ಮಹಿಳೆಯರ ಪೂರ್ಣಕುಂಭ ಮೆರವಣಿಗೆ ಅದ್ದೂರಿಯಾಗಿ ಜರುಗಿತು.
ಹುಬ್ಬಳ್ಳಿ ಮೂರುಸಾವಿರ ಮಠದ ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿ ನೇತೃತ್ವದಲ್ಲಿ ಗ್ರಾಮದ ಹೊಸಪೇಟೆಯ ವರದಾನದಿಯಲ್ಲಿ ಗಂಗಾ ಪೂಜೆ ನೆರವೇರಿಸಲಾಯಿತು.
ಪೂರ್ಣಕುಂಭ ಮೆರವಣಿಗೆಯಲ್ಲಿ 500ಕ್ಕೂ ಹೆಚ್ಚು ಮಹಿಳೆಯವರು ಕುಂಭ ಹೊತ್ತು ಸಾಗಿದರು. ಹೊಸಪೇಟೆಯಿಂದ ಆರಂಭಗೊಂಡ ಮೆರವಣಿಗೆ ಬಸವೇಶ್ವರ ರಸ್ತೆ, ಬನ್ನಿಗಟ್ಟಿ, ಬಸ್ ನಿಲ್ದಾಣ ಮಾರ್ಗವಾಗಿ ವೀರಭದ್ರೇಶ್ವರ ದೇವಸ್ಥಾನದಿಂದ ಗ್ರಾಮದೇವಸ್ಥಾನದ ವರೆಗೆ ಸಾಗಿ ಸಂಪನ್ನಗೊಂಡಿತು. ವೀರಗಾಸೆ, ಡೊಳ್ಳು, ಭಜನೆ, ಜನಪದ ವೈಭವಗಳು ಮೆರವಣಿಗೆಯ ಪ್ರಮುಖ ಆಕರ್ಷಣೆಯಾಗಿದ್ದವು. ಕೂಸನೂರ ಶಾಲಾ, ಕಾಲೇಜಿನ ನೂರಾರು ವಿದ್ಯಾರ್ಥಿಗಳು ನವದುರ್ಗೆಯರ ವೇಷ ತೊಟ್ಟು ತೆರದ ವಾಹನದಲ್ಲಿ ಎಲ್ಲರ ಗಮನ ಸೆಳೆದರು. ಮೆರವಣಿಗೆ ಸಾಗಿದ ದಾರಿಯುದ್ದಕ್ಕೂ ಜನತೆ ತಳಿರು-ತೋರುಣಗಳಿಂದ ಬೀದಿಗಳನ್ನು ಶೃಂಗರಿಸಿದ್ದರು. ಯುವಕರು ದ್ವಾಮವ್ವ ದೇವಿಯ ಮಹಾತ್ಮೆಯುಳ್ಳ ಘೊಷಣೆ ಮೊಳಗಿಸಿದರು.
ಮೆರವಣಿಗೆಗೆ ಚಾಲನೆ ನೀಡಿದ ಹುಬ್ಬಳ್ಳಿ ಮೂರುಸಾವಿರ ಮಠದ ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿ ಮಾತನಾಡಿ, ಭಗವಂತ ಸರ್ವವ್ಯಾಪಿ, ಜಗತ್ತಿಗೆ ಪಂಚಭೂತ ನೀಡಿರುವ ದೇವರು, ಜಗತ್ತಿನಿಂದ ಏನನ್ನೂ ಬಯಸುವುದಿಲ್ಲ. ನಡೆದು ನುಡಿದ ಶರಣರು ಕಾಲ್ಪನಿಕವಲ್ಲ. ಹಸಿದವರಿಗೆ ಅನ್ನ ನೀಡಿದ ಗುಡ್ಡಾಪುರ ದಾನಮ್ಮ ದೇವಿಯ ಜೀವನ ಭಾರತದ ಧಾರ್ವಿುಕ ಇತಿಹಾಸಕ್ಕೆ ಹೊಸದೊಂದು ಕೊಡುಗೆ. ಗ್ರಾಮೀಣ ಪ್ರದೇಶದಲ್ಲಿ ಅದ್ದೂರಿ ಸಮಾರಂಭ ಆಯೋಜಿಸಿರುವ ಕೂಸನೂರ ಗ್ರಾಮಸ್ಥರ ಕಾರ್ಯ ಶ್ಲಾಘನೀಯ ಎಂದು ಹೇಳಿದರು. ಗ್ರಾಮದೇವಿ ದೇವಸ್ಥಾನ ಸೇವಾ ಟ್ರಸ್ಟ್ ಪದಾಧಿಕಾರಿಗಳು, ಎಲ್ಲ ಸಂಘಟನೆಗಳ ಕಾರ್ಯಕರ್ತರು ಉಪಸ್ಥಿತರಿದ್ದರು.
ಸಮಾರಂಭದಲ್ಲಿಂದು
ಕೊನೆ ದಿನವಾದ ಫೆ. 7ರಂದು ಬೆಳಗ್ಗೆ 5 ಗಂಟೆಗೆ ಗ್ರಾಮದೇವಿ(ದ್ವಾಮವ್ವದೇವಿ) ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಜರುಗಲಿದೆ. ನಂತರ ಶಿರಸಿಯ ವಿನಾಯಕ ಭಟ್ ನೇತೃತ್ವದ ಪುರೋಹಿತ ವರ್ಗದಿಂದ ಬಿಂದ ಶುದ್ಧಿ, ರತ್ನಾನ್ಯಾಸ, ಪ್ರತಿಷ್ಠಾ, ನೇತ್ರೋನ್ಮಿಲನ, ಕಲಾವೃದ್ಧಿ, ಶಾಂತಿ ಹವನಗಳು ಜರುಗಲಿವೆ. ಬೆಳಗ್ಗೆ 10 ಗಂಟೆಯಿಂದ ಕಳಸಾರೋಹಣ ಕಾರ್ಯಕ್ರಮ ನಡೆಯಲಿದೆ. ಸಂಜೆ 6 ಗಂಟೆಗೆ ಸಮಾರೋಪ ಸಮಾರಂಭದಲ್ಲಿ ನಾಡಿನ ಪರಮ ಪೂಜ್ಯರು, ಗಣ್ಯರು ಪಾಲ್ಗೊಳ್ಳುವರು. ಕೂಸನೂರ ಗ್ರಾಮದ ಶಾಲೆಯ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಗದಗ ಜಿಲ್ಲೆಯ ಅರುಣೋದಯ ಕಲಾ ತಂಡದಿಂದ ಜನಪದ ವೈಭವ ಜರುಗಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.