More

    ಸೈಕ್ಲೋನ್ ಎಫೆಕ್ಟ್: ಇನ್ನೂ 4 ದಿನ ರಾಜ್ಯದ ವಿವಿಧೆಡೆ ಮಳೆ

    ಬೆಂಗಳೂರು: ರಾಜ್ಯದ ಹಲವೆಡೆ ಸುರಿಯುತ್ತಿರುವ ಮಳೆ ಮುಂದಿನ 4 ದಿನ ಮುಂದುವರಿಯಲಿದೆ. ಗುರುವಾರ ರಾಜಧಾನಿ ಬೆಂಗಳೂರು, ಕೋಲಾರದ ಮಾಲೂರು, ಯಾದಗಿರಿಯ ಸೈದಾಪುರ, ಕಲಬುರಗಿಯ ಮುಧೋಳೆ ಹಾಗೂ ಬೀದರ್‌ನ ಹುಲಸೂರು ಸೇರಿ ರಾಜ್ಯದ ಹಲವೆಡೆ ವರುಣಾರ್ಭಟ ಜೋರಾಗಿತ್ತು. ಇದರಿಂದ ಜನಜೀವನ ಅಸ್ತವ್ಯಸ್ತವಾಗಿದೆ. ತಗ್ಗು ಪ್ರದೇಶಗಳಲ್ಲಿ ನೀರು ನುಗ್ಗಿ ಅವಾಂತರ ಸೃಷ್ಟಿಸಿತ್ತು. ಕೆಲವೆಡೆ ಚುನಾವಣಾ ಪ್ರಚಾರಕ್ಕೂ ತೊಂದರೆ ಉಂಟು ಮಾಡಿತು.

    ಇದನ್ನೂ ಓದಿ: ಇನ್ಮುಂದೆ ಎಲ್‌ಕೆಜಿ ಪ್ರವೇಶಕ್ಕೆ 4 ವರ್ಷ ವಯೋಮಿತಿ ನಿಗದಿ; ಪಾಲಕರಿಂದ ವಿರೋಧ

    ಮೇ 7ರಿಂದ ಮುಂದಿನ ಎರಡು ದಿನ ಭಾರಿ ಮಳೆ

    ಚಂಡಮಾರುತ ಪರಿಣಾಮದಿಂದ ಮೇ 7ರಿಂದ ದಕ್ಷಿಣ ಒಳನಾಡು, ಮಲೆನಾಡು ಭಾಗದ ಬಹುತೇಕ ಜಿಲ್ಲೆಗಳಲ್ಲಿ ಮಳೆ ತೀವ್ರಗೊಳ್ಳುವ ಸಾಧ್ಯತೆಯಿದೆ. ಕೊಡಗು, ಮೈಸೂರು, ಚಾಮರಾಜನಗರ ಹಾಗೂ ರಾಮನಗರದಲ್ಲಿ ಮೇ 7ರಿಂದ ಮುಂದಿನ ಎರಡು ದಿನ ಭಾರಿ ಮಳೆ ಸುರಿಯುವುದರಿಂದ ಹವಾಮಾನ ಇಲಾಖೆ ಯೆಲ್ಲೋ ಅಲರ್ಟ್ ಕೊಟ್ಟಿದೆ. ಮೇ 6ರಂದು ಬಂಗಾಳಕೊಲ್ಲಿಯ ಆಗ್ನೇಯ ಭಾಗದಲ್ಲಿ ಚಂಡಮಾರುತ ರೂಪುಗೊಳ್ಳುವ ವಾತಾವರಣ ಸೃಷ್ಟಿಯಾಗಲಿದೆ. ಮೇ 9ರಂದು ಇದು ತೀವ್ರಗೊಳ್ಳಲಿದ್ದು, ನಂತರ ಮಾರುತಗಳು ಮಧ್ಯ ಬಂಗಾಳಕೊಲ್ಲಿಯ ಉತ್ತರ ಭಾಗಕ್ಕೆ ಚಲಿಸಲಿವೆ.

    ಭಾರತೀಯ ಹವಾಮಾನ ಇಲಾಖೆಯಿಂದ ಎಚ್ಚರಿಕೆ

    ಈ ವೇಳೆ ಗಾಳಿ ವೇಗ ಗಂಟೆಗೆ 60 ಕಿ.ಮೀ. ವೇಗದಲ್ಲಿ ಬೀಸುವ ಸಾಧ್ಯತೆ ಇದೆ. ಬಂಗಾಳಕೊಲ್ಲಿ ಹಾಗೂ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ ಅಕ್ಕಪಕ್ಕದ ಪ್ರದೇಶಗಳಲ್ಲಿ ಗಾಳಿ ವೇಗ 50-60 ಕಿ.ಮೀ.ನಿಂದ 70 ಕಿ.ಮೀ.ಗೆ ಕ್ರಮೇಣ ಹೆಚ್ಚಾಗಲಿದೆ. ಇದರಿಂದ ಎತ್ತರದ ಅಲೆಗಳು ಏಳಲಿದೆ. ಮೀನುಗಾರರು, ಸಣ್ಣ ಹಡಗುಗಳು, ದೋಣಿಗಳು ಸಮುದ್ರದಲ್ಲಿ ಇಳಿಯದಂತೆ ಭಾರತೀಯ ಹವಾಮಾನ ಇಲಾಖೆ(ಐಎಂಡಿ) ಎಚ್ಚರಿಕೆ ನೀಡಿದೆ.

    ಇದನ್ನೂ ಓದಿ: ಸಿದ್ದರಾಮಯ್ಯ ಪರ ಪ್ರಚಾರ; ಶಿವರಾಜ್ ಕುಮಾರ್​ಗೆ ಟಾಂಗ್ ಕೊಟ್ಟ ಪ್ರತಾಪ್ ಸಿಂಹ!

    ಭರ್ಜರಿ ವರ್ಷಧಾರೆ

    ಮೇ 7 ರೊಳಗೆ ಸಮುದ್ರದಲ್ಲಿ ತಂಗಿರುವ ಹಡುಗುಗಳು, ದೋಣಿಗಳು ಹಾಗೂ ಮೀನುಗಾರರ ಬೋಟ್‌ಗಳು ವಾಪಸ್ ಬರುವಂತೆ ಸೂಚಿಸಲಾಗಿದೆ. ಮೇ 8ರಿಂದ ಮೇ 11ರವರೆಗೆ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿ ಯಾವುದೇ ರೀತಿಯ ಪ್ರವಾಸೋದ್ಯಮ ಚಟುವಟಿಕೆ ನಡೆಸದಂತೆಯೂ ಎಚ್ಚರಿಕೆ ಕೊಡಲಾಗಿದೆ. ತಮಿಳುನಾಡು, ಪುದುಚೇರಿ, ಕಾರೈಕಲ್ ಹಾಗೂ ದಕ್ಷಿಣ ಕರ್ನಾಟಕ ಭಾಗಗಳಲ್ಲಿ ಭರ್ಜರಿ ವರ್ಷಧಾರೆಯಾಗಲಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts