ಮಂಗಳೂರು: ಯುವತಿಯರ ಸರಣಿ ಹಂತಕ ಸೈನೈಡ್ ಮೋಹನ್ನ 16ನೇ ಪ್ರಕರಣದ ಆರೋಪ ಮಂಗಳೂರಿನ 6ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ಶುಕ್ರವಾರ ಸಾಬೀತಾಗಿದ್ದು, ಶಿಕ್ಷೆ ಪ್ರಮಾಣ ಸೆ.25ರಂದು ಪ್ರಕಟವಾಗುವ ಸಾಧ್ಯತೆ ಇದೆ.
ಅಪರಾಧಿ ಮೋಹನ್ ಮೇಲೆ ಸೆಕ್ಷನ್ ಕೊಲೆ, ಚಿನ್ನಾಭರಣ ಸುಲಿಗೆ, ವಿಷ ಪ್ರಾಶನ, ವಂಚನೆ, ಸಾಕ್ಷ್ಯ ನಾಶ ಅಪರಾಧ ಸಾಬೀತುಪಡಿಸಿ ನ್ಯಾಯಾಲಯ ತೀರ್ಪು ನೀಡಿದೆ.
ಪ್ರಕರಣದ ಹಿನ್ನೆಲೆ: ಮೋಹನ್ 2007ರಲ್ಲಿ ಕಾಸರಗೋಡು ತಾಲೂಕಿನ ಉಪ್ಪಳ ಬಸ್ ತಂಗುದಾಣದಲ್ಲಿ ಬೇಕೂರಿನ 33 ವರ್ಷದ ಯುವತಿಯನ್ನು ಸುಧಾಕರ ಆಚಾರ್ಯ ಎಂಬ ಹೆಸರಿನಲ್ಲಿ ಪರಿಚಯಿಸಿಕೊಂಡಿದ್ದ. ತಾನು ಅರಣ್ಯ ಇಲಾಖೆ ಉದ್ಯೋಗಿ ಎಂದು ಹೇಳಿ ಆಕೆ ಜತೆ ಪ್ರೀತಿಸುವ ನಾಟಕವಾಡಿದ್ದ. ಬಳಿಕ ಆಕೆಯ ಮನೆಗೂ ಒಂದು ಬಾರಿ ಹೋಗಿ ಪಾಲಕರ ವಿಶ್ವಾಸ ಗಳಿಸಿದ್ದ. ಯುವತಿ ಸಂಗೀತ ಶಿಕ್ಷಕಿಯಾಗಿ ತರಬೇತಿ ನೀಡುತ್ತಿದ್ದಲ್ಲದೆ, ಆಡಿಯೋ ರೆಕಾರ್ಡ್ ಮಾಡುತ್ತಿದ್ದಳು. 2017ರ ಮೇ 28ರಂದು ಯುವತಿ ಮಂಗಳೂರಿನಲ್ಲಿ ಆಡಿಯೋ ರೆಕಾರ್ಡ್ ಮಾಡಲಿಕ್ಕಿದೆ ಎಂದು ಹೇಳಿ ಮನೆಯಿಂದ ಹೊರಟಿದ್ದಳು. ಬಳಿಕ ಇಬ್ಬರೂ ಬೆಂಗಳೂರಿಗೆ ತೆರಳಿ ವಸತಿಗೃಹದಲ್ಲಿ ರೂಮು ಪಡೆದುಕೊಂಡಿದ್ದರು. ಲಾಡ್ಜ್ನಲ್ಲಿ ಸುಧಾಕರ ಆಚಾರ್ಯ ಎಂದು ಪರಿಚಯಿಸಿ ರೂಮು ಪಡೆದಿದ್ದ.
ಕೊಲೆಗೆ ಸ್ಕೆಚ್: ಮೇ 29ರಂದು ಬೆಳಗ್ಗೆ ಮೋಹನ ಯುವತಿ ಬಳಿ ‘ನಮಗಿಬ್ಬರಿಗೆ ಪೂಜೆಗೆ ಹೋಗಲಿಕ್ಕಿದೆ, ಪೂಜೆ ಮಾಡುವಾಗ ನಿನ್ನಲ್ಲಿ ಯಾವುದೇ ಆಭರಣ ಇರಬಾರದು. ಆದ್ದರಿಂದ ನಿನ್ನ ಚಿನ್ನಾಭರಣ, ಹಣ ರೂಂನಲ್ಲಿಡು, ನಾವು ಪೂಜೆ ಮಾಡಿ ಹಿಂದಿರುಗಿ ಬರೋಣ’ ಎಂದು ನಂಬಿಸಿದ್ದ. ಇದಾದ ಬಳಿಕ ಇಬ್ಬರೂ ಹೊರಗೆ ಹೋಗಿದ್ದು ಬೆಂಗಳೂರು ಬಸ್ ನಿಲ್ದಾಣದ ಬಳಿ ಯುವತಿಯಲ್ಲಿ ‘ನಿನ್ನೆ ಲೈಂಗಿಕ ಸಂಪರ್ಕ ಮಾಡಿದ ಕಾರಣ ಗರ್ಭಿಣಿಯಾಗದಂತೆ ತಡೆಯಲು ಶೌಚಗೃಹಕ್ಕೆ ಹೋಗಿ ಈ ಮಾತ್ರೆ ಸೇವಿಸು’ ಎಂದು ಸೈನೈಡ್ ನೀಡಿದ್ದ. ಇದನ್ನು ನಂಬಿದ ಯುವತಿ ಮಾತ್ರೆ ಸೇವಿಸಿ ಅಲ್ಲೇ ಕುಸಿದು ಬಿದ್ದಿದ್ದಳು. ಸ್ಥಳೀಯರು ಇದನ್ನು ನೋಡಿ ಯುವತಿಯನ್ನು ಕೂಡಲೇ ಆಸ್ಪತ್ರೆಗೆ ಕೊಂಡೊಯ್ದಗ ಯುವತಿ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದರು. ಯುವತಿ ಬಿದ್ದ ಬಳಿಕ ಮೋಹನ್ ರೂಂಗೆ ತೆರಳಿ ಚಿನ್ನಾಭರಣ ಸಹಿತ ಅಲ್ಲಿಂದ ಪರಾರಿಯಾಗಿದ್ದ. ಬಳಿಕ ಆ ಚಿನ್ನಾಭರಣವನ್ನು ಮಂಗಳೂರು ನಗರಕ್ಕೆ ತಂದು ಮಾರಾಟ ಮಾಡಿದ್ದ.
ಪ್ರಕರಣ ಬಯಲಿಗೆ: ಮನೆಯಿಂದ ಹೊರಗೆ ಹೋದ ಯುವತಿ ಯುವಕನ ಜತೆ ಮದುವೆಯಾಗಿ ಖುಷಿಯಿಂದ ಇರಲೆಂದು ನಿರ್ಧರಿಸಿದ ಪಾಲಕರು ನಾಪತ್ತೆ ಬಗ್ಗೆ ದೂರು ನೀಡಿರಲಿಲ್ಲ. ಆದರೆ 2009ರಲ್ಲಿ ಮೋಹನ್ ಬಂಧನವಾಗಿ ಟಿವಿಯಲ್ಲಿ ವರದಿಯಾಗುತ್ತಿದ್ದಂತೆ ಆತನ ಗುರುತು ಕಂಡು ಹಿಡಿದಿದ್ದರು. ಬಳಿಕ ಯುವತಿಯ ಸಹೋದರಿ ಬೆಂಗಳೂರಿನ ಉಪ್ಪಾರಪೇಟೆ ಠಾಣೆಯಲ್ಲಿ ನಾಪತ್ತೆ ದೂರು ನೀಡಿದ್ದರು.
2009 ಅ.26ರಂದು ಬರಿಮಾರು ಯುವತಿಯೊಬ್ಬಳ ಕೊಲೆ ಪ್ರಕರಣದ ತನಿಖೆ ನಡೆಸುತ್ತಿದ್ದಾಗ ಆರೋಪಿ ಮೋಹನ ಮಂಜೇಶ್ವರದ ಯುವತಿಯನ್ನು ಕೊಲೆ ಮಾಡಿದ ಬಗ್ಗೆ ಬಾಯ್ಬಿಟ್ಟಿದ್ದಾನೆ. ಸಿಒಡಿ ಡಿವೈಎಸ್ಪಿ ಶಿವಶರಣಪ್ಪ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು. ತನಿಖಾಧಿಕಾರಿ ಲೋಕೇಶ್ವರ, ನಾಗರಾಜ ವಿಚಾರಣೆ ನಡೆಸಿದ್ದರು.
20ರಲ್ಲಿ 16 ಪ್ರಕರಣ ಇತ್ಯರ್ಥ
ಸರಣಿ ಹಂತಕ ಸೈನೈಡ್ ಮೋಹನ್ ವಿರುದ್ಧ ಒಟ್ಟು 20 ಪ್ರಕರಣಗಳಿದ್ದು, 16 ಪ್ರಕರಣಗಳು ಇತ್ಯರ್ಥಗೊಂಡಿದೆ. ಇನ್ನು 4 ಪ್ರಕರಣಗಳು 4 ತಿಂಗಳೊಳಗೆ ವಿಚಾರಣೆ ಮುಗಿಯುವ ಸಾಧ್ಯತೆಯಿದೆ. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶರಾದ ಸಯಿದುನ್ನೀಸಾ 38 ಸಾಕ್ಷಿ ವಿಚಾರಣೆ ನಡೆಸಿ, 49 ದಾಖಲೆ ಪರಿಗಣಿಸಿ ಅಪರಾಧ ಸಾಬೀತುಪಡಿಸಿ ತೀರ್ಪು ನೀಡಿದ್ದಾರೆ. ಸರ್ಕಾರದ ಪರವಾಗಿ ಜುಡಿತ್ ಒ.ಎಂ.ಕ್ರಾಸ್ತ ವಾದಿಸಿದ್ದರು.