ಬೆಳಗಾವಿ: ಎರಡನೇ ಮದುವೆಗಾಗಿ ಏಳು ವರ್ಷದ ಮಗುವನ್ನು ಮಾರಾಟ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿ ನಾಲ್ವರು ಆರೋಪಿಗಳನ್ನು ಹುಕ್ಕೇರಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಹುಕ್ಕೇರಿ ತಾಲ್ಲೂಕಿನ ಸುಲ್ತಾನಪುರದ ಲಕ್ಷ್ಮೀ ಗೋಲಬಾವಿ, ಸದಾಶಿವ ಮಗದುಮ್ಮ, ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ ತಾಲ್ಲೂಕಿನ ಕೆಸರೊಳ್ಳಿಯ ಅನುಸೂಯಾ ದೊಡಮನಿ, ಮಹಾರಾಷ್ಟ್ರದ ಕೊಲ್ಹಾಪುರದ ಸಂಗೀತಾ ಸಾವಂತ ಬಂಧಿತರು.
‘ಸದಾಶಿವ ಮಗದುಮ್ಮ ಎಂಬಾತ ಹಾವೇರಿ ಜಿಲ್ಲೆಯ ಬ್ಯಾತನಾಳದ ಸಂಗೀತಾ ಕಮ್ಮಾರ ಅವರೊಂದಿಗೆ ಮದುವೆ ಆಗಿದ್ದ. ಆದರೆ, ಸಂಗೀತಾ ಅವರಿಗೆ ಮೊದಲೇ ಒಂದು ಮಗುವಿತ್ತು. ಇದರಿಂದ ತಮ್ಮ ವೈವಾಹಿಕ ಸಂಬಂಧಕ್ಕೆ ತೊಡಕಾಗದಿರಲೆಂದು ಇದನ್ನು ಸಾಕಲು ಬೇರೆಯವರಿಗೆ ಕೋಡೋಣ ಎಂದು ಹೇಳಿದ್ದ. ಹಲವು ಮಧ್ಯವರ್ತಿಗಳ ನೆರವಿನಿಂದ ದಿಲಶಾದ್ ಅವರಿಗೆ ₹4 ಲಕ್ಷಕ್ಕೆ ಮಾರಿದ್ದ. ಮೂರು ತಿಂಗಳ ನಂತರ ತಮಗೆ ಮಗು ಬೇಕೆಂದು ತಾಯಿ ಪಟ್ಟು ಹಿಡಿದು ಪೊಲೀಸ್ ಠಾಣೆ ಏರಿದಾಗ, ಮಾರಾಟದ ಪ್ರಕರಣ ಬೆಳಕಿಗೆ ಬಂದಿದೆ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಭೀಮಾಶಂಕರ ಗುಳೇದ ಇಲ್ಲಿ ಸೋಮವಾರ ಸುದ್ದಿಗಾರರಿಗೆ ತಿಳಿಸಿದರು.
‘ಖಾನಾಪುರ ತಾಲ್ಲೂಕಿನ ಲೊಂಡಾದ ಭರತ ಪೂಜಾರಿ, ಬೆಳಗಾವಿಯ ದಿಲಶಾದ್ ತಹಶೀಲ್ದಾರ್ ಪತ್ತೆಗೆ ಜಾಲ ಬೀಸಲಾಗಿದೆ. ರಕ್ಷಣೆ ಮಾಡಲಾದ ಮಗುವನ್ನು ಮಕ್ಕಳ ರಕ್ಷಣಾ ಘಟಕಕ್ಕೆ ಒಪ್ಪಿಸಲಾಗಿದೆ’ ಎಂದರು.
ಹುಕ್ಕೇರಿ ಠಾಣೆ ಇನ್ಸ್ಪೆಕ್ಟರ್ ಎಂ.ಕೆ.ಬಸಾಪುರ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿದೆ.
ಎಂಟು ಜನರ ಬಂಧನ
‘ಗೋಕಾಕ ತಾಲ್ಲೂಕಿನ ಮಮದಾಪುರ ಹೊರವಲಯದಲ್ಲಿ ಕೊಳವಿಯ ಪ್ರಕಾಶ ಮಾರುತಿ ಹಿರಟ್ಟಿ ಅವರನ್ನು ಜ.14ರಂದು ಕೊಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ, ಎಂಟು ಆರೋಪಿಗಳನ್ನು ಗೋಕಾಕ ಗ್ರಾಮೀಣ ಠಾಣೆ ಪೊಲೀಸರು ಬಂಧಿಸಿದ್ದಾರೆ’ ಎಂದು ಭೀಮಾಶಂಕರ ಗುಳೇದ ಹೇಳಿದರು.