ಮಂಡ್ಯ: ಕಾವೇರಿ ನದಿ ನೀರಿನ ಹಂಚಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಮಧ್ಯ ಪ್ರವೇಶ ಮಾಡುವುದಕ್ಕೆ ಆಗುವುದಿಲ್ಲ ಎಂದರೆ ಮನೆಯಲ್ಲಿ ಇರಲಿ, ರಾಜಕಾರಣ ಏಕೆ ಮಾಡುತ್ತಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಟೀಕಿಸಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ರೈತರು ಹಾಗೂ ಸಂಘಟನೆಗಳ ಬಗ್ಗೆ ಮಾತನಾಡುವುದಿಲ್ಲ. ನಾವು ನಮ್ಮ ಸಮಸ್ಯೆಯನ್ನು ಕೋರ್ಟ್ ಹಾಗೂ ಪ್ರಾಧಿಕಾರದ ಮುಂದೆ ಹೇಳಬಹುದು ಅಷ್ಟೇ. ಆದರೆ ಕೇಂದ್ರ ಸರ್ಕಾರ ಮಧ್ಯ ಪ್ರದೇಶ ಮಾಡುವ ಅವಕಾಶವಿದೆ. ಬಿಜೆಪಿ ಹಾಗೂ ಜೆಡಿಎಸ್ನವರಿಗೆ ಕೃತಜ್ಞತೆ ಇಲ್ವಾ. ಮಂಡ್ಯದಲ್ಲಿ ಬಂದು ಬಿಜೆಪಿ, ಜೆಡಿಎಸ್ ಏನು ಮಾಡುತ್ತಾರೆ. ಕುಮಾರಸ್ವಾಮಿ, ಬೊಮ್ಮಾಯಿ ದೆಹಲಿಗೆ ಹೋಗಿ ಪ್ರಧಾನಿ ಬಳಿ ಮಾತಾಡಬೇಕು. ಕಾವೇರಿ ವಿಚಾರದ ಸಮಸ್ಯೆ ಹೇಳಿ ಎರಡು ರಾಜ್ಯದ ಸಿಎಂ ಕರೆಸಿ ಸಮಸ್ಯೆ ಬಗೆಹರಿಸಲು ಹೇಳಬೇಕು ಎಂದು ಹೇಳಿದರು.
ಸಮಸ್ಯೆಯನ್ನು ಪ್ರಧಾನಿ ಬಳಿ ಹೇಳಬೇಕಾ?. ಇಲ್ಲ ಇಲ್ಲಿ ಮಾಧ್ಯಮದವರ ಮುಂದೆ ಪ್ರತಿಭಟನೆ ಮಾಡಬೇಕಾ. ನಾವು ದೆಹಲಿಗೆ ಹೋಗಿದ್ದೇವೆ, ಎಂಪಿಗಳ ಸಭೆ ಮಾಡಿದ್ದೇವೆ. ಮೂರು ಬಾರಿ ವಿರೋಧ ಪಕ್ಷಗಳ ಸಭೆ ಮಾಡಿದ್ದೇವೆ. ಕೋರ್ಟ್ ಹಾಗೂ ಪ್ರಾಧಿಕಾರದ ಆದೇಶವನ್ನು ಹಿಂದಿನ ಎಲ್ಲ ಸಿಎಂಗಳು ಪಾಲಿಸಿದ್ದಾರೆ. ಇಲ್ಲಿ ಬಂದು ಶೂರ, ವೀರರ ರೀತಿ ಭಾಷಣ ಮಾಡುವ ಜೆಡಿಎಸ್, ಬಿಜೆಪಿಯವರು ಹಿಂದೆ ನೀರು ಬಿಟ್ಟಿದ್ದಾರೆ. ರೈತರಿಗೆ ಅನ್ಯಾಯ ಮಾಡಿ ನೀರನ್ನು ಬಿಟ್ಟಿದ್ದಾರೆ. ಆದರೆ ನಾವು ಇಲ್ಲಿಯವರೆಗೆ ರೈತರ ಹಿತಾಸಕ್ತಿ ಕಾಪಾಡಿ, ಅಲ್ಪಸ್ವಲ್ಪ ಆದೇಶ ಪಾಲನೆ ಮಾಡಿದ್ದೇವೆ ಎಂದು ತಿಳಿಸಿದರು.
ಮಂಡ್ಯ ರೈತರಿಗೆ ಇನ್ನೂ ಎರಡು ಕಟ್ಟು ನೀರು ಕೊಡುತ್ತೇವೆ, ರಕ್ಷಣೆ ಮಾಡುತ್ತೇವೆ. ಬಿಜೆಪಿ, ಜೆಡಿಎಸ್ ಎಂಪಿ ಚುನಾವಣೆಯಲ್ಲಿ ಒಂದೇ ಸಲ ಸಾಧನೆ ಮಾಡಲು ಒಂದಾಗುತ್ತಿದ್ದಾರೆ. ಆ ಕೆಲಸವನ್ನು ಅವರು ಪ್ರಾಮಾಣಿಕವಾಗಿ ಪ್ರಧಾನಿ ಬಳಿ ಹೋಗಿ ಕಾವೇರಿ ವಿಚಾರದಲ್ಲಿ ಮಾಡಬೇಕು. ಈ ಹಿಂದೆ ವಾಜಪೇಯಿ ಅವರು ಮಧ್ಯ ಪ್ರವೇಶ ಮಾಡಿರಲಿಲ್ವಾ?. ಒಕ್ಕೂಟ ವ್ಯವಸ್ಥೆಯಲ್ಲಿ ಮೇಲೆ ಕೇಂದ್ರ ಸರ್ಕಾರವಿದೆ. ಆದ್ದರಿಂದ ಕೇಂದ್ರ ಸರ್ಕಾರವೇ ಎರಡು ರಾಜ್ಯದ ಸಮಸ್ಯೆ ಬಗೆಹರಿಸಬೇಕು ಎಂದ ಅವರು, ಇಂಡಿಯಾ ಒಕ್ಕೂಟ ರಾಜಕೀಯ ಹಾಗೂ ಕಾವೇರಿ ವಿಚಾರ ಬೇರೆ. ಕರ್ನಾಟಕ, ತಮಿಳುನಾಡು ಬೇರೆ ಬೇರೆ ರಾಜ್ಯ. ತ.ನಾಡಿನವರು ಅವರ ಹಿತಾಸಕ್ತಿ ನೋಡುತ್ತಾರೆ. ನಾವು ನಮ್ಮ ಹಿತಾಸಕ್ತಿ ನೋಡುತ್ತೇವೆ. ರಾಜಕೀಯವನ್ನು ಅವರು ಯಾರ ಜತೆಯಾದರೂ ಮಾಡಿಕೊಳ್ಳಲಿ. ಸಾಧ್ಯವಾದರೆ ಕಾವೇರಿ ಸಮಸ್ಯೆ ಬಗೆಹರಿಸಲಿ. ಅವರಿಂದ ಆಗದಿದ್ದರೆ ನಮ್ಮ ರೈತರನ್ನು ಉಳಿಸುವುದು ನಮಗೆ ಗೊತ್ತು ಮಾಡುತ್ತೇವೆ. ಈಗಾಗಲೇ ನಾವು ಕಾವೇರಿ ನೀರಿನ ವಿಚಾರವನ್ನು ಕೋರ್ಟ್ಗೆ ಅಪೀಲು ಹೋಗಿದ್ದೇವೆ. 12ರಂದು ನಡೆಯುವ ವಿಚಾರಣೆಯಲ್ಲಿ ನೀರು ಬಿಡಲ್ಲ ಎಂದು ಹೇಳುತ್ತೇವೆ ಎಂದು ಸ್ಪಷ್ಟಪಡಿಸಿದರು.