ನವಲಗುಂದ: ಬೆಳೆ ಹಾನಿ ಪರಿಹಾರ ಹಾಗೂ ಬೆಳೆ ವಿಮೆ ವಿತರಣೆಯಲ್ಲಿ ಆಗುತ್ತಿರುವ ನ್ಯೂನತೆಗಳನ್ನು ಸರಿಪಡಿಸಬೇಕು ಎಂದು ಗಂಗಪ್ಪ ಮನಮಿ ತಾಲೂಕಾಡಳಿತವನ್ನು ಒತ್ತಾಯಿಸಿದರು.

ಈ ಕುರಿತು ಪತ್ರಿಕಾ ಪ್ರಕಟನೆ ನೀಡಿರುವ ಅವರು, ತಾಲೂಕಿನಲ್ಲಿ ಕೆಲ ರೈತರಿಗೆ ಬೆಳೆ ಹಾನಿ ಪರಿಹಾರ ಹಣ ಸಂದಾಯವಾಗಿದೆ. ಇನ್ನುಳಿದ ಕೆಲ ರೈತರಿಗೆ ಸಂದಾಯವಾಗಿಲ್ಲ ಎಂದು ದೂರಿದರು. ನಿರಂತರ ಮಳೆ ಸುರಿದ ಪರಿಣಾಮ ಬೆಳೆಗಳು ಸಂಪೂರ್ಣ ನಾಶವಾಗಿದ್ದು, ಸ್ವತಃ ಸಮೀಕ್ಷಾ ವರದಿ ಇದ್ದರೂ ಸಹಿತ ಕೆಲ ರೈತರಿಗೆ ಜಿಪಿಎಸ್ ಇತ್ಯಾದಿ ತಾಂತ್ರಿಕ ನೆಪಗಳನ್ನು ಹೇಳಿ ಪರಿಹಾರ ವಿತರಿಸದಿರುವುದು ಸಮರ್ಪಕ ನಿರ್ವಹಣೆಯಲ್ಲಿ ಲೋಪಗಳಾಗಿರುವುದನ್ನು ಎತ್ತಿ ತೋರಿಸುತ್ತಿದೆ ಎಂದು ಆರೋಪಿಸಿದರು.
ಸಮಸ್ತ ರೈತಕುಲ ಸಂಕಷ್ಟದಲ್ಲಿರುವಾಗ ತಾಲೂಕಾಡಳಿತ ಹಾಗೂ ಸರ್ಕಾರ ಕ್ರಮವಾಗಿ ರೈತರ ಪಾಲಿನ ಹಣ ಸಂದಾಯ ಮಾಡಲು ಮೀನಮೇಷ ಎಣಿಸುತ್ತಿದೆ. ಈ ತಿಂಗಳ ಕೊನೇ ವಾರದೊಳಗೆ ಸಮಸ್ಯೆಗಳನ್ನು ಪರಿಹರಿಸಿ ರೈತರಿಗೆ ಸಮರ್ಪಕ ನ್ಯಾಯ ಒದಗಿಸದಿದ್ದಲ್ಲಿ ಹೋರಾಟ ಅನಿವಾರ್ಯವಾಗಲಿದೆ ಎಂದು ಪ್ರಕಟಣೆಯಲ್ಲಿ ಎಚ್ಚರಿಸಿದ್ದಾರೆ.