ಕಾಸರಗೋಡು: ಜಿಲ್ಲೆಯಲ್ಲಿ ಭಾನುವಾರ ಹೊಸದಾಗಿ 5 ಪಾಸಿಟಿವ್ ಪ್ರಕರಣಗಳು ದಾಖಲಾಗಿದ್ದು, ಮತ್ತಷ್ಟು ಆತಂಕ ಸೃಷ್ಟಿಸಿದೆ. ಜಿಲ್ಲೆಯಲ್ಲಿ ಈವರೆಗೆ ಒಟ್ಟು 14 ಪಾಸಿಟಿವ್ ಕೇಸುಗಳು ದಾಖಲಾಗಿವೆ. ಒಟ್ಟು 762 ಮಂದಿ ನಿಗಾದಲ್ಲಿದ್ದಾರೆ.
ಕೇರಳದಲ್ಲಿ ಭಾನುವಾರ ಹೊಸದಾಗಿ 15 ಕರೊನಾ ವೈರಸ್ ಪ್ರಕರಣ ಪತ್ತೆಯಾಗಿದ್ದು, ಕಾಸರಗೋಡು ಐದು, ಕಣ್ಣೂರು ನಾಲ್ಕು, ಕೋಯಿಕ್ಕೋಡ್, ಮಲಪ್ಪುರಂ ಹಾಗೂ ಎರ್ನಾಕುಳಂ ತಲಾ ಎರಡು ಪ್ರಕರಣ ದಾಖಲಾಗಿವೆ. ಈ ಮೂಲಕ ರಾಜ್ಯದಲ್ಲಿ ವೈರಸ್ ಬಾಧಿಸಿ ಚಿಕಿತ್ಸೆಯಲ್ಲಿರುವವರ ಸಂಖ್ಯೆ 64ಕ್ಕೇರಿದೆ. ರಾಜ್ಯದ ವಿವಿಧ ಜಿಲ್ಲೆಗಳಲ್ಲಿ 59,295 ಮಂದಿ ನಿಗಾದಲ್ಲಿದ್ದಾರೆ. ಇವರಲ್ಲಿ 58,981 ಮಂದಿ ಮನೆಗಳಲ್ಲಿ ಹಾಗೂ 314 ಮಂದಿ ಆಸ್ಪತ್ರೆಗಳಲ್ಲಿ ನಿಗಾದಲ್ಲಿದ್ದಾರೆ. ಇಂದು ಮನೆಗಳಲ್ಲಿ ನಿಗಾದಲ್ಲಿದ್ದ 9,776 ಮಂದಿಯನ್ನು ಹೊರತುಪಡಿಸಲಾಗಿದೆ.

ಮತ್ತಷ್ಟು ನಿಯಂತ್ರಣ
ಕಾಸರಗೋಡು: ‘ಕೋವಿಡ್-19’ ವೈರಸ್ ವ್ಯಾಪಿಸುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದ ನಿರ್ದೇಶನ ಮೇರೆಗೆ ಕೇರಳದಲ್ಲಿ ಕಾಸರಗೋಡು ಒಳಗೊಂಡಂತೆ ಏಳು ಜಿಲ್ಲೆಗಳಲ್ಲಿ ಸಂಪೂರ್ಣ ಚಟುವಟಿಕೆ ಸ್ಥಗಿತಗೊಳಿಸುವ ಬಗ್ಗೆ ತೀರ್ಮಾನ ಕೈಗೊಂಡಿಲ್ಲ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಸ್ಪಷ್ಟಪಡಿಸಿದ್ದಾರೆ.
ರಾಜ್ಯದಲ್ಲಿ ಏಳು ಜಿಲ್ಲೆಗಳಲ್ಲಿ ನಿಯಂತ್ರಣಕ್ಕೆ ಸರ್ಕಾರ ಇದುವರೆಗೆ ಮುಂದಾಗಿಲ್ಲ. ಪ್ರಸಕ್ತ ಜಾರಿಯಲ್ಲಿರುವ ನಿಯಂತ್ರಣವನ್ನು ಕಟ್ಟುನಿಟ್ಟಾಗಿ ಮುಂದುವರಿಸಲು ಸರ್ಕಾರ ಆದ್ಯತೆ ನೀಡಲಿದೆ. ಕಾಸರಗೋಡು ಜಿಲ್ಲೆಯ ಪ್ರತ್ಯೇಕ ಪರಿಸ್ಥಿತಿ ಪರಿಗಣಿಸಿ ನಿಯಂತ್ರಣ ಮತ್ತಷ್ಟು ಬಲಪಡಿಸಲಾಗುವುದು ಎಂದು ತಿಳಿಸಿದ್ದಾರೆ.
ಕರೊನಾ ವೈರಸ್ ಬಾಧಿತರ ಸಂಖ್ಯೆ ಹೆಚ್ಚುತ್ತಿರುವುದನ್ನು ಪರಿಗಣಿಸಿ ಕಾಸರಗೋಡು ಜಿಲ್ಲೆಯಲ್ಲಿ ಇಂದಿನಿಂದ ಮತ್ತಷ್ಟು ನಿಯಂತ್ರಣ ಹೇರಲಾಗಿದೆ. ಈ ಬಗ್ಗೆ ಕಾಸರಗೋಡು ಜಿಲ್ಲಾಧಿಕಾರಿ ಹಾಗೂ ಪೊಲೀಸ್ ವರಿಷ್ಠಾಧಿಕಾರಿಗೆ ನಿರ್ದೇಶನ ನೀಡಿರುವುದಾಗಿ ರಾಜ್ಯ ಮುಖ್ಯ ಕಾರ್ಯದರ್ಶಿ ಟೋಮ್ ಜೋಸ್ ಐ.ಎ.ಎಸ್ ತಿಳಿಸಿದ್ದಾರೆ. ಅತ್ಯಾವಶ್ಯಕ ಸಾಮಗ್ರಿ, ಪೆಟ್ರೋಲ್ ಪಂಪುಗಳು ಮಾತ್ರ ತೆರೆದು ಕಾರ್ಯಾಚರಿಸಲಿವೆ. ಖಾಸಗಿ ವಾಹನಗಳ ಸಂಚಾರಕ್ಕೂ ನಿಯಂತ್ರಣ ಹೇರಲಾಗುವುದು. ಜಿಲ್ಲೆಯಿಂದ ಹೊರಗೆ ತೆರಳಲು ಅಥವಾ ಒಳಗೆ ಬರಲು ಅವಕಾಶ ನೀಡದಿರುವಂತೆ ಸೂಚಿಸಲಾಗಿದೆ. ತುರ್ತು ಕೆಲಸಗಳಿದ್ದಲ್ಲಿ ಮಾತ್ರ ಜನತೆ ಹೊರಗೆ ತೆರಳಬೇಕು. ಅಂಗಡಿಗಳನ್ನು ತೆರೆಯುವಲ್ಲೂ ನಿಯಂತ್ರಣ ಹೇರಲಾಗುವುದು. ಕಾಸರಗೋಡಿನ ಪ್ರತ್ಯೇಕ ಪರಿಸ್ಥಿತಿ ಪರಿಗಣಿಸಿ, ಜಿಲ್ಲೆಯಲ್ಲಿ ಮತ್ತಷ್ಟು ನಿಯಂತ್ರಣ ಹೇರಲು ಕ್ರಮ ಕೈಗೊಳ್ಳುವುದಾಗಿ ಮುಖ್ಯಮಂತ್ರಿ ಕಚೇರಿ ಪ್ರಕಟಣೆ ತಿಳಿಸಿದೆ.