ಬದಿಯಡ್ಕ: ಕಾಸರಗೋಡಿನ ಕುಖ್ಯಾತ ಕಳ್ಳಸಾಗಣೆದಾರನೊಬ್ಬನನಿಗೆ ಕರೊನಾ ಸೋಂಕು ತಗುಲಿದ್ದು ಐಸೋಲೇಷನ್ ಘಟಕದಲ್ಲಿದ್ದಾನೆ. ಆದರೆ ಆತ ಯಾರನ್ನೆಲ್ಲ ಭೇಟಿಯಾಗಿದ್ದ ಎಂಬ ಟ್ರಾವೆಲ್ ಹಿಸ್ಟ್ರಿ ಬಾಯಿ ಬಿಡುತ್ತಿಲ್ಲ. ಇದು ಸರ್ಕಾರಕ್ಕೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.

ಈ ವಿಷಯವನ್ನು ಕಾಸರಗೋಡು ಜಿಲ್ಲಾಧಿಕಾರಿಯೇ ಖಚಿತಪಡಿಸಿದ್ದಾರೆ. ಸೋಂಕಿತ ವ್ಯಕ್ತಿ ಅಂತಾರಾಷ್ಟ್ರೀಯ ಕಳ್ಳ ಸಾಗಣೆದಾರನಾಗಿದ್ದು, ಆತ ದುಬೈನಿಂದ ಮಾರ್ಚ್ 11ರಂದು ಕೇರಳದ ಕ್ಯಾಲಿಕಟ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದ. ಈತನ ಮೇಲೆ ಕಸ್ಟಮ್ಸ್ ಅಧಿಕಾರಿಗಳು ಶಂಕೆ ವ್ಯಕ್ತಪಡಿಸಿ ಪಾಸ್ಪೋರ್ಟ್ ವಶಪಡಿಸಿಕೊಂಡು ತಪಾಸಣೆಗೆ ಕರೆದುಕೊಂಡು ಹೋಗುತ್ತಿದ್ದಾಗ ವಿಮಾನ ನಿಲ್ದಾಣದಲ್ಲಿ ತಪ್ಪಿಸಿಕೊಂಡಿದ್ದ. ಬಳಿಕ ಮಾರ್ಚ್ 19ರಂದು ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದ ಸ್ಮಗ್ಲರ್ಗೆ (ಆತನ ಹೆಸರು ಬಹಿರಂಗಪಡಿಸಿಲ್ಲ) ಸೋಂಕು ತಪಾಸಣೆ ಮಾಡಿದ್ದಾಗ, ಕರೊನಾ ವೈರಸ್ ತಗುಲಿರುವುದು ದೃಢಪಟ್ಟಿದೆ. ಈಗ ಕಾಸರಗೂಡಿನ ಐಸೋಲೇಷನ್ ವಾರ್ಡ್ನಲ್ಲಿರುವ ಈ ವ್ಯಕ್ತಿಯ ಹಿಂದೆ ಕೇರಳ ಜಿಲ್ಲಾಡಳಿತವೇ ಬಿದ್ದಿದೆ. ಆದರೆ ಆತ ಯಾರನ್ನೆಲ್ಲ ಭೇಟಿಯಾಗಿದ್ದಾನೆ ಎಂಬುದನ್ನು ತಿಳಿಸುತ್ತಿಲ್ಲ.
ಬಾಯಿ ಬಿಡದ ಕಳ್ಳ: ದುಬೈ ಸೇರಿದಂತೆ ಅರಬ್ ರಾಷ್ಟ್ರಗಳಲ್ಲಿ ಚಿನ್ನ ಕಳ್ಳ ಸಾಗಾಣೆಯಲ್ಲಿ ಭಾಗಿಯಾಗಿದ್ದ ಆರೋಪದ ಮೇಲೆ ಭಾರತದ ಕಸ್ಟಮ್ಸ್ ವಿಭಾಗದಲ್ಲಿ ಈತನ ವಿರುದ್ಧ ಹಲವು ಪ್ರಕರಣಗಳು ದಾಖಲಾಗಿವೆ. ಯಾರನ್ನೆಲ್ಲ ಭೇಟಿಯಾಗಿದ್ದಾನೆ ಎಂಬುದನ್ನು ಬಾಯಿಬಿಟ್ಟರೆ ತನ್ನ ಚಿನ್ನ ಕಳ್ಳಸಾಗಾಣೆಯ ವ್ಯವಹಾರದ ಎಲ್ಲ ವಿಷಯ ಬಯಲಾಗುವ ಸಾಧ್ಯತೆ ಇದೆ.
ಸಾವಿರಾರು ಜನರನ್ನು ಭೇಟಿಯಾಗಿದ್ದ: ಅಂದಾಜಿನ ಪ್ರಕಾರ ಇಬ್ಬರು ಶಾಸಕರು ಸೇರಿದಂತೆ ಕಾಸರಗೋಡು ಮತ್ತು ಕಣ್ಣೂರು ಜಿಲ್ಲೆಗಳಲ್ಲಿ 1,400 ಜನರನ್ನು ಈತ ಸಂಪರ್ಕಿಸಿದ್ದ. ಉದ್ಯಮಿಗಳನ್ನೂ ಭೇಟಿಯಾಗಿದ್ದ. ಇದಕ್ಕಿಂತಲೂ ಹೆಚ್ಚು ಮಂದಿಯನ್ನು ಈತ ಸಂಪರ್ಕಿಸಿರುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ವ್ಯಕ್ತಿ ತನ್ನ ಸಂಪರ್ಕಗಳನ್ನು ಪತ್ತೆಹಚ್ಚುವಲ್ಲಿ ಅಧಿಕಾರಿಗಳೊಂದಿಗೆ ಸಹಕರಿಸುತ್ತಿಲ್ಲ ಎಂದು ಕಾಸರಗೋಡು ಜಿಲ್ಲಾಧಿಕಾರಿ ಹೇಳಿದ್ದಾರೆ.
ಶಾಸಕರ ಜತೆ ಸಂಪರ್ಕ: ವಿವಾಹ ಕಾರ್ಯಕ್ರಮವೊಂದರಲ್ಲಿ ಸೋಂಕಿತ ವ್ಯಕ್ತಿ ಕಾಸರಗೋಡು ಮತ್ತು ಮಂಜೇಶ್ವರ ಶಾಸಕರೊಂದಿಗೆ ಅನ್ಯೋನ್ಯದಿಂದ ಬೆರೆತಿದ್ದ. ಹೀಗಾಗಿ ಈ ಶಾಸಕದ್ವಯರು ಸೆಲ್ಫ್ ಕ್ವಾರಂಟೈನ್ಗೊಳಗಾಗಿದ್ದಾರೆ. ಆದರೆ ಅಂತಾರಾಷ್ಟ್ರೀಯ ಖದೀಮ ಶಾಸಕರೊಂದಿಗೆ ಅನ್ಯೋನ್ಯವಾಗಿರುವ ಬಗ್ಗೆ ಹಲವು ಸಂಶಯಗಳು ಹುಟ್ಟಿಕೊಂಡಿವೆ.