ಆಲಮಟ್ಟಿ: ಮಳೆಗಾಲ ಆರಂಭಗೊಂಡಿದ್ದು ಆಲಮಟ್ಟಿ ಜಲಾಶಯದಲ್ಲಿ ಹೆಚ್ಚಿನ ನೀರು ಸಂಗ್ರಹ ಮಾಡಿಕೊಳ್ಳದೆ, ಕೇಂದ್ರ ಜಲ ಆಯೋಗ ನಿರ್ದೇಶಿಸಿದ ಮಟ್ಟಕ್ಕೆ ಅನುಗುಣವಾಗಿ ಜಲಾಶಯದ ಮಟ್ಟವನ್ನು ಕಟ್ಟುನಿಟ್ಟಾಗಿ ಕಾಪಾಡಿಕೊಳ್ಳಬೇಕು ಎಂದು ಮಹಾರಾಷ್ಟ್ರದ ಸಾಂಗಲಿಯ ಕೃಷ್ಣಾ ಮಹಾಪೂರ ನಿಯಂತ್ರಣ ನಾಗರಿಕ ಕೃತಿ ಸಮಿತಿ ಆಗ್ರಹಿಸಿತು.
ಆಲಮಟ್ಟಿ ಜಲಾಶಯದ ನೀರಿನ ಹೆಚ್ಚಿನ ಸಂಗ್ರಹಣೆಯಿಂದ ಮಹಾರಾಷ್ಟ್ರದ ಕೆಲ ಪ್ರದೇಶಗಳಲ್ಲಿ ಮಹಾಪೂರ ಉಂಟಾಗುತ್ತದೆ ಎಂದು ಸೋಮವಾರ ಆಲಮಟ್ಟಿಗೆ ಭೇಟಿ ನೀಡಿ ಕೆಬಿಜೆಎನ್ಎಲ್ ಅಧಿಕಾರಿಗಳಿಗೆ ಮನವಿ ಸಲ್ಲಿಸಿ ಆಗ್ರಹಿಸಿತು. ಇಲ್ಲಿಯ ಮುಖ್ಯ ಇಂಜಿನಿಯರ್ ಕಚೇರಿಯ ಸಭಾಂಗಣದಲ್ಲಿ ಕೆಬಿಜೆಎನ್ಎಲ್ ಅಧಿಕಾರಿಗಳೊಂದಿಗೆ ಚರ್ಚಿಸಿದ ಮಹಾರಾಷ್ಟ್ರದ ತಂಡದವರು, ವಿಸತವಾಗಿ ತಮ್ಮ ಅಧ್ಯಯನದ ಬಗ್ಗೆ ವಿವರಿಸಿದರು.
ಮಹಾರಾಷ್ಟ್ರದಲ್ಲಿ ಕೃಷ್ಣಾ ತೀರದಲ್ಲಿ ಜುಲೈ, ಆಗಸ್ಟ್ನಲ್ಲಿ ಉಂಟಾಗುವ ಮಹಾಪೂರದ ಬಗ್ಗೆ ನಮ್ಮ ಸಮಿತಿ ವಿಸತ ಅಧ್ಯಯನ ನಡೆಸಿದೆ.
ಮಹಾಪೂರ ಸಂದರ್ಭದಲ್ಲಿಯೂ ಆಲಮಟ್ಟಿ ಜಲಾಶಯದ ಮಟ್ಟ ಹೆಚ್ಚಿರುತ್ತದೆ. ಆಗ ಏಕಾಏಕಿ ಮಹಾಪೂರ ಉಂಟಾಗಿ ಕೊಲ್ಹಾಪುರ, ಶಿರೋಳ, ಸಾಂಗಲಿ ನಾನಾ ಕಡೆ ಮಹಾಪೂರ ಉಂಟಾಗುತ್ತದೆ ಎಂದು ಸಮಿತಿಯ ಮುಖ್ಯಸ್ಥ ವಿಜಯಕುಮಾರ ದಿವಾನ ಆರೋಪಿಸಿದರು.
ಪ್ರತಿಯೊಂದು ಜಲಾಶಯಗಳ ನೀರಿನ ಸಂಗ್ರಹ, ಹೊರಹರಿವು, ಒಳಹರಿವು, ಮಳೆ ಪ್ರಮಾಣದ ವಿನಿಮಯ ಆಗಬೇಕು, ಅದು ಪ್ರತಿ ಸಾಮಾನ್ಯನಿಗೂ ತಿಳಿಯಬೇಕು ಎಂದರು. ಸಮಿತಿ ವತಿಯಿಂದ ಮಲಪ್ರಭಾ, ಟಪ್ರಭಾ ಹಾಗೂ ಕೃಷ್ಣಾ ನದಿಯ ಅಧ್ಯಯನ ನಡೆಸಲು ಉದ್ದೇಶಿಸಲಾಗಿದೆ, ಅದಕ್ಕೆ ಸಹಕಾರ ನೀಡಬೇಕು ಎಂದರು.
ಕೇಂದ್ರ ಜಲ ಆಯೋಗದ ನಿರ್ದೇಶನ ಹಾಗೂ ಮಹಾರಾಷ್ಟ್ರದ ನೀರಾವರಿ ಇಲಾಖೆಯ ಅಧಿಕಾರಿಗಳೊಂದಿಗೆ ನಿತ್ಯ ಸಮನ್ವಯತೆ ಮಾಡಿಕೊಂಡು ಮಹಾಪೂರ ನಿಯಂತ್ರಣಕ್ಕೆ ಸಮರ್ಪಕ ಕ್ರಮ ಅನುಸರಿಸಲಾಗುತ್ತಿದೆ ಎಂದು ಕೆಬಿಜೆಎನ್ಎಲ್ ಅಧಿಕಾರಿಗಳು ಹೇಳಿದರು.
ತಮ್ಮ ಅಧ್ಯಯನದ ವರದಿ ಹಾಗೂ ಸಲಹೆಯ ಬಗ್ಗೆ ಲಿಖಿತ ವರದಿ ಸಲ್ಲಿಸಲು ಕೋರಿದರು. ಸೂಪರಿಂಟೆಂಡೆಂಟ್ ಇಂಜಿನಿಯರ್ ರಾಮನಗೌಡ ಹಳ್ಳೂರ, ಕಾರ್ಯನಿರ್ವಾಹಕ ಇಂಜಿನಿಯರ್ ವಿ.ಜಿ. ಕುಲಕರ್ಣಿ, ರವಿ ಚಂದ್ರಗಿರಿಯವರ, ಕುಮಾರೇಶ ಹಂಚಿನಾಳ, ಮಹಾರಾಷ್ಟ್ರದ ಸಮಿತಿಯ ಎಸ್.ಆರ್.ಪಾಟೀಲ, ಪ್ರಭಾಕರ ಕೆಂಗಾರ, ಪ್ರದಿಪ ವಾಯಚಳ, ಸುಯೋಗ ಹವಳ, ದಿನಕರ ಪವಾರ ಇತರರಿದ್ದರು.