ಮಡಿಕೇರಿ: ಕಲಿಕೆ ಎನ್ನುವುದು ನಿರಂತರ ಪ್ರಕ್ರಿಯೆ. ಉತ್ತಮ ಜೀವನಕ್ಕಾಗಿ ಸದಾ ಕಾಲ ನಾವು ಕಲಿಯುತ್ತಿದಲ್ಲಿ ಕೌಶಲ್ಯ ವೃದ್ಧಿಸುತ್ತದೆ ಎಂದು ಕೊಡಗು ಜಿಲ್ಲಾ ಸಹಕಾರ ಯೂನಿಯನ್ ಹಾಗೂ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ನಿರ್ದೇಶಕ ಎನ್.ಎಂ.ಉಮೇಶ್ ಉತ್ತಪ್ಪ ಹೇಳಿದರು.
ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ, ಕೊಡಗು ಜಿಲ್ಲಾ ಸಹಕಾರ ಯೂನಿಯನ್, ಇವರ ಸಂಯುಕ್ತ ಆಶ್ರಯದಲ್ಲಿ ಜಿಲ್ಲೆಯ ಸಹಕಾರ ಸಂಘಗಳ ಅಧ್ಯಕ್ಷರುಗಳಿಗೆ ಸಹಕಾರ ಸಂಘಗಳ ನಿರ್ವಹಣೆಗೆ ಅಗತ್ಯವಿರುವ ಕಾಯ್ದೆ-ಕಾನೂನು ಮತ್ತು ಸೈಬರ್ ಭದ್ರತೆ ಕುರಿತು ನಗರದ ಮಯೂರ ವ್ಯಾಲಿ ವ್ಯೆ ಹೋಟೆಲ್ನಲ್ಲಿ ಸೋಮವಾರ ನಡೆದ ರಾಜ್ಯ ಮಟ್ಟದ ವಿಶೇಷ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಕೊಡಗು ಜಿಲ್ಲಾ ಸಹಕಾರ ಯೂನಿಯನ್ನಿಂದ ಸಹಕಾರ ಕ್ಷೇತ್ರದ ವಿವಿಧ ವಲಯಗಳ ಬವಲರ್ಧನೆಗಾಗಿ ಹಲವಾರು ಕಾರ್ಯಕ್ರಮ ಆಯೋಜಿಸಲಾಗುತ್ತಿದೆ. ಜಿಲ್ಲೆಯ ಸಹಕಾರ ಸಂಘಗಳು ಇದರ ಪ್ರಯೋಜನ ಪಡೆದುಕೊಳ್ಳಬೇಕಾಗಿದೆ. ಸಹಕಾರ ಕ್ಷೇತ್ರದೊಂದಿಗೆ ಸಾಮಾಜಿಕ ವಲಯದ ಹಲವು ಸಮಸ್ಯೆಗಳಿಗೂ ಸರ್ಕಾರದ ಮಟ್ಟದಲ್ಲಿ ಪರಿಹರಿಸಲು ಸಹ ಪ್ರಯತ್ನಿಸಲಾಗುತ್ತಿರುವ ಯೂನಿಯನ್ ಅಧ್ಯಕ್ಷರ ಕಾರ್ಯ ಶ್ಲಾಘನೀಯ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕೊಡಗು ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ಎ.ಕೆ.ಮನು ಮುತ್ತಪ್ಪ, ಪ್ರತಿ ವರ್ಷದಂತೆ ಇಂದು ಸಹ ಜಿಲ್ಲೆಯ ಸಹಕಾರ ಸಂಘಗಳ ಅಧ್ಯಕ್ಷರುಗಳಿಗೆ ಹೈಟೆಕ್ ತರಬೇತಿ ಕಾರ್ಯಕ್ರಮ ಆಯೋಜಿಸಲಾಗಿದೆ. ಜಿಲ್ಲೆಯ ಸಹಕಾರ ಸಂಘಗಳು ತಮ್ಮ ಲಾಭಾಂಶದಲ್ಲಿ ನೀಡುವ ಶಿಕ್ಷಣ ನಿಧಿಯನ್ನು ನೇರವಾಗಿ ಮಹಾಮಂಡಳದ ಖಾತೆಗೆ ಜಮಾ ಮಾಡಲಾಗುತ್ತದೆ. ಈ ಮೊತ್ತದಲ್ಲಿ ರಾಜ್ಯದ ಸಹಕಾರ ಕ್ಷೇತ್ರದ ಅಭಿವೃದ್ಧಿಗಾಗಿ ವಿವಿಧ ರೀತಿಯ ತರಬೇತಿ ಹಮ್ಮಿಕೊಳ್ಳಲು ಅನುದಾನ ನೀಡುತ್ತಾರೆ ಎಂದರು.
ಇದೇ ಮೊತ್ತದಲ್ಲಿ ಕರ್ನಾಟಕ ಇನ್ಸ್ಟಿಟ್ಯೂಟ್ ಆಫ್ ಕೋ ಮ್ಯಾನೇಜ್ಮೆಂಟ್ ತರಬೇತಿ ಸಹ ನಡೆಸಿ ಕಾಲೇಜು ನಿರ್ವಹಣೆ, ವಿದ್ಯಾರ್ಥಿಗಳಿಗೆ ವಸತಿ ಮತ್ತಿತರ ಸಹ ಭರಿಸಬೇಕಿದೆ. ಕೊಡಗು ಜಿಲ್ಲೆಯಲ್ಲಿ ಕೂಡ ಸಹಕಾರ ಸಂಘಗಳು ಉತ್ತಮವಾಗಿ ಸಹಕಾರ ನೀಡುತ್ತಾ ಶೇ.೧೦೦ ರಷ್ಟು ಸಹಕಾರ ಶಿಕ್ಷಣ ನಿಧಿ ಸಂಗ್ರಹಣೆಗೆ ಕೈಜೋಡಿಸುತ್ತಿವೆ. ಪ್ರತಿ ವರ್ಷವು ಸಂಘಗಳ ಲಾಭಾಂಶದಲ್ಲಿ ಏರಿಕೆಯಾಗುತ್ತಿರುವುದನ್ನು ಅವಲೋಕಿಸಿದರೆ ಶಿಕ್ಷಣ, ತರಬೇತಿಯೊಂದಿಗೆ ಸಂಘಗಳ ಪ್ರಾಮಾಣಿಕ ಹಾಗೂ ಕಠಿಣ ಪರಿಶ್ರಮ ಅಭಿವ್ಯಕ್ತವಾಗುತ್ತದೆ. ಸಹಕಾರ ಸಂಘದ ಲಾಭವನ್ನು ಮಾತ್ರ ನಿರೀಕ್ಷಿಸುವ ನಾವು ಇತರ ಸೇವೆಗಳ ಕುರಿತು ಕೃತಜ್ಞರಾಗಿರಬೇಕು ಎಂದು ಮನುಮುತ್ತಪ್ಪ ಅವರು ಪ್ರತಿಪಾದಿಸಿದರು.
ಸಹಕಾರ ಸಂಘಗಳು ಸಾಲ ನೀಡುವುದು ಮಾತ್ರವಲ್ಲದೆ ವಿವಿಧ ರೀತಿಯ ಕಾರ್ಯಕ್ರಮ ಹಮ್ಮಿಕೊಳ್ಳಲು ಅನುಗುಣವಾಗುವಂತೆ ಕೇಂದ್ರ ಸರ್ಕಾರವು ಸಹಕಾರ ಸಂಘ ಬಲಿಷ್ಠವನ್ನಾಗಿಸಲು ಹಲವಾರು ಯೋಜನೆ ಹಮ್ಮಿಕೊಂಡಿದ್ದು ಸಂಘಗಳು ಅಳವಡಿಸಿಕೊಂಡು ಮುನ್ನಡೆಯುವುದು ಅವಶ್ಯಕವಾಗಿದೆ ಎಂದು ತಿಳಿಸಿದರು.
ಸಹಕಾರ ಸಂಘಗಳ ನಿವೃತ್ತ ಅಪರ ನಿಬಂಧಕರಾದ ಎಚ್.ಎಸ್.ನಾಗರಾಜಯ್ಯ ಅವರು ಸಹಕಾರ ಸಂಘಗಳ ನಿರ್ವಹಣೆಗೆ ಅಗತ್ಯವಿರುವ ಕಾಯ್ದೆ-ಕಾನೂನು, ಸಭೆಗಳು, ಆಡಳಿತ ಮಂಡಳಿ ಚುನಾವಣೆ ಇತ್ಯಾದಿ ವಿಷಯದ ಕುರಿತು ಉಪನ್ಯಾಸ ನೀಡಿದರು. ಸೈಬರ್ ಹಾವಳಿ, ತಡೆಗೆ ಕೈಗೊಳ್ಳಬಹುದಾದ ಕ್ರಮಗಳು ವಿಷಯದ ಕುರಿತು ಅಂಕಣಕಾರರು, ಬ್ಯಾಂಕಿಂಗ್ ವ್ಯಕ್ತಿತ್ವ ವಿಕಸನ ತರಬೇತುದಾರರು ಮತ್ತು ವೃತ್ತಿಮಾರ್ಗದರ್ಶಕ ಆರ್.ಕೆ.ಬಾಲಚಂದ್ರರವರು ಉಪನ್ಯಾಸ ನೀಡಿದರು.
ವೇದಿಕೆಯಲ್ಲಿ ಯೂನಿಯನ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಯೋಗೇಂದ್ರ ನಾಯಕ್, ಜಿಲ್ಲಾ ಸಹಕಾರ ಯೂನಿಯನ್ ಉಪಾಧ್ಯಕ್ಷ ಪಿ.ಸಿ.ಮನು ರಾಮಚಂದ್ರ, ನಿರ್ದೇಶಕರಾದ ಎನ್.ಎ.ರವಿ ಬಸಪ್ಪ, ಬಿ.ಎ.ರಮೇಶ್ ಚಂಗಪ್ಪ, ಕೆ.ಎಂ.ತಮ್ಮಯ್ಯ, ಸಿ.ಎಸ್.ಕೃಷ್ಣ ಗಣಪತಿ, ಪಿ.ವಿ.ಭರತ್, ಪಿ.ಬಿ.ಯತೀಶ್, ಎನ್.ಎ.ರ್ಯಾಲಿ ಮಾದಯ್ಯ ಇದ್ದರು.