ಜಗಳೂರು: ಗ್ರಾಮದ ಸಂಪರ್ಕ ರಸ್ತೆಯಲ್ಲಿ ಸಂಚಾರಕ್ಕೆ ಅಡ್ಡಿಪಡಿಸುವ ಧೋರಣೆ ಖಂಡಿಸಿ ಹುಚ್ಚವ್ವನಹಳ್ಳಿ ಕೊರಚರಹಟ್ಟಿ ಗ್ರಾಮದ ಮುಖಂಡರು ಬುಧವಾರ ಉಪ ತಹಸೀಲ್ದಾರ್ ಮಂಜಾನಂದ ಅವರಿಗೆ ಮನವಿ ಸಲ್ಲಿಸಿದರು.

ತಾಲೂಕಿನ ಹುಚ್ಚವ್ವನಹಳ್ಳಿ ಕೊರಚರಹಟ್ಟಿ ಗ್ರಾಮವು ಮೂಲಸೌಕರ್ಯಗಳ ಕೊರತೆಯಿಂದ ನಲುಗುತ್ತಿದೆ. ಹಿರೇಮಲ್ಲಹನೊಳೆ- ತಾಯಿಟೋಣಿ ಗ್ರಾಮಗಳ ನಡುವಿನ ಅಡ್ಡ ರಸ್ತೆಯಿಂದ ಕೊರಚರಹಟ್ಟಿಗೆ ಹೋಗಬೇಕು.
ಆದರೆ, ಕೆಲವರು ರಸ್ತೆಯಲ್ಲಿ ಮಣ್ಣಿನ ದಿಬ್ಬ, ಕಲ್ಲು ಅಡ್ಡ ಹಾಕಿ ಸಂಚಾರ ಮಾಡುವವರಿಗೆ ಸಮಸ್ಯೆ ಮಾಡುತ್ತಿದ್ದಾರೆ. ತುರ್ತು ಸಂದರ್ಭಗಳಲ್ಲೂ ಬೈಕ್, ಕಾರುಗಳನ್ನು ತರುವಾಗ ಕಿರಿಕಿರಿ ಉಂಟಾಗುತ್ತದೆ. ಆದ್ದರಿಂದ ಶೀಘ್ರವೇ ತಹಸೀಲ್ದಾರ್ ಅವರು ಸ್ಥಳಕ್ಕೆ ಆಗಮಿಸಿ ಸಮಸ್ಯೆ ಬಗೆಹರಿಸಬೇಕು ಎಂದು ಒತ್ತಾಯಿಸಿದರು.
ಸುಮಾರು ವರ್ಷಗಳಿಂದ ಇದೇ ರಸ್ತೆಯಲ್ಲಿ ಎತ್ತಿನಗಾಡಿ, ಕಾರು, ಬೈಕ್, ಪಾದಚಾರಿ ಮೂಲಕ ಕೊರಚರಹಟ್ಟಿಯಿಂದ ಹಿರೇಮಲ್ಲನಹೊಳೆ ಸಂಪರ್ಕ ಮಾಡುತ್ತಿದ್ದೇವೆ. ಆದರೆ, ಕೆಲವರು ರಸ್ತೆ ಒತ್ತುವರಿ ಮಾಡಿಕೊಂಡು ವೈಯಕ್ತಿಕ ಹಿತಾಸಕ್ತಿ ಇಟ್ಟುಕೊಂಡು ಸಾರ್ವಜನಿಕರಿಗೆ ತೊಂದರೆ ಮಾಡುವುದು ಸರಿಯಲ್ಲ. ಯಾರದೋ ಸಿಟ್ಟಿಗೆ ನಮ್ಮಂಥ ಬಡವರ ಮೇಲೆ ಹಕ್ಕು ಚಲಾಯಿಸುವುದು ಯಾವ ನ್ಯಾಯ? ಸಾರ್ವಜನಿಕ ರಸ್ತೆ ಎಲ್ಲರ ಬಳಕೆಗೂ ಮುಕ್ತವಾಗಿದೆ. ರಸ್ತೆ ಏನಾದರೂ ಅವರ ಜಮೀನಿನಲ್ಲಿ ಇದ್ದರೆ ಅಳತೆ ಮಾಡಿಸಿ ಹದ್ದುಬಸ್ತು ಮಾಡಲಿ, ಅದು ಬಿಟ್ಟು ಮುಂದಿನ ಹೊಲದ ರೈತರಿಗೆ, ಸಾರ್ವಜನಿಕರಿಗೆ ತೊಂದರೆ ಮಾಡಿದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.
ಗ್ರಾಮ ಪಂಚಾಯಿತಿ ಮಾಜಿ ಉಪಾಧ್ಯಕ್ಷ ವೆಂಕಟೇಶ್, ಗ್ರಾಪಂ ಮಾಜಿ ಸದಸ್ಯ ರವೀಶ್, ಯುವ ಮುಖಂಡರಾದ ರುದ್ರೇಶ್, ಸುರೇಶ್ ಇತರರಿದ್ದರು.