ಬೆಂಗಳೂರು: ಕಾಂಗ್ರೆಸ್ ಶಾಸಕ ಹ್ಯಾರಿಸ್ ಅವರು ನಿನ್ನೆ ಭಾಗವಹಿಸಿದ್ದ ಕಾರ್ಯಕ್ರಮವೊಂದರಲ್ಲಿ ಅನುಮಾನಾಸ್ಪದ ವಸ್ತುವೊಂದು ಸ್ಫೋಟಗೊಂಡು ಅವರು ಗಾಯಗೊಂಡಿದ್ದರು. ಅದೊಂದು ಪಟಾಕಿ ಎಂದು ಹೇಳಲಾಗಿತ್ತು.
ಆದರೆ ಅದು ಪಟಾಕಿ ತರಹ ಇರಲಿಲ್ಲ ಎಂದು ಶಾಸಕ ಹ್ಯಾರಿಸ್ ಹೇಳಿದ್ದಾರೆ. ಇಂದು ಸೇಂಟ್ ಫಿಲೋಮಿನಾ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ಬಳಿಕ ಮಾತನಾಡಿ, ದೇವರು ದೊಡ್ಡವನು. ಈ ಘಟನೆಯಿಂದ ನಾನು ಪಾರಾದೆ. ಈ ಸ್ಫೋಟ ಪಟಾಕಿಯಿಂದ ಆಗಿದ್ದಲ್ಲ. ಹಾಗೆ ಸ್ಫೋಟವಾದಾಗ ನಿಜಕ್ಕೂ ನನಗೆ ಭಯವಾಗಿತ್ತು ಎಂದು ಹೇಳಿದರು.
ಪ್ರಕರಣದ ತನಿಖೆಯನ್ನು ಪೊಲೀಸರು ಮಾಡುತ್ತಿದ್ದಾರೆ. ನಾನು ಗೃಹಸಚಿವರನ್ನು ಭೇಟಿ ಮಾಡುತ್ತೇನೆ. ನನ್ನ ಏಳಿಗೆ ಸಹಿಸದವರು ಈ ಕೃತ್ಯ ಎಸಗಿದ್ದಾರೆ. ದೇವರು ಅವರಿಗೆ ಒಳ್ಳೆಯದು ಮಾಡಲಿ ಎಂದು ಹ್ಯಾರಿಸ್ ಹೇಳಿದ್ದಾರೆ.
ನಾನೀಗ ಪೂರ್ತಿ ಆರೋಗ್ಯವಾಗಿದ್ದೇನೆ. ಕಾರ್ಯಕರ್ತರ ಪ್ರಾರ್ಥನೆಯಿಂದ ಗುಣಮುಖನಾಗಿದ್ದೇನೆ. ಗೃಹಸಚಿವರೂ ಫೋನ್ ಮಾಡಿ ವಿಚಾರಿಸಿದ್ದಾರೆ ಎಂದು ಹೇಳಿದರು.
ಸ್ಫೋಟಗೊಂಡಿದ್ದು ಪಟಾಕಿಯಂತಿರಲಿಲ್ಲ. ನಾವೂ ದೀಪಾವಳಿಯಲ್ಲಿ ಪಟಾಕಿಗಳನ್ನು ಹೊಡೆದಿದ್ದೇವೆ. ಇದು ಬಾಲ್ ತರಹ ಇತ್ತು. ಅಂತಹ ಪಟಾಕಿಯನ್ನು ನಾವು ನೋಡಿರಲಿಲ್ಲ ಎಂದಿದ್ದಾರೆ.