ಚಿತ್ರದುರ್ಗ: ರಾಜ್ಯದಲ್ಲಿ ಮೇ 10ರಂದು ನಡೆದಿದ್ದ ವಿಧಾನಸಭಾ ಚುನಾವಣೆ ಮತ ಎಣಿಕೆ ಫಲಿತಾಂಶ ಶನಿವಾರ ಹೊರಬಿದ್ದಿದ್ದು, ಕೋಟೆನಾಡು ಚಿತ್ರದುರ್ಗ ಜಿಲ್ಲೆಯಲ್ಲಿ ಕಾಂಗ್ರೆಸ್ ತನ್ನ ಗತ ವೈಭವ ಮರಳಿ ಪಡೆದಿದೆ.
ಜಿಲ್ಲೆಯ 6 ಕ್ಷೇತ್ರಗಳಲ್ಲಿ ಐದು ಕೈ ಪಾಲಾಗಿದ್ದರೆ, ಒಂದರಲ್ಲಿ ಕಮಲ ಅರಳಿದೆ. ಅಸ್ತಿತ್ವ ಉಳಿಸಿಕೊಳ್ಳಲು ನಡೆಸಿದ್ದ ಜೆಡಿಎಸ್ ಹೋರಾಟ ಸಂಪೂರ್ಣ ವಿಫಲವಾಗಿದೆ.
ಮೊಳಕಾಲ್ಮೂರು, ಚಳ್ಳಕೆರೆ, ಚಿತ್ರದುರ್ಗ, ಹಿರಿಯೂರು, ಹೊಸದುರ್ಗ ಕ್ಷೇತ್ರಗಳನ್ನು ಕಾಂಗ್ರೆಸ್ ವಶಪಡಿಸಿಕೊಂಡಿದ್ದರೆ, ಹೊಳಲ್ಕೆರೆಯಲ್ಲಿ ಬಿಜೆಪಿ ಜಯ ಸಾಧಿಸಿದೆ.
ಪ್ರಧಾನಿ ನರೇಂದ್ರ ಮೋದಿ ಅವಳಿ ಜಿಲ್ಲೆಗಳಲ್ಲಿ ಬೃಹತ್ ರ್ಯಾಲಿ ನಡೆಸುವ ಮೂಲಕ ಬಿಜೆಪಿ ಅಭ್ಯರ್ಥಿಗಳ ಪರ ಭರ್ಜರಿ ಬ್ಯಾಟಿಂಗ್ ನಡೆಸಿದ್ದರೂ, ಚಿತ್ರದುರ್ಗ ಮತ್ತು ದಾವಣಗೆರೆ ಜಿಲ್ಲೆಗಳಲ್ಲಿ ಬಿಜೆಪಿಗೆ ಹಿಟ್ವಿಕೆಟ್ನ ಅನುಭವವಾಗಿದೆ.
ಆಡಳಿತ ವಿರೋಧಿ ಅಲೆಗೆ ಕಮಲ ಮುದುಡಿದೆ. ಲಿಂಗಾಯತ ಫ್ಯಾಕ್ಟರ್, ಒಳಮೀಸಲು ನೀತಿ ಬಿಜೆಪಿಗೆ ನೆರವಾಗಿಲ್ಲ. ಹೊಳಲ್ಕೆರೆಯಲ್ಲಿ ಅರಳಿದ ಕಮಲದಿಂದ ಜಿಲ್ಲೆಯಲ್ಲಿ ಬಿಜೆಪಿ ನಿಟ್ಟಿಸಿರು ಬಿಡುವಂತಾಗಿದೆ.
ಹಿರಿಯೂರಲ್ಲಿ ಪ್ರಿಯಾಂಕಾ ನಡೆಸಿದ ರೋಡ್ ಶೋ ಅದಕ್ಕೂ ಮೊದಲು ಕಳೆದ ಸೆಪ್ಟೆಂಬರ್ನಲ್ಲಿ ರಾಹುಲ್ ಗಾಂಧಿ ನಡೆಸಿದ್ದ ಭಾರತ್ ಜೋಡೊ ಪಾದಯಾತ್ರೆ ಕಾಂಗ್ರೆಸ್ ಪಕ್ಷಕ್ಕೆ ಬೂಸ್ಟರ್ ಡೋಸ್ ನೀಡಿದೆ ಎಂಬ ಮಾತನ್ನು ಈ ಫಲಿತಾಂಶ ಸಾಬೀತು ಪಡಿಸಿದಂತಾಗಿದೆ.
ಚಂದ್ರಪ್ಪಗೆ ಬರ್ತಡೇ ಗಿಫ್ಟ್
ಹೊಳಲ್ಕೆರೆ ಮತದಾರರು ಎಂ.ಚಂದ್ರಪ್ಪ ಅವರನ್ನು ಗೆಲ್ಲಿಸುವ ಮೂಲಕ ಈ ಬಾರಿ ಅವರಿಗೆ ಜನ್ಮದಿನಕ್ಕೆ ಗೆಲುವಿನ ಉಡುಗೊರೆ ನೀಡಿದ್ದಾರೆ. ಮೇ 10 ಚಂದ್ರಪ್ಪ ಅವರ ಜನ್ಮದಿನ. ಅಂದೇ ಮತದಾನ ನಡೆದಿತ್ತು.
ಚಂದ್ರಪ್ಪ ಅವರ ಪುತ್ರ ಎಂ.ಸಿ.ರಘುಚಂದನ್ ಪ್ರಚಾರದ ಕಾರ್ಯದಲ್ಲಿ ಅಪ್ಪನ ನೆರಳಿನಂತೆ ಹಿಂಬಾಲಿಸಿದ್ದಾರೆ. ಬೆಂಬಲಿಗರು, ಕಾರ್ಯಕರ್ತರ ವಿಶ್ವಾಸದೊಂದಿಗೆ ಪಕ್ಷದ ಗೆಲುವಿಗೆ ಶ್ರಮಿಸಿದ್ದಾರೆ.