ನರಗುಂದ: ಬಸ್ ಪ್ರಯಾಣ ದರ ಶೇ. 15ರಷ್ಟು ಏರಿಕೆ ಮಾಡಿರುವುದನ್ನು ಖಂಡಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ವತಿಯಿಂದ ತಹಸೀಲ್ದಾರ್ ಶ್ರೀಶೈಲ ತಳವಾರ ಅವರಿಗೆ ಮಂಗಳವಾರ ಮನವಿ ಸಲ್ಲಿಸಲಾಯಿತು.
ಎಬಿವಿಪಿ ನಗರ ಕಾರ್ಯದರ್ಶಿ ಅಭಿಷೇಕ ನವಲಗುಂದ ಮಾತನಾಡಿ, ಸರ್ಕಾರಿ ಬಸ್ಗಳನ್ನೇ ಅವಲಂಬಿಸಿ ಪ್ರತಿನಿತ್ಯ ಲಕ್ಷಾಂತರ ಜನ ಬಡವರು, ಮಧ್ಯಮ ವರ್ಗದವರು, ಹಿರಿಯ ನಾಗರಿಕರು ತಮ್ಮ ವಿವಿಧ ಕೆಲಸ ಕಾರ್ಯಗಳಿಗೆ ಪ್ರಯಾಣಿಸುತ್ತಾರೆ. ಆದರೀಗ ಸರ್ಕಾರ ಏಕಾಏಕಿ ಬಸ್ ದರ ಏರಿಕೆ ಮಾಡಿ ಬಡವರು, ಸಾಮಾನ್ಯ ಕೂಲಿಕಾರ್ವಿುಕರ ಜೇಬಿಗೆ ಕತ್ತರಿ ಹಾಕುವ ಕೆಲಸ ಮಾಡುತ್ತಿದೆ. ಆರ್ಥಿಕ ಸಮಸ್ಯೆಯಿಂದ ಬಡವರು ಕುಟುಂಬಗಳ ನಿರ್ವಹಣೆಗೆ ಪರದಾಡುವಂತೆ ಮಾಡುತ್ತಿದ್ದಾರೆ. ಶಕ್ತಿ ಯೋಜನೆ ಜಾರಿಯಾದಾಗಿನಿಂದ ಮಹಿಳಾ ಪ್ರಯಾಣಿಕರ ಸಂಚಾರ ಗಣನೀಯ ಪ್ರಮಾಣದಲ್ಲಿ ಏರಿಕೆ ಖಂಡಿದೆ. ಬಸ್ ಹಾಗೂ ಕುಳಿತುಕೊಳ್ಳಲು ಆಸನಗಳ ಕೊರತೆಯಿಂದ ಶಾಲಾ, ಕಾಲೇಜ್ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಸಾಕಷ್ಟು ತಾಪತ್ರಯ ಅನುಭವಿಸುವಂತಾಗಿದೆ. ಶಾಲಾ ಮಕ್ಕಳು ನಿಗದಿತ ಸಮಯಕ್ಕೆ ತರಗತಿಗಳಿಗೆ ಹಾಜರಾಗಲು ಸಾಧ್ಯವಾಗುತ್ತಿಲ್ಲ. ಬಸ್ಗಳಲ್ಲಿ ಪ್ರಯಾಣಿಕರಿಗೆ ಕುಳಿತುಕೊಳ್ಳಲು ಆಸನಗಳಿಲ್ಲದೆ ಬಸ್ಗಳನ್ನು ಮಾರ್ಗಮಧ್ಯದಲ್ಲಿ ನಿಲ್ಲಿಸಿದ ಪ್ರಸಂಗಗಳು ನಡೆಯುತ್ತಿವೆ. ಸರ್ಕಾರ ಕೂಡಲೇ ಬಸ್ಗಳ ಸಂಖ್ಯೆ ಹೆಚ್ಚಿಸಿ ವಿದ್ಯಾರ್ಥಿಗಳು, ಜನಸಾಮಾನ್ಯರ ಸುಗಮ ಸಂಚಾರಕ್ಕೆ ಅವಕಾಶ ಕಲ್ಪಿಸಿಕೊಡಬೇಕು ಎಂದು ಆಗ್ರಹಿಸಿದರು.
ಎಬಿವಿಪಿ ತಾಲೂಕು ಸಂಚಾಲಕ ಆಕಾಶ ಕಲಾಲ, ರುದ್ರೇಶ ಕೊಣ್ಣೂರ, ಮಲ್ಲನಗೌಡ ಹಿರೇಗೌಡ್ರ, ಆದಿತ್ಯ ಉಳ್ಳಾಗಡ್ಡಿ, ಅರುಣ ಮುಳ್ಳೂರ, ಇತರರಿದ್ದರು.