ಬೆಂಗಳೂರು: ಪ್ರಸ್ತುತ ಪ್ರಗತಿಯಲ್ಲಿರುವ ವೈಟ್ ಟಾಪಿಂಗ್ ರಸ್ತೆ ಕಾಮಗಾರಿಗಳನ್ನು ತ್ವರಿತವಾಗಿ ಕೈಗೆತ್ತಿಕೊಂಡು ಕಾಲಮಿತಿಯೊಳಗೆ ಪೂರ್ಣಗೊಳಿಸುವಂತೆ ಪಾಲಿಕೆಯ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರು ಹಿರಿಯ ಅಧಿಕಾರಿಗಳು ಹಾಗೂ ಗುತ್ತಿಗೆದಾರರಿಗೆ ಸೂಚಿಸಿದ್ದಾರೆ.
ಆರ್.ಆರ್.ನಗರ ವಲಯ ವ್ಯಾಪ್ತಿಯಲ್ಲಿ ಬಿಬಿಎಂಪಿ ಕೈಗೆತ್ತಿಕೊಂಡಿರುವ ವಿವಿಧ ಅಭಿವೃದ್ಧಿ ಕಾಮಗಾರಿಗಳ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಬಳಿಕ ಅವರು ಈ ಸೂಚನೆಯನ್ನು ನೀಡಿದರು.
ಯಶವಂತಪುರದ ಎಂಇಐ ರಸ್ತೆಯಲ್ಲಿ 950 ಮೀ. ಉದ್ದದಷ್ಟು ವೈಟ್ ಟಾಪಿಂಗ್ ಕಾಮಗಾರಿಯನ್ನು ಸಂಚಾರಿ ಪೊಲೀಸರ ಅನುಮತಿ ಪಡೆದು ಆರಂಭಿಸಲಾಗಿದೆ. ಎರಡೂ ಬದಿಯ ರಸ್ತೆಯನ್ನು ಸಂಪೂರ್ಣವಾಗಿ ಮುಚ್ಚಿ ಕಾಮಗಾರಿ ನಡೆಸಲಾಗುತ್ತಿದೆ. ಹಾಗಾಗಿ ಕಾಮಗಾರಿಯನ್ನು ಮುಂಬರುವ ಮಾರ್ಚ್ ತಿಂಗಳಾಂತ್ಯದೊಳಗಾಗಿ ಪೂರ್ಣಗೊಳಿಸಬೇಕು ಎಂದು ನಿರ್ದೇಶಿಸಿದರು.
ಈ ರಸ್ತೆಯಲ್ಲಿ ನೀರುಗಾಲುವೆ, ಸ್ಯಾನಿಟರಿ ಲೈನ್, ಡಕ್ಟ್ ಅಳವಡಿಕೆ, ವಿದ್ಯುತ್ ಲೈನ್ ಚೇಂಬರ್ ಕಾಮಗಾರಿ ಬಹುತೇಕ ಪೂರ್ಣಗೊಂಡಿದೆ. ಪಾದಚಾರಿ ಮಾರ್ಗದ ಕಾಮಗಾರಿ ಪ್ರಗತಿಯಲ್ಲಿದೆ. ಇದೇ ರೀತಿ ಕೆಂಗೇರಿ ಹಳೇ ರಿಂಗ್ ರಸ್ತೆಯಿಂದ ಅಮ್ಮ ಆಶ್ರಮದ ವರೆಗಿನ ಕುವೆಂಪು ಮುಖ್ಯರಸ್ತೆಯಲ್ಲಿ 1.04 ಕಿ.ಮೀ. ಉದ್ದ ವೈಟ್ ಟಾಪಿಂಗ್ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಈಗಾಗಲೇ ಪೈಪ್ಲೈನ್, ಡಕ್ಟ್ ಇತ್ಯಾದಿ ಕಾಮಗಾರಿ ಪೂರ್ಣಗೊಳಿಸಲಾಗಿದೆ. ಇದೀಗ ವೈಟ್ ಟಾಪಿಂಗ್ ಕಾಮಗಾರಿಯನ್ನು ಶೀಘ್ರ ಕೈಗೆತ್ತೊಕೊಂಡು ಮುಂದಿನ ೆಬ್ರವರಿ ಅಂತ್ಯದೊಳಗಾಗಿ ಪೂರ್ಣಗೊಳಿಸುವಂತೆ ಸೂಚಿಸಿದರು.
ಜಲಾವೃತ ತಡೆಗೆ ಕೊಳವೆ ಅಳವಡಿಕೆ:
ಯಶವಂತಪುರ ರೈಲ್ವೆ ನಿಲ್ದಾದ ಬಳಿಯ ತಣ್ಣೀರಹಳ್ಳ ಹಾಗೂ ರೈಲ್ವೆ ಕ್ವಾಟ್ರಸ್ ಬಳಿ ಮಳೆಗಾಲದಲ್ಲಿ ಜಲಾವೃತವಾಗುವುದನ್ನು ತಪ್ಪಿಸಲು 200 ಮೀ. ಉದ್ದ ಪೈಪ್ ಲೈನ್ ಅಳವಡಿಕೆಯನ್ನು ಪರಿಶೀಲಿಸಿ ಶೀಘ್ರ ಕಾಮಗಾರಿಯನ್ನು ಪೂರ್ಣಗೊಳಿಸಲು ಸೂಚನೆ ನೀಡಿದರು. ಈ ಪ್ರದೇಶದಲ್ಲಿ ಜಲಾವೃತ ಆಗುವುದನ್ನು ತಡೆಯಲು 1.8 ಮೀ.ನ ಸೀಮೆಂಟ್ ಕೊಳವೆ ಅಳವಡಿಸಲಾಗುತ್ತಿದ್ದು, ಕಾಮಗಾರಿಯನ್ನು 1.5 ಕೋಟಿ ರೂ. ವೆಚ್ಚದಲ್ಲಿ ಕೈಗತ್ತಿಕೊಳ್ಳಲಾಗಿದೆ. ಕಾಮಗಾರಿ ಪೂರ್ಣಗೊಂಡರೆ ಇಲ್ಲಿ ಯಾವುದೇ ರೀತಿಯ ಜಲಾವೃತ ಆಗುವುದಿಲ್ಲ ಎಂದು ವಲಯದ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.
ಸ್ಥಳಪರಿಶೀಲನೆ ವೇಳೆ ವಲಯ ಆಯುಕ್ತ ಸತೀಶ್, ಜಂಟಿ ಆಯುಕ್ತ ಡಾ. ಆರತಿ ಆನಂದ್, ವಲಯ ಮುಖ್ಯ ಅಭಿಯಂತರ ಸ್ವಯಂಪ್ರಭ, ಯೋಜನಾ ವಿಭಾಗದ ಮುಖ್ಯ ಅಭಿಯಂತರ ಲೋಕೇಶ್ ಹಾಗೂ ಇತರ ಅಧಿಕಾರಿಗಳು ಇದ್ದರು.
ನಾಗರಬಾವಿ ಕೆರೆಗೆ ಬೇಲಿ ಅಳವಡಿಸಿ:
ನಾಗರಬಾವಿ ಕೆರೆಗೆ (4 ಎಕರೆ 7 ಗುಂಟೆ ವಿಸ್ತೀರ್ಣ) ಸಂಬಂಧಿಸಿದಂತೆ ಸರ್ವೆ ಇಲಾಖೆಯ ವತಿಯಿಂದ ಕೂಡಲೇ ಸಮೀಕ್ಷಾ ವರದಿ ಪಡೆದು ಬೇಲಿ ಕಾರ್ಯ ಕೈಗೊಳ್ಳಬೇಕು. ಕೆರೆಯ ಇನ್ಲೆಟ್ ಭಾಗದಲ್ಲಿ ಆರ್ಸಿಸಿ ವಾಲ್ ಕಾಮಗಾರಿ ನಡೆಯುತ್ತಿದ್ದು, ತ್ವರಿತವಾಗಿ ಕಾಮಗಾರಿಯನ್ನು ಪೂರ್ಣಗೊಳಿಸಬೇಕು. ಕೆರೆ ಪಕ್ಕದಲ್ಲಿ ಉದ್ಯಾನಕ್ಕೆಂದು ಮೀಸಲಿಟ್ಟಿರುವ ಖಾಲಿ ಜಾಗವಿದ್ದು, ಅದನ್ನು ಸರ್ವೇ ಮಾಡಿ ಗಡಿ ಗುರುತಿಸಿ ಫೆನ್ಸಿಂಗ್ ಮಾಡಲು ಸೂಚಿಸಲಾಯಿತು.