ಬೆಂಗಳೂರು: ಮರು ಜಾರಿಯಾದ ಪರಿಷ್ಕೃತ ‘ಯಶಸ್ವಿನಿ ಯೋಜನೆ’ಯಡಿ ಚಿಕಿತ್ಸಾ ದರಗಳನ್ನು ಸ್ಪರ್ಧಾತ್ಮಕವಾಗಿ ನಿಗದಿಪಡಿಸಿ, ಪ್ರಮುಖ ಆಸ್ಪತ್ರೆಗಳ ಆಕರ್ಷಣೆ, ಹೆಚ್ಚೆಚ್ಚು ರೈತ ಸಹಕಾರಿ ಸದಸ್ಯರಿಗೆ ಚಿಕಿತ್ಸಾ ಸೌಲಭ್ಯ ವಿಸ್ತರಣೆಗೆ ಪೂರಕ ಶಿಫಾರಸುಗಳು ಸೇರಿದ ವರದಿಯನ್ನು ಶಾಸಕ ಡಾ.ಎನ್.ಟಿ.ಶ್ರೀನಿವಾಸ ಅಧ್ಯಕ್ಷತೆಯ ಯಶಸ್ವಿನಿ ದರ ಪರಿಷ್ಕರಣಾ ಸಮಿತಿ ಮಂಗಳವಾರ ಸಲ್ಲಿಸಿದೆ.

ಸಿಎಂ ಅಧಿಕೃತ ನಿವಾಸ ‘ಕಾವೇರಿ’ಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಮಿತಿ ಸಲ್ಲಿಸಿದ ವರದಿಯನ್ನು ಸ್ವೀಕರಿಸಿ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಪರಿಷ್ಕತ ದರಗಳನ್ನು ಸರ್ಕಾರ ಒಪ್ಪಿದರೆ ಯೋಜನೆ ಪರಿಣಾಮಕಾರಿ ಅನುಷ್ಠಾನ ಸಾಧ್ಯವಾಗಲಿದೆ ಎಂಬ ಆಶಾಭಾವನೆ ವ್ಯಕ್ತವಾಗಿದೆ. ವಿವಿಧ ಚಿಕಿತ್ಸೆಗಳಿಗೆ ಶೇ.10ರಿಂದ 20, ಗರಿಷ್ಠ ಶೇ.80ರಷ್ಟು ದರ ಏರಿಕೆಗೆ ಶಿಾರಸು ಮಾಡಿದೆ. ಯೋಜನೆಯಡಿ 782 ಆಸ್ಪತ್ರೆಗಳಿದ್ದು, ಮತ್ತಷ್ಟು ಪ್ರಮುಖ ಆಸ್ಪತ್ರೆಗಳು ಸೇರ್ಪಡೆ ನಿರೀಕ್ಷೆಯಿದೆ.
ಸರಾಸರಿ ಶೇಕಡ 50 ರಿಂದ 55ರಷ್ಟು ದರ ಹೆಚ್ಚಳಕ್ಕೆ ಸಮಿತಿ ಶಿಫಾರಸು ಮಾಡಿದೆ. ಇದರಿಂದ ಹೆಚ್ಚುವರಿಯಾಗಿ 70 ಕೋಟಿ ರೂ. ವೆಚ್ಚವಾಗಲಿದೆ. ಈ ಪೈಕಿ ಸರ್ಕಾರದಿಂದ 40 ಕೋಟಿ ರೂ., ಅನುದಾನ, ಉಳಿದ 30 ಕೋಟಿ ರೂ.ಗಳನ್ನು ಸದಸ್ಯರ ವಂತಿಗೆಯಿಂದ ಭರಿಸಬಹುದಾಗಿದೆ ಎಂದು ವರದಿಯಲ್ಲಿ ತಿಳಿಸಿದೆ.
ಯೋಜನೆಯಡಿ ಚಾಲ್ತಿ 2,128 ಚಿಕಿತ್ಸೆಗಳಿವೆ. ಇದರಲ್ಲಿ ತಜ್ಞರ ಸಲಹೆಯಂತೆ ಆರು ಹಳೆಯ ಚಿಕಿತ್ಸೆಗಳನ್ನು ಕೈಬಿಟ್ಟು, ಹೊಸದಾಗಿ 69 ಚಿಕಿತ್ಸೆಗಳನ್ನು ಸೇರಿಸಲಾಗಿದೆ. ಒಟ್ಟು 2,191 ಚಿಕಿತ್ಸೆಗಳನ್ನು ಅಂತಿಮಗೊಳಿಸಲಾಗಿದೆ.
ತಗ್ಗಲಿದೆ ಅವಲಂಬನೆ
ದಶಕದ ಹಿಂದಿನ ದರಗಳೆಂಬ ಕಾರಣಕ್ಕೆ ಯೋಜನೆಯಡಿ ಸೇರಲು ಪ್ರಮುಖ ಆಸ್ಪತ್ರೆಗಳು ಹಿಂದೇಟು ಹಾಕುತ್ತಿದ್ದವು. ದರ ಪರಿಷ್ಕರಣೆಯಾದರೆ ಪ್ರಮುಖ ಆಸ್ಪತ್ರೆಗಳು ಯೋಜನೆಯ ನೆಟ್ವರ್ಕ್ ವ್ಯಾಪ್ತಿಗೆ ಬರುತ್ತವೆ.
ಈಗಿನ ಸ್ಥಿತಿಗತಿಗೆ ಅನುಗುಣವಾದ ಚಿಕಿತ್ಸೆ ಸೌಲಭ್ಯಗಳು ನಗದುರಹಿತವಾಗಿ ಲಭಿಸುವುದರಿಂದ ಹೆಚ್ಚು ಹೆಚ್ಚು ಸದಸ್ಯರು ನೋಂದಣಿ ಮಾಡಿಕೊಳ್ಳಲು ಮುಂದೆ ಬರುವರು. ಇದರಿಂದ ವಂತಿಗೆ ಸಂಗ್ರಹವೂ ಏರಿಕೆಯಾಗಲಿದ್ದು, ಭವಿಷ್ಯದಲ್ಲಿ ಸರ್ಕಾರದ ಮೇಲೆ ಅವಲಂಬನೆ ಕಡಿಮೆಗೊಳಿಸಲಿದೆ ಎಂದು ವರದಿ ಗಮನಸಳೆದಿದೆ.
ಆರೋಗ್ಯ ಸೇವೆಯಲ್ಲಿ ಹೊಸ ಹೊಸ ತಂತ್ರಜ್ಞಾನವನ್ನು ಅಳವಡಿಸಿಕೊಂಡು ಉನ್ನತಮಟ್ಟದ ಚಿಕಿತ್ಸೆಗಳನ್ನು ಹೊಸದಾಗಿ ಸೇರಿಸುವುದರಿಂದ ಚಿಕಿತ್ಸಾ ದರದಲ್ಲಿ ಸರಾಸರಿ ಶೇ.50 ರಿಂದ 55ರಷ್ಟು ಹೆಚ್ಚಳವಾಗಲಿದೆ.
ಅಂದಾಜಿನ ಪ್ರಕಾರ ಹೆಚ್ಚುವರಿ ವೆಚ್ಚ 70 ಕೋಟಿ ರೂ.ಗಳವರೆಗೆ ಆಗಲಿದೆ. ಅಂದರೆ 62.50 ಕೋಟಿ ರೂ.ಗಳಿಂದ 68.75 ಕೋಟಿ ರೂ. ಹೆಚ್ಚುವರಿ ಹೊರೆ ಬೀಳುವ ಸಂಭವವಿದೆ. ಸರ್ಕಾರದಿಂದ 40 ಕೋಟಿ ರೂ. ಅನುದಾನ, ವಂತಿಗೆ ಮೊತ್ತದಲ್ಲಿ 30 ಕೋಟಿ ರೂ. ಭರಿಸಿಕೊಂಡು ಹೆಚ್ಚುವರಿ ಹೊರೆ ಸರಿದೂಗಿಸಿ, ಯೋಜನೆ ಅನುಷ್ಠಾನ ಮಾಡಬಹುದಾಗಿದೆ ಎಂದು ಸಮಿತಿ ನೀಡಿದ ವರದಿಯಲ್ಲಿ ಸಮರ್ಥಿಸಿಕೊಂಡಿದೆ.