ರಾಜ್ಯ ರೈತ ಸಂಘದ ಉಪಾಧ್ಯಕ್ಷ ಮಲ್ಲಯ್ಯ ಕಿಡಿ
ರಾಮನಗರ : ಜಿಲ್ಲಾಧಿಕಾರಿ ರೈತ ವಿರೋಧಿಯಾಗಿದ್ದು, ಸೂಟು ಬೂಟುಗಳನ್ನು ಧರಿಸಿಕೊಂಡು ಬರುವವರಿಗೆ ತಲೆ ಬಾಗುತ್ತಾರೆ. ಬಾಯಿಗೆ ತುತ್ತಿಡುವ ಮುನ್ನ ಅನ್ನದಾತರಿಗೆ ಮಾಡಿದ ಅವಮಾನವನ್ನು ಒಮ್ಮೆ ಜಿಲ್ಲಾಧಿಕಾರಿಗಳು ಸ್ಮರಿಸಬೇಕಿದೆ ಎಂದು ರಾಜ್ಯ ರೈತ ಸಂಘದ ಉಪಾಧ್ಯಕ್ಷ ಮಲ್ಲಯ್ಯ ಕಿಡಿ ಕಾರಿದರು.
ರಾಮನಗರದ ಕೃಷಿ ಮಾರುಕಟ್ಟೆ ರೈತ ಭವನದ ಕಚೇರಿಯಲ್ಲಿ ಸಮಾನ ಮನಸ್ಕ ಸಂಘಟನೆಗಳೊಂದಿಗೆ ಬುಧವಾರ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಮನಗರ ಜಿಲ್ಲಾಧಿಕಾರಿ ರೈತರ ಬಗ್ಗೆ ಕನಿಷ್ಠ ಮಟ್ಟದ ಗೌರವವನ್ನು ಹೊಂದಿಲ್ಲ. ಪೊಲೀಸ್ ಇಲಾಖೆಯನ್ನು ಬಳಸಿಕೊಂಡು ಹೋರಾಟವನ್ನು ಹತ್ತಿಕ್ಕುತ್ತಿದ್ದಾರೆ. ಹಲವು ಹೋರಾಟಗಳಾದರೂ ಸೌಜನ್ಯಕ್ಕಾದರೂ ಭೇಟಿ ನೀಡಿ ಮಾತನಾಡುವ ಪ್ರಯತ್ನ ಮಾಡುತ್ತಿಲ್ಲ. ಮೈಸೂರಿನಲ್ಲಿ ನಡೆಯಲಿರುವ ರಾಜ್ಯ ರೈತ ಸಂಘದ ಸಮಾವೇಶದಲ್ಲಿ ಈ ಬಗ್ಗೆ ಪ್ರಸ್ತಾಪ ಮಾಡಿ ರಾಜ್ಯಾದ್ಯಂತ ಪ್ರತಿಭಟನೆ ಆರಂಭಿಸುತ್ತೇವೆ. ಮುಂದಿನ ಹೋರಾಟವು ರಾಮನಗರ ಜಿಲ್ಲೆ ಜನ ಕಂಡೂ ಕೇಳರಿಯದಷ್ಟು ಭೀಕರವಾಗಿರುತ್ತದೆ ಎಂದು ತಿಳಿಸಿದರು.
ಜಯಕರ್ನಾಟಕ ಜನಪರ ವೇದಿಕೆ ರಾಜ್ಯ ಸಲಹೆಗಾರ ಕುಮಾರಸ್ವಾಮಿ ಮಾತನಾಡಿ, ಇಂತಹ ಹೀನ ಮನಸ್ಥಿತಿ ಜಿಲ್ಲಾಧಿಕಾರಿ ನಮ್ಮ ಜಿಲ್ಲೆಗೆ ಶಾಪವಿದ್ದಂತೆ. ನಾವು ಕರ್ನಾಟಕದಲ್ಲಿದ್ದೇವೋ, ಪಾಕಿಸ್ತಾನದಲ್ಲಿದ್ದೇವೋ ಅರ್ಥವಾಗುತ್ತಿಲ್ಲ ಎಂದರು.ರಾಜ್ಯ ರೈತ ಸಂಘದ ಸಂಚಾಲಕ ಚೀಲೂರು ಮುನಿರಾಜು, ದಲಿತ ಮುಖಂಡ ಪ್ರಶಾಂತ್ ಹೊಸದುರ್ಗ, ರೈತ ಸಂಘದ ಜಿಲ್ಲಾಧ್ಯಕ್ಷ ತಿಮ್ಮೇಗೌಡ, ರಾಜ್ಯ ಸಮಿತಿ ಸದಸ್ಯ ಕೃಷ್ಣಯ್ಯ, ಜಿಲ್ಲಾ ಕಾರ್ಯದರ್ಶಿ ಪುಟ್ಟಸ್ವಾಮಿ, ತಾಲೂಕು ಅಧ್ಯಕ್ಷ ನಾಗರಾಜು, ಬಿಸಿಯೂಟ ನೌಕರರ ಸಂಘದ ಶಂಭುಗೌಡ, ನಿರ್ಮಲಾ, ಕನ್ನಡ ಭಾಸ್ಕರ್ ಮತ್ತಿತರರು ಇದ್ದರು.