ಬೆಂಗಳೂರು: ಸಚಿವ ಸ್ಥಾನಕ್ಕಾಗಿ ಲಾಬಿ ನಡೆಸ್ತಿರೋ ಸಚಿವಾಕಾಂಕ್ಷಿಗಳ ಅಂತಿಮ ಹಂತದ ಕಸರತ್ತು ಬೆಂಗಳೂರಿನಿಂದ ಈಗ ದೆಹಲಿಗೆ ಶಿಫ್ಟ್ ಆಗಿದೆ.
ದಾವೋಸ್ಗೆ ಸಿಎಂ ಬಿಎಸ್ ಯಡಿಯೂರಪ್ಪ ತೆರಳಿದ್ದಾರೆ. ಬಿಎಸ್ವೈ ವಾಪಸ್ ಬರೋದ್ರೊಳಗೆ ಹೈಕಮಾಂಡ್ ಮಟ್ಟದಲ್ಲಿ ಒಂದು ಹಂತದ ಲಾಬಿ ಮುಕ್ತಾಯಗೊಳಿಸಲು ನಿರ್ಧರಿಸಿರುವ ಮೂಲ ಬಿಜೆಪಿ ಸಚಿವಾಕಾಂಕ್ಷಿಗಳು ದೆಹಲಿಗೆ ತೆರಳಿದ್ದಾರೆ.
ಹೈಕಮಾಂಡ್ನ ಪ್ರಭಾವಿ ನಾಯಕರನ್ನು ಭೇಟಿಯಾಗಿ ಮಂತ್ರಿಗಿರಿಗೆ ಲಾಬಿ ನಡೆಸಲು ನಿರ್ಧರಿಸಿರುವ ಬಿಜೆಪಿ ಮೂಲ ಸಚಿವಾಕಾಂಕ್ಷಿಗಳು ದೆಹಲಿ ತಲುಪಿದ್ದು, ನಾಳೆ, ನಾಡಿದ್ದು ದೆಹಲಿಯಲ್ಲಿ ತಂಗಲಿದ್ದಾರೆ.
ಈಗಾಗ್ಲೆ ಉತ್ತರ ಭಾರತ ಪ್ರವಾಸದಲ್ಲಿರುವ ಡಿಸಿಎಂ ಆಕಾಂಕ್ಷಿ ಶ್ರೀರಾಮುಲು ದೆಹಲಿಗೆ ತೆರಳಿ ಜೆ.ಪಿ. ನಡ್ಡಾ ಮತ್ತು ಅಮಿತ್ ಷಾ ಭೇಟಿಯಾಗುವ ಸಾಧ್ಯತೆ ಇದೆ. ಉಮೇಶ್ ಕತ್ತಿ, ಲಕ್ಷ್ಮಣ ಸವದಿ, ಮುರುಗೇಶ್ ನಿರಾಣಿ, ರಾಜುಗೌಡ, ಪೂರ್ಣಿಮಾ ಶ್ರೀನಿವಾಸ, ಅರವಿಂದ ಲಿಂಬಾವಳಿ ಸೇರಿ ಬಿಜೆಪಿ ಮೂಲ ಸಚಿವಾಕಾಂಕ್ಷಿಗಳಿಂದ ದೆಹಲಿ ಪ್ರವಾಸ ತೆರಳುವ ಸಾಧ್ಯತೆ ಇದೆ.
ಗೆದ್ದ ಅರ್ಹ ಶಾಸಕರಿಂದ ಒಗ್ಗಟ್ಟು ಮುಂದುವರಿಸಿಕೊಂಡು ಹೋಗಲು ನಿರ್ಧರಿಸಿದ್ದಾರೆ. ಈ ಹಿಂದೆ ಆದ ಒಪ್ಪಂದದ್ದಂತೆ ಬಿಜೆಪಿ ನಾಯಕರು ನಡೆದುಕೊಳ್ಳಬೇಕು ಎಂದು ಹೈಕಮಾಂಡ್ ಮೇಲೆ ಒತ್ತಡ ಹೇರಲು ನಿರ್ಧರಿಸಿದ್ದಾರೆ. ಹುಬ್ಬಳ್ಳಿಗೆ ಆಗಮಿಸಿದ್ದ ಅಮಿತ್ ಷಾ ಭೇಟಿ ವೇಳೆ ಸಕಾರಾತ್ಮಕ ಸ್ಪಂದನೆ ಸಿಗದ ಹಿನ್ನೆಲೆಯಲ್ಲಿ ಲಾಬಿ ಮಾಡಲು ದೆಹಲಿಗೆ ಹೋಗಲಿದ್ದಾರೆ. ಈ ಮೊದಲು ಬೆಂಗಳೂರಿನಲ್ಲಿ ಗೆದ್ದ ಅರ್ಹ ಶಾಸಕರು ಒಂದು ಸುತ್ತಿನ ಸಭೆ ನಡೆಸಲಿದ್ದಾರೆ.
ದಾವೋಸ್ಗೆ ತೆರಳಿರುವ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಜನವರಿ 24ರಂದು ಬೆಂಗಳೂರಿಗೆ ವಾಪಸ್ ಆಗಲಿದ್ದಾರೆ. ಬಿಎಸ್ವೈ ವಾಪಸ್ ಆಗೋದ್ರಲ್ಲಿ ಹೈಕಮಾಂಡ್ ಭೇಟಿಯಾಗಲಿರುವ ಸಚಿವಾಕಾಂಕ್ಷಿಗಳು ಒಂದು ಸುತ್ತಿನ ಮಾತುಕತೆ ನಡೆಸಲಿದ್ದಾರೆ.
ಜನವರಿ 25ಕ್ಕೆ ಬಿಎಸ್ವೈ ಇದೇ ವಿಚಾರವಾಗಿ ದೆಹಲಿಗೆ ತೆರಳುವ ಸಾಧ್ಯತೆ ಇದೆ. ದೆಹಲಿ ಭೇಟಿ ವೇಳೆ ಹೈಕಮಾಂಡ್ ಅಂತಿಮ ನಿರ್ಧಾರ ತಿಳಿಸಿದ್ರೆ ಈ ತಿಂಗಳ ಅಂತ್ಯಕ್ಕೆ ಸಂಪುಟ ವಿಸ್ತರಣೆಯಾಗಲಿದೆ. (ದಿಗ್ವಿಜಯ ನ್ಯೂಸ್)