| ಬೆಂಕಿ ಬಸಣ್ಣ ನ್ಯೂಯಾರ್ಕ್
ಮೂರು ದಿನಗಳ ಕಾಲ ನಡೆಯಲಿರುವ ಆರನೇ ನಾವಿಕ ವಿಶ್ವ ಕನ್ನಡ ಸಮಾವೇಶವನ್ನು ಇಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿಯವರು ಅಂತರ್ಜಾಲದಲ್ಲಿ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ನಮ್ಮ ಅನಿವಾಸಿ ಕನ್ನಡಿಗರು ವಿದೇಶಗಳಲ್ಲಿ ನೆಲೆಸಿದ್ದರೂ ಕನ್ನಡ ನಾಡು-ನುಡಿ, ಸಾಹಿತ್ಯ, ಸಂಸ್ಕೃತಿ, ಸಾಂಸ್ಕೃತಿಕ ಪರಂಪರೆಯ ಹಿರಿಮೆಯನ್ನು ತಮ್ಮ ಮುಂದಿನ ಪೀಳಿಗೆಗೂ ಮುಂದುವರಿಸಿಕೊಂಡು ಹೋಗುತ್ತಿರುವ ಪ್ರಯತ್ನ ಶ್ಲಾಘನೀಯ ಎಂದು ಮುಕ್ತ ಕಂಠದಿಂದ ಪ್ರಶಂಸೆ ವ್ಯಕ್ತಪಡಿಸಿದರು.
ಡಾ. ಕೃಷ್ಣಮೂರ್ತಿ ಜೋಯಿಸ್ ಅವರು ಶ್ರದ್ಧೆಯಿಂದ ಮಾಡಿಕೊಟ್ಟ ಪೂಜೆಯಿಂದ ಈ ಸಮ್ಮೇಳನವು ಪ್ರಾರಂಭವಾದ ನಂತರ ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳು ಮತ್ತು ಶ್ರೀ ಸಿದ್ದೇಶ್ವರ ಸ್ವಾಮೀಜಿಗಳು ಆಶೀರ್ವಚನ ನೀಡಿದರು. ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ, ಕನ್ನಡ ಮತ್ತು ಸಂಸ್ಕೃತಿ ಸಚಿವ ಸುನೀಲ್ಕುಮಾರ್ ಅತಿಥಿ ಭಾಷಣ ಮಾಡಿದರು. ಈ ಸಮ್ಮೇಳನದ ಸ್ಮರಣ ಸಂಚಿಕೆ “ಭಾವಧಾರೆ”ಯನ್ನು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಟಿ.ಎಸ್.ನಾಗಾಭರಣ ಬಿಡುಗಡೆ ಮಾಡಿದರು.
ಇಂದಿನ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಸಂಸ್ಕೃತಿ ಸ್ಕೂಲ್ ಆಫ್ ಪರ್ಫಾರ್ಮಿಂಗ್ ಆರ್ಟ್ಸ್ ಬೆಂಗಳೂರು ಪ್ರಸ್ತುತ ಪಡಿಸಿದ “ದಶಾವತಾರ” ನೃತ್ಯನಾಟಕ, ರಾಹುಲ್ ವೆಲ್ಲಾಳ ಅವರ “ಸ್ವರ ಸಂಗಮ” ಶಾಸ್ತ್ರೀಯ ಸಂಗೀತ ಮತ್ತು ಸರಿಗಮಪ ಗಾಯಕರಿಂದ “ಸುರ್- ತರಂಗ್” ಸಂಗೀತ ಕಾರ್ಯಕ್ರಮಗಳು ಪ್ರಮುಖ ಆಕರ್ಷಣೆಯಾಗಿದ್ದವು.
ನಾವಿಕ ಅಧ್ಯಕ್ಷರಾದ ವಲ್ಲೀಶ ಶಾಸ್ತ್ರಿಯವರ ಸ್ಟ್ಯಾಂಡಪ್ ಕಾಮಿಡಿ ನೋಡುಗರನ್ನು ಹಾಸ್ಯದ ಕಡಲಿನಲ್ಲಿ ತೇಲಾಡಿಸಿತು. ಸತೀಶ್ ಹೊಸನಗರ, ಅನಂತಕೃಷ್ಣ, ರಾಧಾ ಕಟ್ಟಾ, ಶೋಭಾ ಶಿವರಾಂ ಮುಂತಾದವರು ವಿದೇಶಕ್ಕೆ ಮೊದಲು ಬಂದು ಗೊತ್ತಿಲ್ಲದೆ ಎಡವಟ್ಟು ಮಾಡಿಕೊಂಡು ತಮಗಾದ ರಸಾನುಭವವನ್ನು ಹಂಚಿಕೊಂಡರು.