ಕಂಪ್ಲಿ: ಪುರಸಭೆಯಿಂದ ನಗರದ ನಡುವಿನ ಮಸೀದಿಯಿಂದ ಜೋಗಿ ಕಾಲುವೆ ವರೆಗೂ ರಸ್ತೆ ವಿಸ್ತರಣೆ ಕಾಮಗಾರಿ ಶನಿವಾರ ಆರಂಭಿಸಿದ್ದು, ಪರ-ವಿರೋಧಗಳು ವ್ಯಕ್ತವಾದವು.


ಇದನ್ನೂ ಓದಿ:ಆಕ್ರಮಿತ ಕಟ್ಟಡ ತೆರವುಗೊಳಿಸಿದ ಅಧಿಕಾರಿಗಳು
ಹಂಪೆ ಹುಣ್ಣಿಮೆ ದಿನ ಬೆಳ್ಳಂಬೆಳಗ್ಗೆ ಮನೆ ಒಡೆಯಲು ಬಂದಿದ್ದಾರೆ. ಏ.3ರ ನೋಟಿಸನ್ನು ಏ.11ರ ಸಂಜೆ ಮನೆ ಮುಂದೆ ಅಂಟಿಸಿ ಏ.12ರ ಬೆಳಗ್ಗೆ ಬಲವಂತವಾಗಿ ನಮ್ಮನ್ನು ಹೊರಗೆಳೆದು ಕಟ್ಟಡ ತೆರವುಗೊಳಿಸುತ್ತಿದಾರೆ. ಪುರಸಭೆಯವರು ದೌರ್ಜನ್ಯ ನಡೆಸುತ್ತಿದ್ದಾರೆ. ಕೋರ್ಟ್ನಿಂದ 27ಮನೆಯವರು ಸ್ಟೇ ತಂದಿದ್ದರೂ ಏಕಾಏಕಿ ಮನೆ ಒಡೆಯುತ್ತಿದ್ದಾರೆ ಎಂದು ಸಾರ್ವಜನಿಕರು ಆಕ್ರೋಶವ್ಯಕ್ತಪಡಿಸಿದರು. ಕೆಲವರು ನಮ್ಮ ಮನೆಯನ್ನು ನಾವೇ ತೆರವು ಮಾಡಿಕೊಳ್ಳುತ್ತೇವೆ ಕಾಲಾವಕಾಶ ಕೊಡಿ ಎಂದರೂ ಮನೆ ಬಾಗಿಲಲ್ಲಿ ಕುಳಿತು ಪ್ರತಿಭಟಿಸಿದರು. ಜನರ ಮನವೊಲಿಸಲು ಪುರಸಭೆ ಸಿಬ್ಬಂದಿ ಹರಸಾಹಸಪಟ್ಟರು.
ವಕೀಲ ಮಂಜುನಾಥ ಮಸ್ಕಿ ಮಾತನಾಡಿ, ಅನಧಿಕೃತ ಕಟ್ಟಡ ಎಂದು ಪುರಸಭೆ ಅಧಿಕಾರಿಗಳು ಸಂಜೆ ನೋಟಿಸ್ ಕೊಟ್ಟು ಬೆಳಗ್ಗೆ ಜೆಸಿಬಿಯಿಂದ ಕಟ್ಟಡ ತೆರವುಗೊಳಿಸುತ್ತಿದ್ದಾರೆ. ಧಾರವಾಡ ಹೈಕೋರ್ಟ್ನಲ್ಲಿ ವ್ಯಾಜ್ಯ ಇದೆ. ಮನೆಯಲ್ಲಿ ಚಿಕ್ಕಮಕ್ಕಳು, ವೃದ್ಧರು ಇದ್ದಾರೆ. ಬೆಲೆ ಬಾಳುವ ವಸ್ತುಗಳಿವೆ ಎಂದು ಹೇಳಿದರೂ ಮನೆಗಳನ್ನು ಧ್ವಂಸ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಪುರಸಭೆ ಮುಖ್ಯಾಧಿಕಾರಿ ಕೆ.ದುರುಗಣ್ಣ ಮಾತನಾಡಿ, ರಸ್ತೆ ವಿಸ್ತರಣೆಯ 500ಮೀ. ಜಾಗದಲ್ಲಿ ಎಡಭಾಗದಲ್ಲಿ 75, ಬಲಭಾಗದಲ್ಲಿ 60 ಮನೆಗಳಿವೆ. ಒಂದು ಮನೆಯವರು ಮಾತ್ರ ನ್ಯಾಯಾಲಯದಿಂದ ಸ್ಟೇ ತಂದಿದ್ದು, 28ಮನೆಯವರು ನ್ಯಾಯಾಲಯದಿಂದ ಪುರಸಭೆಗೆ ನೋಟಿಸ್ ಕೊಡಿಸಿದ್ದಾರೆ. ರಸ್ತೆ ಅಗಲೀಕರಣಕ್ಕಾಗಿ 2025ರ ಮಾ.1ರಂದು ಶಾಸಕರು, ಪುರಸಭೆ ಅಧ್ಯಕ್ಷರ ಸಮಕ್ಷಮದಲ್ಲಿ ನಿವಾಸಿಗಳ ಸಭೆ ನಡೆಸಿ ರಸ್ತೆ ಮಧ್ಯದಿಂದ ಎರಡೂಬದಿ ತಲಾ 17.5 ಅಡಿ ತೆರವುಗೊಳಿಸಲು ನಿರ್ಧರಿಸಲಾಗಿದೆ. ಸ್ವಯಂ ತೆರವುಗೊಳಿಸಲು ಮುಂದಾದರೆ ಪುರಸಭೆ ಜೆಸಿಬಿ ಒದಗಿಸುವುದಾಗಿ ಹಲವು ಬಾರಿ ಮೌಖಿಕವಾಗಿ ತಿಳಿಸಿದೆ. ಯುಗಾದಿ ಹಬ್ಬವಿದೆ ತೆರವು ಬೇಡ ಎಂದಿದ್ದರಿಂದ ಹದಿನೈದು ದಿನ ತಡೆದು ಇಂದು ತೆರವಿಗೆ ಮುಂದಾಗಿದ್ದೇವೆ. ಕಾನೂನು ಪ್ರಕಾರ ನಡೆಯುತ್ತಿದ್ದೇವೆ ಎಂದು ಸ್ಪಷ್ಟಪಡಿಸಿದರು.
ನಾಲ್ಕು ಜೆಸಿಬಿಗಳು, 50 ಪೌರ ಕಾರ್ಮಿಕರು, ಪುರಸಭೆ ಸಿಬ್ಬಂದಿ ರಸ್ತೆ ವಿಸ್ತರಣೆಯಲ್ಲಿ ಪಾಲ್ಗೊಂಡಿದ್ದರು. ಜೆಸ್ಕಾಂ, ಆರೋಗ್ಯ, ಲೋಕೋಪಯೋಗಿ ಇಲಾಖೆ ಸಿಬ್ಬಂದಿ, ಆರಕ್ಷಕ ನಿರೀಕ್ಷಕ, ನಾಲ್ವರು ಆರಕ್ಷಕ ಉಪ ನಿರೀಕ್ಷಕರು, 80 ಪೊಲೀಸ್ ಅಧಿಕಾರಿಗಳು, ಒಂದು ಜಿಲ್ಲಾ ಸಶಸ್ತ್ರ ಪಡೆ ಅಗಲೀಕರಣ ಸ್ಥಳದಲ್ಲಿ ಬಿಗಿ ಬಂದೋಬಸ್ತ್ ಒದಗಿಸಿದ್ದರು.