ಲಿಂಗಸುಗೂರು: ಪಟ್ಟಣದ ಗಡಿಯಾರ ವೃತ್ತದಿಂದ ಹನುಮಾನ ವೃತ್ತದವರೆಗಿನ ರಸ್ತೆಯ ಎರಡೂ ಬದಿ ಚರಂಡಿ ಒತ್ತುವರಿ ತೆರವುಗೊಳಿಸಬೇಕೆಂದು ಆಗ್ರಹಿಸಿ ಕರವೇ (ಪ್ರವೀಣಶೆಟ್ಟಿ ಬಣ) ಕಾರ್ಯಕರ್ತರು ಸೋಮವಾರ ಎಸಿ ಕಚೇರಿ ಎಫ್ಡಿಸಿ ಅನುಪಮಾ ಸಿಂಗ್ಗೆ ಮನವಿ ಸಲ್ಲಿಸಿದರು.


ಗಡಿಯಾರ ಚೌಕ್ನಿಂದ ಮೇನ್ ಬಜಾರ್ ಹನುಮಾನ ಚೌಕ್ವರೆಗೆ ಚರಂಡಿಗಳ ಮೇಲೆ ವಾಣಿಜ್ಯ ಮಳಿಗೆಗಳ ಮಾಲೀಕರು ಕಟ್ಟೆ, ಹಾಸು ಬಂಡೆ, ಮೆಟ್ಟಿಲುಗಳನ್ನು ನಿರ್ಮಿಸಲಾಗಿದೆ. ಇದರಿಂದ ಚರಂಡಿಗಳಲ್ಲಿ ಹೂಳು ತುಂಬಿ ತೆರವುಗೊಳಿಸಲಾಗದ ಪರಿಸ್ಥಿತಿ ನಿರ್ಮಾಣವಾಗಿದೆ. ಮೇನ್ ಬಜಾರ್ ಇರುವುದರಿಂದ ಜನದಟ್ಟಣೆ, ವಾಹನಗಳ ನಿಲುಗಡೆ, ವಾಹನ ಸಂಚಾರದಿಂದ ಸಂಚಾರಕ್ಕೆ ಅಡ್ಡಿ ಉಂಟಾಗಿದೆ.
ಸಾರ್ವಜನಿಕರ ಅನುಕೂಲಕ್ಕಾಗಿ ಚರಂಡಿ ಒತ್ತುವರಿ ತೆರವುಗೊಳಿಸಬೇಕು. ಬಳಿಕ ಚರಂಡಿ ಹೂಳು ತೆಗೆಯಿಸಿ ಪಾದಚಾರಿಗಳ ಮುಕ್ತ ಸಂಚಾರಕ್ಕೆ ಅವಕಾಶ ಕಲ್ಪಿಸಬೇಕೆಂದು ಒತ್ತಾಯಿಸಿದರು. ಕರವೇ ತಾಲೂಕು ಅಧ್ಯಕ್ಷ ಆಂಜನೇಯ ಭಂಡಾರಿ, ಉಪಾಧ್ಯಕ್ಷ ಭೀಮೇಶ ನಾಯಕ, ಪ್ರಧಾನ ಕಾರ್ಯದರ್ಶಿ ಕುರುಮೇಶ ನಾಯಕ, ಶಿವು ಪತ್ತಾರ, ಸಲೀಂಖಾನ್, ಮೌನೇಶ ಬುಳ್ಳಾಪುರ, ಅಶೋಕ ನಾಯಕ, ಸಿದ್ದು ಛಲವಾದಿ ಇದ್ದರು.