ಯಲಬುರ್ಗಾ: ಸಂಪ್ರದಾಯದಂತೆ ರೈತಾಪಿ ವರ್ಗದವರು ಹಬ್ಬ, ಹರಿದಿನಗಳಲ್ಲಿ ಮನೆ ಸಾರಿಸುವುದು, ರಂಗೋಲಿ ಹಾಕುವ ಮೂಲಕ ದೇವರ ಭಾವಚಿತ್ರಗಳಿಗೆ ಪೂಜೆ ಸಲ್ಲಿಸುವುದು ವಾಡಿಕೆ.
ಇದನ್ನೂ ಓದಿ: VIDEO| ನಿತ್ಯ ಪೂಜೆ ವೇಳೆಗೆ ಬರುತ್ತೆ ಈ ಹಾವು! ಗಣಪತಿಗೆ ಪ್ರದಕ್ಷಿಣೆ ಹಾಕಿ ವಾಪಸ್ ಹೋಗುತ್ತೆ
ಧಾರ್ಮಿಕ ಪರಂಪರೆಯಂತೆ ಪೂಜೆ
ಇದಕ್ಕೆ ಅಪವಾದ ಎಂಬಂತೆ ತಾಲೂಕಿನ ಚಿಕ್ಕಮ್ಯಾಗೇರಿ ಗ್ರಾಪಂ ವ್ಯಾಪ್ತಿಯ ಕುಡಗುಂಟಿ ಗ್ರಾಮದಲ್ಲಿ ನರೇಗಾದಡಿ ಕೈಗೊಂಡಿರುವ ನಾಲಾ ಹೂಳೆತ್ತುವ ಕಾಮಗಾರಿ ಸ್ಥಳದಲ್ಲಿ ಅಮಾವಾಸ್ಯೆ ನಿಮಿತ್ತ ಕೂಲಿಕಾರರು ಮಣ್ಣಿನಿಂದ ತಯಾರಿಸಿದ ಈಶ್ವರ ಮತ್ತು ಬಸವಣ್ಣ ಮೂರ್ತಿಗೆ ಧಾರ್ಮಿಕ ಪರಂಪರೆಯಂತೆ ಪೂಜೆ ಸಲ್ಲಿಸಿ ಗಮನ ಸೆಳೆದರು.
ನಾಲಾ ಹೂಳೆತ್ತುವ ಕಾಮಗಾರಿ ಸ್ಥಳದಲ್ಲಿ ಈಚಲು ಮರದ ಕೆಳಗಡೆ ಮಣ್ಣಿನಲ್ಲಿ ಈಶ್ವರ, ಬಸವಣ್ಣನ ಮೂರ್ತಿ ಸ್ಥಾಪಿಸಿ ಹೂವುಗಳಿಂದ ಅಲಂಕಾರಗೊಳಿಸಿ ವಿಗ್ರಹಗಳ ಸುತ್ತಲೂ ರಂಗೋಲಿ ಬಿಡಿಸುವ ಮೂಲಕ ಭಕ್ತಿ ಭಾವದಿಂದ ಪೂಜೆ ಸಲ್ಲಿಸಿದರು.
ಸಕಾಲಕ್ಕೆ ಉತ್ತಮ ಮಳೆಯಾಗಿ ಬೇಡಿಕೆ
ತಾಲೂಕಿನಲ್ಲಿ ಮುಂಗಾರು ಬಿತ್ತನೆಗೆ ರೈತರು ಮಳೆಗಾಗಿ ಕಾದು ಕುಳಿತಿದ್ದಾರೆ. ಸಕಾಲಕ್ಕೆ ಉತ್ತಮ ಮಳೆಯಾಗಿ ಕೆರೆ, ಕುಂಟೆ, ನಾಲಾ, ಕೃಷಿ ಹೊಂಡಗಳು ತುಂಬಿ ರೈತರ ಬದುಕು ಹಸನಾಗಲಿ ಎನ್ನುವ ಸದುದ್ದೇಶದಿಂದ ನೂರಾರು ಕೂಲಿಕಾರರು ಕೆಲಸದ ಸ್ಥಳದಲ್ಲಿ ಬಿಡುವಿನ ವೇಳೆ ಮೂರ್ತಿಗಳನ್ನು ಸ್ಥಾಪಿಸಿ ದೇವರಲ್ಲಿ ನಿತ್ಯ ಬೇಡಿಕೊಳ್ಳುತ್ತಾರೆ.
ಗ್ರಾಪಂ ಅಧ್ಯಕ್ಷೆ ಕೆಂಚವ್ವ ರಾಮಣ್ಣ ಹಿರೇಮನಿ, ಉಪಾಧ್ಯಕ್ಷ ಶರಣಪ್ಪ ಕುರಿ, ಪಿಡಿಒ ವೆಂಕಟೇಶ ನಾಯ್ಕ, ಸದಸ್ಯರಾದ ಶರಣಪ್ಪ ಹಾದಿಮನಿ, ದೇವಪ್ಪ, ಫಾತಿಮಾ, ಕಂಪ್ಯೂಟರ್ ಆಪರೇಟರ್ ಶರಣಪ್ಪ ಮಂಡಲಗೇರಿ, ಬಿಎಫ್ಟಿ ದೇವಪ್ಪ ಬತ್ತಿ, ಶರಣಯ್ಯ ಹಿರೇಮಠ ಸ್ಥಳಕ್ಕೆ ಭೇಟಿ ನೀಡಿ ಕೂಲಿಕಾರರ ಭಕ್ತಿಗೆ ಹರ್ಷ ವ್ಯಕ್ತಪಡಿಸಿದರು.
ಜಲಮೂಲಗಳ ಹೆಚ್ಚಳಕ್ಕಾಗಿ ನರೇಗಾದಡಿ ಕೃಷಿಹೊಂಡ, ನಾಲಾ ಸುಧಾರಣೆ, ಬದು ನಿರ್ಮಾಣ ಹೀಗೆ ನಾನಾ ಕಾಮಗಾರಿ ಕೈಗೊಳ್ಳಲಾಗುತ್ತದೆ. ಇದರಿಂದ ಗ್ರಾಮೀಣ ಕೂಲಿಕಾರರಿಗೆ ಅನುಕೂಲವಾಗಲಿದೆ. ಮಳೆಗಾಗಿ ಪ್ರಾರ್ಥಿಸಿ ಅಮಾವಾಸ್ಯೆಯಂದು ನಾಲಾ ಸುಧಾರಣೆ ಸ್ಥಳದಲ್ಲಿ ಮಣ್ಣಿನಿಂದ ಈಶ್ವರ, ಬಸವಣ್ಣ ಮೂರ್ತಿ ಸ್ಥಾಪಿಸಿ ಪೂಜೆ ಸಲ್ಲಿಸಿರುವುದು ಗಮನ ಸೆಳೆದಿದೆ.
| ವೆಂಕಟೇಶ ನಾಯಕ್, ಗ್ರಾಪಂ ಪಿಡಿಒ, ಚಿಕ್ಕಮ್ಯಾಗೇರಿಗ್ರಾಮ ಪಂಚಾಯಿತಿ ನರೇಗಾದಡಿ ನಮ್ಮ ಗ್ರಾಮದಲ್ಲಿ ಉದ್ಯೋಗ ಖಾತ್ರಿ ಕೆಲಸ ಆರಂಭಿಸಿ ಎಲ್ಲರಿಗೂ ಬೇಸಿಗೆಯಲ್ಲಿ ಕೆಲಸ ಸಿಗುವಂತೆ ಮಾಡಿರುವುದು ಬಡ ಕೂಲಿಕಾರರಿಗೆ ಸಹಕಾರಿಯಾಗಿದೆ. ಇದರಿಂದ ಗುಳೆ ಹೋಗುವುದು ಬಹುತೇಕ ತಪ್ಪಿದೆ.
| ಗದ್ದೆಪ್ಪ ಕರಡದ, ಕುಮಾರ ಲಗಳೂರು, ಕಾಯಕ ಬಂಧುಗಳು, ಕುಡಗುಂಟಿ