ಮೀರತ್: ಪೌರತ್ವ ತಿದ್ದುಪಡಿ ಕಾಯ್ದೆಯಿಂದ ಭಾರತೀಯ ಮುಸ್ಲಿಮರಿಗೆ ಯಾವುದೇ ತೊಂದರೆಯಾಗುವುದಿಲ್ಲ. ಈ ಬಗ್ಗೆ ಅನುಮಾನ ಇದ್ದರೇ ಸಚಿವಾಲಯವನ್ನು ಸಂಪರ್ಕಿ ಮಾಹಿತಿ ಪಡೆಯಿರಿ ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್ಸಿಂಗ್ ಹೇಳಿದರು.
ಮೀರತ್ನ ಶತಾಬ್ದಿ ನಗರದಲ್ಲಿ ಬಿಜೆಪಿ ಏರ್ಪಡಿಸಿದ್ದ ಪೌರತ್ವ ಕಾಯ್ದೆ ಜಾರಿ ಅರಿವು ಮೂಡಿಸುವ ರ್ಯಾಲಿಯಲ್ಲಿ ಅವರು ಮಾತನಾಡಿದರು.
ಪೌರತ್ವ ಕಾಯ್ದೆಯಿಂದ ಮುಸ್ಲಿಮರಿಗೆ ಯಾವುದೇ ತೊಂದರೆ ಎದುರಾಗುವುದಿಲ್ಲ. ಆದರೆ ವಿರೋಧ ಪಕ್ಷಗಳು ಈ ಕಾಯ್ದೆ ಬಗ್ಗೆ ಬೊಬ್ಬೆ ಹಾಕುತ್ತಿವೆ.
ದೇಶವು ಸ್ವತಂತ್ರ ಗಳಿಸಿದ ನಂತರ ರಾಷ್ಟ್ರೀಯ ನಾಗರಿಕರ ನೋಂದಣಿ (ಎನ್ಆರ್ಸಿ) ಕುರಿತು ಚರ್ಚೆ ಆರಂಭವಾಯಿತು. ಕಾಂಗ್ರೆಸ್ನ ರಾಜೀವ್ಗಾಂಧಿ ಪ್ರಧಾನಿಯಾಗಿದ್ದ ವೇಳೆ ಚರ್ಚೆ ಮತ್ತಷ್ಟು ತೀವ್ರಗೊಂಡಿತು. ಇದೆ ಕಾಯ್ದೆಯನ್ನು ನಾವು ಜಾರಿಗೆ ತಂದಿದ್ದೇವೆ. ಆದರೆ ಕಾಂಗ್ರೆಸ್ ಕಾಯ್ದೆ ನಾವು ಜಾರಿಗೆ ತಂದಿದ್ದು ಎಂದು ನಮ್ಮನ್ನು ಗುರಿಯಾಗಿಸಿಕೊಂಡು ಪ್ರತಿಭಟನೆ ನಡೆಸುತ್ತಿದೆ ಎಂದರು.
ಪೌರತ್ವ ಕಾಯ್ದೆ ನೆರೆ ರಾಷ್ಟ್ರಗಳಾದ ಬಾಂಗ್ಲಾದೇಶ, ಆಫ್ಘಾನಿಸ್ತಾನ ಮತ್ತು ಪಾಕಿಸ್ತಾನಗಳಲ್ಲಿ ಧರ್ಮದ ಆಧಾರದ ಮೇಲೆ ದೌರ್ಜನ್ಯಕ್ಕೆ ಒಳಗಾದವರಿಗೆ ಪೌರತ್ವ ನೀಡುತ್ತದೆ ಎಂದು ಹೇಳಿದರು.
ಮಹಾತ್ಮ ಗಾಂಧಿ ದೌರ್ಜನ್ಯಕ್ಕೆ ಒಳಗಾದವರಿಗೆ ಪೌರತ್ವ ನೀಡುವ ಪರವಾಗಿದ್ದರು. ನಂತರ ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಕೂಡ ಇದೇ ಅಭಿಪ್ರಾಯ ಹೊಂದಿದ್ದರು.
ದೇಶದಲ್ಲಿ ವಿವಿಧ ಸಾಮಾಜಿಕ ಮತ್ತು ಕಲ್ಯಾಣ ಯೋಜನೆ ಜಾರಿಗೆ ತರಲು ರಾಷ್ಟ್ರೀಯ ಜನಸಂಖ್ಯಾ ನೋಂದಣಿ ಮಾಡಲಾಗುತ್ತಿದೆ. ಅಧಿಕಾರಿಗಳು ನೋಂದಣಿ ಮಾಡಲು ತಮ್ಮ ಮನೆ ಬಾಗಿಲಿಗೆ ಬರುತ್ತಾರೆ. ಆಗ ಜನರು ತಮಗೆ ಅಗತ್ಯ ಇದ್ದರೆ ಮಾಹಿತಿ ನೀಡಬಹುದು ಅಥವಾ ನಿರಾಕರಿಸಬಹುದು. ಮಾಹಿತಿ ನೀಡುವುದು ಕಡ್ಡಾಯ ಅಲ್ಲ ಎಂದರು. (ಏಜೆನ್ಸೀಸ್)