ಚಿತ್ರದುರ್ಗ: ಆರೋಗ್ಯ ಸಚಿವ ಶ್ರೀರಾಮುಲು ಅವರು ಗುರುವಾರ ರಾತ್ರಿ ಆಸ್ಪತ್ರೆಯಲ್ಲಿ ವಾಸ್ತವ್ಯ ಹೂಡುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾಸ್ಪತ್ರೆಯಲ್ಲಿ ಸ್ವಚ್ಛತೆ ಇಣುಕಿದೆ.
ಮೈಸೂರಿನಲ್ಲಿದ್ದ ಸಚಿವರು ರಾತ್ರಿ 11-30ರ ಹೊತ್ತಿಗೆ ಬರಬಹುದೆಂಬ ನಿರೀಕ್ಷೆಯಲ್ಲಿ ಜಿಲ್ಲೆಯ ಹಿರಿಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಕಾದು ಕುಳಿತಿದ್ದರು.
ರಾತ್ರಿಯೇ ವಾರ್ಡ್ ವೀಕ್ಷಣೆ ಮಾಡುತ್ತಾರೋ- ಬೆಳಗ್ಗೆ ನೋಡುತ್ತಾರೋ ಎಂಬ ಗೊಂದಲದಲ್ಲಿ ಆಸ್ಪತ್ರೆ ಸಿಬ್ಬಂದಿ ಅಲರ್ಟ್ ಆಗಿದ್ದಾರೆ.
ಸಚಿವರ ವಾಸ್ತವ್ಯಕ್ಕೆ ವಿಐಪಿ ವಾರ್ಡ್ನಲ್ಲಿ ಪ್ರತ್ಯೇಕ ಕೊಠಡಿ ಕಾಯ್ದಿರಿಸಲಾಗಿದೆ. ಹಾಸಿಗೆ, ದಿಂಬು, ಸೊಳ್ಳೆ ಪರದೆ, ಕುರ್ಚಿ, ಟೇಬಲ್ ವ್ಯವಸ್ಥೆ ಮಾಡಲಾಗಿದೆ.
ವಿಐಪಿ ವಾರ್ಡ್ನಲ್ಲಿ ತಂಗಲು ವ್ಯವಸ್ಥೆ ಮಾಡಿದ್ದರೂ ಸಂಜೆ ವೇಳೆಗೆ ವಿಐಪಿ ಎಂದಿದ್ದ ನಾಮಫಲಕ ತೆಗೆಯಲಾಗಿದೆ.
ಹಾಗೊಂದು ವೇಳೆ ವಿಐಪಿ ಕೊಠಡಿ ಬೇಡ ಎಂದಾದರೆ ಸಾಮಾನ್ಯ ಪುರುಷರ ವಾರ್ಡ್ನಲ್ಲಿ 1, 2 ಬೆಡ್ಗಳನ್ನು ಮೀಸಲಿಡಲಾಗಿದೆ.
ಆಸ್ಪತ್ರೆ ಆವರಣದಲ್ಲಿ ಎಲ್ಇಡಿ ದೀಪಗಳು ಬೆಳಗುತ್ತಿವೆ. ರಸ್ತೆ ದುರಸ್ತಿ ಕಾಮಗಾರಿ ಹಿನ್ನೆಲೆಯಲ್ಲಿ ಆಸ್ಪತ್ರೆ ಪ್ರವೇಶ ದ್ವಾರದ ಎದುರಿನ ಗೇಟ್ನ್ನು ತೆರೆಯಲಾಗಿದೆ.
ಎಂದಿನಂತೆ ಸಿಬ್ಬಂದಿ ಕೊರತೆ: ಸಿಬ್ಬಂದಿ ಕೊರತೆ ಹಿನ್ನೆಲೆಯಲ್ಲಿ ಅನೇಕ ವಾರ್ಡ್ಗಳಲ್ಲಿ ಎಂದಿನಂತೆ ಒಬ್ಬಿಬ್ಬರು ಮಾತ್ರ ಕರ್ತವ್ಯ ನಿರ್ವಹಿಸುತ್ತಿದ್ದರು. ತಾಯಿ ಮಗು ಆಸ್ಪತ್ರೆ ಆವರಣ ಎಂದಿನಂತೆ ಭರ್ತಿಯಾಗಿತ್ತು. ಬಾಣಂತಿಯರನ್ನು ವಾರ್ಡ್ ಹೊರಗೆ ಮಲಗಿಸಿದ್ದು ಕಂಡು ಬಂದಿತು.
ಸಚಿವ ಭೇಟಿ ಪರಿಣಾಮ ಕೆಟ್ಟು ಮೂಲೆ ಸೇರಿದ ವೈದ್ಯಕೀಯ ಉಪಕರಣಗಳಿಗೆ ದುರಸ್ತಿ ಭಾಗ್ಯ ಹಾಗೂ ತಜ್ಞ ವೈದ್ಯರು ಮತ್ತು ವೈದ್ಯ ಸಿಬ್ಬಂದಿ ಕೊರತೆಗೆ ಪರಿಹಾರ ಸಿಗಬಹುದು ಎಂಬ ನಿರೀಕ್ಷೆ ವ್ಯಕ್ತವಾಗಿದೆ.
ಸೇವೆ ಕಾಯಂ, ಸಂಬಳ ಹೆಚ್ಚಳ ಕೋರಿ ವೈದ್ಯಕೀಯ ಸಿಬ್ಬಂದಿ ಸಚಿವರಿಗೆ ಕೋರಿಕೆ ಸಲ್ಲಿಸಲು ಸಜ್ಜಾಗಿದ್ದಾರೆ.
ಭೋವಿ ಗುರುಪೀಠದಲ್ಲಿ ಪೂಜೆ: ಆಸ್ಪತ್ರೆಯಿಂದ ಶುಕ್ರವಾರ ಮುಂಜಾನೆ ನಗರದ ಭೋವಿ ಗುರುಪೀಠಕ್ಕೆ ಸಚಿವರು ತೆರಳಿ ಅಲ್ಲಿ ಶಿವಪೂಜೆ ಬಳಿಕ ಉಪಾಹಾರ ಸೇವಿಸಿ ನಂತರ ಚಳ್ಳಕೆರೆಗೆ ತೆರಳಲಿದ್ದಾರೆ.