ಬೆಂಗಳೂರು: ಅಪ್ರಾಪ್ತ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಆರೋಪ ಹೊತ್ತಿರುವ ಚಿತ್ರದುರ್ಗದ ಮುರುಘಾ ಮಠದ ಶಿವಮೂರ್ತಿ ಶರಣರು ಫೋಕ್ಸೊ ಪ್ರಕರಣದಲ್ಲಿ 14 ತಿಂಗಳು ಕಾಲ ಜೈಲು ಪಾಲಾಗಿದ್ದರು. ಇತ್ತೀಚೆಗೆ ಕರ್ನಾಟಕ ಹೈಕೋರ್ಟ್ ಬುಧವಾರ (ನ.08) ಷರತ್ತುಬದ್ಧ ಜಾಮೀನು ನೀಡಿತ್ತು. ಆದರೆ ಜೈಲಿನಿಂದ ಬಿಡುಗಡೆಯಾದ ಕೆಲವೇ ದಿನಗಳಲ್ಲಿ ಮತ್ತೆ ಮುರುಘಾ ಶ್ರೀಗೆ ಬಂಧನದ ಭೀತಿ ಎದುರಾಗಿದೆ.
ಮೊದಲನೇ ಪೋಕ್ಸೋ ಪ್ರಕರಣದಲ್ಲಿ ಜಾಮೀನಿನ ಮೇಲೆ ಜೈಲಿನಿಂದ ಬಿಡುಗಡೆಯಾಗಿರುವ ಚಿತ್ರದುರ್ಗದ ಮುರುಘಾಶ್ರೀಗೆ 2ನೇ ಪೋಕ್ಸೋ ಪ್ರಕರಣದಲ್ಲಿ ಚಿತ್ರದುರ್ಗ 2ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಮುರುಘಾ ಶರಣರ ವಿರುದ್ಧ ಜಾಮೀನು ರಹಿತ ಅರೆಸ್ಟ್ ವಾರಂಟ್ ಜಾರಿ ಮಾಡಿದೆ. ಈ ಹಿನ್ನೆಲೆಯಲ್ಲಿ 1ನೇ ಪೋಕ್ಸೋ ಪ್ರಕರಣದಲ್ಲಿ ಒಂದು ವರ್ಷಕ್ಕಿಂತ ಹೆಚ್ಚು ಕಾಲ ಜೈಲಿನಲ್ಲಿದ್ದು, ಆಚೆ ಬಂದಿರುವ ಚಿತ್ರದುರ್ಗದ ಮುರುಘಾಶ್ರೀಗೆ ಇದೀಗ ಮತ್ತೆ ಬಂಧನದ ಭೀತಿ ಶುರುವಾಗಿದೆ.
ಇತ್ತೀಚೆಗೆ 1ನೇ ಪೊಕ್ಸೋ ಪ್ರಕರಣವೊಂದಕ್ಕೆ ಹೈಕೋರ್ಟ್ ಜಾಮೀನು ನೀಡಿತ್ತು. ಈ ಹಿನ್ನೆಲೆಯಲ್ಲಿ ಶ್ರೀಗಳು ಜೈಲಿನಿಂದ ಹೊರಬಂದಿದ್ದರು. ಆದರೆ ಇದಕ್ಕೆ ಸರ್ಕಾರಿ ವಕೀಲರು ಆಕ್ಷೇಪ ವ್ಯಕ್ತಪಡಿಸಿದ್ದರು. 2ನೇ ಪೋಕ್ಸೋ ಕೇಸಲ್ಲಿ ಬಂಧನ ವಾರೆಂಟ್ ಕೋರಿ ಸರ್ಕಾರಿ ವಕೀಲ ಜಗದೀಶ್ ಕೋರ್ಟ್ ಗೆ ಮನವಿ ಮಾಡಿದ್ದರು. ಇದಕ್ಕೆ ಮುರುಘಾ ಶ್ರೀ ಪರ ವಕೀಲರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಸದ್ಯ ಎರಡೂ ಕಡೆಯ ವಾದ ಆಲಿಸಿರುವ ಚಿತ್ರದುರ್ಗ 2ನೇ ಅಪರ ಜಿಲ್ಲಾ & ಸತ್ರ ನ್ಯಾಯಾಲಯ ಇಂದು ಆದೇಶ ನೀಡಿದೆ. ಈ ಮೂಲಕ 2ನೇ ಪ್ರಕರಣದಲ್ಲಿ ನಿರ್ಧಾರ ಪ್ರಕಟಿಸಿದೆ.
ಮುರುಘಾ ಶರಣರ ವಿರುದ್ಧ ಅರೆಸ್ಟ್ ವಾರಂಟ್ ಜಾರಿ ಮಾಡಿರುವ ಹಿನ್ನೆಲೆಯಲ್ಲಿ ಚಿತ್ರದುರ್ಗ ಗ್ರಾಮಾಂತರ ಠಾಣೆ ಪಿಐ ಮುದ್ದುರಾಜ ಅವರು ಕೋರ್ಟ್ಗೆ ಆಗಮಿಸಿದ್ದು, ಕೋರ್ಟ್ ಆದೇಶ ಪಡೆದುಕೊಳ್ಳಲಿದ್ದಾರೆ. ಬಳಿಕ ದಾವಣಗೆರೆ ವಿರಕ್ತ ಮಠಕ್ಕೆ ತೆರಳಿ ಮುರುಘಾಶ್ರೀ ಅವರನ್ನು ಬಂಧಿಸುವ ಸಾಧ್ಯತೆಗಳಿವೆ.
ಪ್ರಕರಣವೇನು?: ಚಿತ್ರದುರ್ಗ ಮಠದ ವಸತಿ ಶಾಲೆಯ ಬಾಲಕಿಯರಿಬ್ಬರು ಆಗಸ್ಟ್ 26ರಂದು ಮೈಸೂರಿನ ಒಡನಾಡಿ ಸಂಸ್ಥೆಯ ಮೂಲಕ ಮೈಸೂರಿನ ನಜರಬಾದ್ ಪೊಲೀಸ್ ಠಾಣೆಗೆ ತೆರಳಿ ಶರಣರ ವಿರುದ್ಧ ದೂರು ನೀಡಿದ್ದರು. ಮಕ್ಕಳ ಕಲ್ಯಾಣ ಸಮಿತಿ ಎದುರು ಸಂತ್ರಸ್ತ ಬಾಲಕಿಯರನ್ನು ಹಾಜರುಪಡಿಸಿ ಹೇಳಿಕೆ ಪಡೆದ ಬಳಿಕ ಶರಣರ ವಿರುದ್ಧ ಎಫ್ಐಆರ್ ದಾಖಲಾಗಿತ್ತು. ಆ ನಂತರದ ಬೆಳವಣಿಗೆಯಲ್ಲಿ ಪ್ರಕರಣವನ್ನು ಮೈಸೂರಿನಿಂದ ಚಿತ್ರದುರ್ಗದ ಗ್ರಾಮಾಂತರ ಠಾಣೆಗೆ ವರ್ಗಾಯಿಸಲಾಗಿತ್ತು. ಪ್ರಕರಣದಲ್ಲಿ ಸ್ವಾಮೀಜಿ, ವಾರ್ಡನ್, ಕಾರ್ಯದರ್ಶಿ, ವಕೀಲ, ಮಠದ ಉತ್ತರಾಧಿಕಾರಿ ಸೇರಿ ಐವರ ವಿರುದ್ಧ ಆರೋಪ ಮಾಡಲಾಗಿತ್ತು. ಬಳಿಕ ಪೊಕ್ಸೊ ಪ್ರಕರಣದ ಅಡಿಯಲ್ಲಿ ಮುರುಘಾ ಶರಣರನ್ನು 2022ರ ಸೆಪ್ಟೆಂಬರ್ 1ರಂದು ಚಿತ್ರದುರ್ಗ ಪೊಲೀಸರು ಬಂಧಿಸಿದ್ದರು.
ಒಡನಾಡಿ ಸಂಸ್ಥೆ ಅಸಮಾಧಾನ : ಮುರುಘಾ ಶ್ರೀಗಳಿಗೆ ಜಾಮೀನು ವಿಚಾರವಾಗಿ ಒಡನಾಡಿ ಸಂಸ್ಥೆಯ ಮುಖ್ಯಸ್ಥ ಸ್ಟ್ಯಾನ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ್ದು, ಮುಂದಿನ ದಿನಗಳಲ್ಲಿ ವಕೀಲರ ಜೊತೆ ಚರ್ಚೆ ಮಾಡುತ್ತೇವೆ. ಮುಂದಿನ ದಿನಗಳಲ್ಲಿ ಕಾನೂನು ಹೋರಾಟ ಮುಂದುವರೆಸುತ್ತೇವೆ. ಈ ಪ್ರಕರಣದಲ್ಲಿ ಕೆಲವು ಲೋಪದೋಷಗಳ ಕಾಣುತ್ತಿವೆ. ಪೊಲೀಸರ ಚಾರ್ಜ್ಶೀಟ್ ಸಲ್ಲಿಸುವ ವೇಳೆ ಲೋಪವಾಗಿದೆ. ಹೀಗಾಗಿ ಜಾಮೀನು ಸಿಕ್ಕಿದೆ. ಜೈಲಿನಲ್ಲಿದುಕೊಂಡೇ ಸ್ವಾಮೀಜಿಗಳು ಪ್ರಭಾವ ಬೀರಿದ್ದಾರೆ. ಚಿತ್ರದುರ್ಗಕ್ಕೆ ಹೋಗಬಾರದು ಎಂದು ನ್ಯಾಯಾಲಯ ಹೇಳಿರುವುದು ಸ್ವಾಗತಾರ್ಹ. ಈ ಪ್ರಕರಣದಲ್ಲಿ ಚಿಕ್ಕ ಮಕ್ಕಳು ಸಾಕಷ್ಟು ನೊಂದಿದ್ದು, ನಾವು ಅವರ ಪರವಾಗಿ ನಾವಿದ್ದೇವೆ. ಮುರಘಾ ಶ್ರೀಗೆ ಖಂಡಿತವಾಗಿಯೂ ಶಿಕ್ಷೆ ಆಗೇ ಆಗುತ್ತದೆ ಎಂದಿದ್ದಾರೆ.