More

    ಅಸಮಾನತೆ ತಡೆಗೆ ಶಿಕ್ಷೆಯೇ ಮದ್ದು ಆಗದು

    ಚಿತ್ರದುರ್ಗ: ಅಸಮಾನತೆ ನಿವಾರಣೆಗೆ ಶಿಕ್ಷೆಯೊಂದೇ ಪರಿಹಾರ ಆಗುವುದಿಲ್ಲ ಎಂದು ಜಿಲ್ಲಾಧಿಕಾರಿ ಆರ್.ವಿನೋತ್‌ಪ್ರಿಯಾ ಹೇಳಿದರು.

    ಜಿಲ್ಲಾಧಿಕಾರಿ ಕಚೇರಿಯಲ್ಲಿ ಸೋಮವಾರ 4ನೇ ತ್ರೈಮಾಸಿಕ ಜಿಲ್ಲಾ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸಭೆಯಲ್ಲಿ ಮಾತನಾಡಿ, ಎಲ್ಲ ಜಾತಿ, ಸಮುದಾಯದವರಲ್ಲಿ ಜಾಗೃತಿ, ಪರಿವರ್ತನೆಗೆ ಸರ್ವರೂ ಕೈಜೋಡಿಸದರೆ ಸಮ ಸಮಾಜ ನಿರ್ಮಾಣ ಸುಲಭ ಎಂದರು.

    ಪರಿಶಿಷ್ಟರ ಮೇಲಿನ ದೌರ್ಜನ್ಯ ಪ್ರಕರಣಗಳಲ್ಲಿ ಸಂತ್ರಸ್ಥರಿಗೆ ಕೊಡುವ ಪರಿಹಾರ, ಪುನರ್ವಸತಿ, ಅಸ್ಪಶ್ಯತೆ ಆಚರಣೆ ಶಿಕ್ಷಾರ್ಹ ಅಪರಾಧ ಆಗಲಿದೆ ಎಂಬ ವಿಷಯ ಕುರಿತು ಜನರಲ್ಲಿ ಜಾಗೃತಿ ಮೂಡಿಸುವುದು ಅಗತ್ಯ ಎಂದು ತಿಳಿಸಿದರು.

    ಬೇಡ ಜಂಗಮ ಜಾತಿ ಪ್ರಮಾಣ ಪತ್ರ ನೀಡಿಲ್ಲವೆಂದು ಮೊಳಕಾಲ್ಮೂರು ತಹಸೀಲ್ದಾರ್ ಹೊರತುಪಡಿಸಿ, ಉಳಿದ ತಹಸೀಲ್ದಾರರು ವರದಿ ನೀಡಿದ್ದಾರೆ. ನಿರ್ಧಿಷ್ಟ ದೂರಿದ್ದರೆ ತನಿಖೆ ನಡೆಸುವುದಾಗಿ ಸಮಿತಿ ಸದಸ್ಯ ರಾಜಪ್ಪರಿಗೆ ಜಿಲ್ಲಾಧಿಕಾರಿ ಭರವಸೆ ನೀಡಿದರು.

    ದೌರ್ಜನ್ಯ ಪ್ರಕರಣಗಳಿಗೆ ಸಂಬಂಧಿಸಿದಂತೆ ಹೊಸದುರ್ಗ ತಾಲೂಕು ಜಂತಿಕೊಳಲು, ಆಲಘಟ್ಟ ಗ್ರಾಮಗಳ ಸ್ಥಳಾಂತರ ಬೇಡಿಕೆ ಇದೆ. ಆದರೆ, ಸಮಸ್ಯೆಗೆ ಸ್ಥಳಾಂತರ ಪರಿಹಾರವಲ್ಲ. ಇಂತಹದೇ ಪ್ರಕರಣಗಳು ವರದಿಯಾಗಿರುವ ಹಿರಿಯೂರಿನ ಕಂಬತ್ತಳ್ಳಿ ಮತ್ತು ಶಿವನಗರಗಳಲ್ಲಿ ಪರಿಸ್ಥಿತಿ ಪರಾಮರ್ಶೆ ನಡೆಸಿ ವರದಿ ಸಲ್ಲಿಸುವಂತೆ ಎಡಿಸಿ ನೇತೃತ್ವದ ಸಮಿತಿಗೆ ಸೂಚಿಸಿದರು.

    ಸದಸ್ಯ ಅರುಣ್‌ಕುಮಾರ್ ಮಾತನಾಡಿ, ಪರಿಶಿಷ್ಟರ ಮೇಲಿನ ಅತ್ಯಾಚಾರ, ಕೊಲೆ ಪ್ರಕರಣಗಳಲ್ಲಿ ಮರಣ ಪ್ರಮಾಣಪತ್ರ ಹಾಗೂ ಮರಣೋತ್ತರ ಪರೀಕ್ಷೆ ವರದಿ ಸಲ್ಲಿಕೆ ವಿಳಂಬದಿಂದಾಗಿ ಸಂತ್ರಸ್ಥರ ಕುಟುಂಬಕ್ಕೆ ಪರಿಹಾರ ವಿತರಣೆ ತಡವಾಗುತ್ತಿದೆ ಎಂದರು.

    ಪ್ರಕರಣಗಳ ಗಂಭೀರತೆಗೆ ಅನುಗುಣವಾಗಿ ವರದಿಗಳು ವಿಳಂಬ ಸಾಧ್ಯತೆಗಳಿರುತ್ತವೆ ಎಂದು ಹೇಳಿದ ಎಸ್ಪಿ ಡಾ.ಕೆ.ಅರುಣ್, ಹಾಸ್ಟೆಲ್‌ನಲ್ಲಿ ಬಿದ್ದು ಮೃತಪಟ್ಟಿರುವ ವಿದ್ಯಾರ್ಥಿ ಸಾವಿನ ಪ್ರಕರಣ ಕುರಿತಂತೆ ಪೋಷಕರು ದೂರು ಸಲ್ಲಿಸಿದರೆ ಸಮಗ್ರ ತನಿಖೆ ನಡೆಸುವುದಾಗಿ ತಿಳಿಸಿದರು.

    ಹಾಸ್ಟೆಲ್ ಪ್ರವೇಶ ವೇಳೆ ವಿದ್ಯಾರ್ಥಿಗಳ ಆರೋಗ್ಯ ತಪಾಸಣೆ ನಡೆಸಿ ವರದಿ ದಾಖಲಿಸುವಂತೆ ಅಧಿಕಾರಿಗಳಿಗೆ ಡಿಸಿ ಸೂಚಿಸಿದರು.

    ಜೂನ್‌ನಿಂದ ಡಿಸೆಂಬರ್ ಅಂತ್ಯದವರೆಗೆ ಜಿಲ್ಲೆಯಲ್ಲಿ 46 ದೌರ್ಜನ್ಯ ಪ್ರಕರಣಗಳಲ್ಲಿ ನೊಂದವರಿಗೆ 93.15 ಲಕ್ಷ ರೂ. ಪರಿಹಾರ ಕೊಡಲಾಗಿದೆ. ಜಿಲ್ಲೆಯಲ್ಲಿ ಜಾಗೃತಿ ಕಾರ್ಯಕ್ರಮ ನಡೆಸಲು 4 ಲಕ್ಷ ರೂ. ಅನುದಾನ ಬಿಡುಗಡೆ ಆಗಿದೆ ಎಂದು ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ನಾಗರಾಜ್ ಸಭೆಗೆ ಮಾಹಿತಿ ನೀಡಿದರು.

    ಜಿಪಂ ಉಪಕಾರ್ಯದರ್ಶಿ ಡಾ.ರಂಗಸ್ವಾಮಿ, ಸಮಿತಿ ಸದಸ್ಯರಾದ ಜಗದೀಶ್, ಫಾದರ್ ರಾಜು, ಸಿದ್ದಮ್ಮ, ಪರಿಶಿಷ್ಟ ವರ್ಗಗಳ ಕಲ್ಯಾಣ ಅಧಿಕಾರಿ ಮಂಜುಳಮ್ಮ ಮತ್ತಿತರರು ಇದ್ದರು.

    ಜಾತಿ ನಿಂದನೆ ರಾಜೀ, ಪರಿಹಾರ ಹಿಂಪಡೆಗೆ ಚಿಂತನೆ: ಜಾತಿ ನಿಂದನೆ ಪ್ರಕರಣಗಳಲ್ಲಿ ಸಂತ್ರಸ್ಥರು ಪರಿಹಾರ ಪಡೆದು, ವಿಚಾರಣೆ ವೇಳೆ ರಾಜಿ ಆಗುವುದು ಂಡು ಬಂದಿದೆ. ಇಂತಹ ಪ್ರಕರಣಗಳಲ್ಲಿ ಪರಿಹಾರ ಹಿಂಪಡೆಯಲು ಅಗತ್ಯ ನಿರ್ದೇಶನ ಕೋರಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುವಂತೆ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗೆ ಡಿಸಿ ಸೂಚಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts