ಚಿತ್ರದುರ್ಗ: ಪಾಕಿಸ್ತಾನ, ಬಾಂಗ್ಲಾ ಒಳಗೊಂಡ ಅಖಂಡ ಭಾರತದ ನಿರ್ಮಾಣ ಬಿಜೆಪಿ ಸಂಕಲ್ಪ ಎಂದು ಸಂಸದ ಎ.ನಾರಾಯಣಸ್ವಾಮಿ ಹೇಳಿದರು.
ಪಾಕಿಸ್ತಾನ, ಬಾಂಗ್ಲಾದ ಜನರಿಗೂ ಭಾರತೀಯತೆಯನ್ನು ಸಾರಿ ಅಖಂಡ ಭಾರತ ನಿರ್ಮಿಸಬೇಕು. ಇದು ನನ್ನಂತ ದೇಶ ಭಕ್ತರ ಕನಸು ಎಂದು ಗುರುವಾರ ಸುದ್ದಿಗೊಷ್ಠಿಯಲ್ಲಿ ತಿಳಿಸಿದರು.
ಭಾರತದ ಒಂದಿಂಚೂ ನೆಲವನ್ನು ಯಾರಿಗೂ ಬಿಟ್ಟುಕೊಡುವ ಪ್ರಶ್ನೆ ಇಲ್ಲ. ಎಂತಹುದೇ ತ್ಯಾಗ ಮಾಡಿಯಾದರೂ ದೇಶ ಉಳಿಸಿಕೊಳ್ಳುತ್ತೇವೆ ಎಂದರು.
ಕುಮಾರಸ್ವಾಮಿ ಹೇಳಿಕೆಗೆ ಆಕ್ಷೇಪ: ಮಂಗಳೂರು ವಿಮಾನ ನಿಲ್ದಾಣ ಬಾಂಬ್ ಪ್ರಕರಣವನ್ನು ಅಣುಕು ಪ್ರದರ್ಶನವೆಂದ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಹೇಳಿಕೆ ಖಂಡನೀಯ. ಇದು ಪೊಲೀಸರ ನೈತಿಕತೆ ಕುಗ್ಗಿಸುವಂತಿದೆ ಎಂದು ಸಂಸದರು ಹೇಳಿದರು.
ಕಾಂಗ್ರೆಸ್, ಜೆಡಿಎಸ್ ಪಕ್ಷಗಳ ನಾಯಕರು ಪಾಕಿಸ್ತಾನದ ಏಜೆಂಟರಂತೆ ವರ್ತಿಸುತ್ತಿದ್ದಾರೆ ಎಂದು ಇದೇ ವೇಳೆ ದೂರಿದರು.
ಆರೋಪಿ ಆದಿತ್ಯರಾವ್ಗೂ ಬಿಜೆಪಿಗೂ ಯಾವುದೇ ಸಂಬಂಧವಿಲ್ಲ. ಸಾರ್ವಜನಿಕ ಜೀವನದಲ್ಲಿ ಯಾರು ಯಾರ ಜತೆಯಲ್ಲಾದರೂ ಫೋಟೋ ತೆಗೆಸಿಕೊಳ್ಳುತ್ತಾರೆ. ಪ್ರತಿ ಪಕ್ಷದವರೇ ಈ ಕೃತ್ಯ ಮಾಡಿಸಿರಬಹುದು ಎಂದರು.