ವಿಜಯವಾಣಿ ಸುದ್ದಿಜಾಲ ಧಾರವಾಡ
ಬೇಸಿಗೆ ರಜೆ ದಿನಗಳು ಆರಂಭವಾದರೆ ಸಾಕು ಮಕ್ಕಳಲ್ಲಿ ಖುಷಿ ಇಮ್ಮಡಿಗೊಳ್ಳುತ್ತದೆ. ಮೊದಲಿನ ದಿನಗಳಲ್ಲಿ ರಜೆ ಆರಂಭವಾದರೆ ಅಜ್ಜಿ, ಅಜ್ಜಂದಿರ ಮನೆಗಳಿಗೆ ತೆರಳಿ ಕಾಲ ಕಳೆಯುತ್ತಿದ್ದರು. ಆದರೆ ಇದೀಗ ಬೇಸಿಗೆ ಶಿಬಿರಗಳಿಗೆ ಸೇರಿ ಕ್ರಿಯಾತ್ಮಕ ಚಟುವಟಿಕೆ ಕಲಿಯುತ್ತಿದ್ದಾರೆ. ಇಂತಹ ಚಟುವಟಿಕೆಗೆ ರಂಗಾಯಣವೂ ಸಾಕ್ಷಿಯಾಗಿದೆ.
ರಂಗಾಯಣದಲ್ಲಿ ಆರಂಭವಾಗಿರುವ ಮಕ್ಕಳ ಬೇಸಿಗೆ ಶಿಬಿರದಲ್ಲಿ ಜಿಲ್ಲೆಯ ವಿವಿಧ ಕಡೆಗಳಲ್ಲಿನ ಮಕ್ಕಳು ಪಾಲ್ಗೊಂಡಿದ್ದಾರೆ. ಮಕ್ಕಳಿಗೆ ನಾಟಕದ ಕಲಿಕೆ ಜತೆಗೆ ಅವರಲ್ಲಿನ ಪ್ರತಿಭೆ ಗುರುತಿಸುವ ಕೆಲಸವಾಗುತ್ತಿದೆ. ತಮ್ಮ ಮಕ್ಕಳು ನಾಟಕ ಕಲಿಕೆಯಲ್ಲಿ ತನ್ಮಯರಾಗಿ ಹಾಡು ಹೇಳುವುದು, ಅರಳು ಹುರಿದಂತೆ ನಾಟಕದ ಡೈಲಾಗ್ ಹೇಳುವುದನ್ನು ಕಂಡು ಪಾಲಕರೇ ಆಶ್ವರ್ಯ ಚಕಿತರಾಗುತ್ತಿದ್ದಾರೆ.
ರಂಗಾಯಣದಲ್ಲಿ ಪ್ರತಿ ವರ್ಷ ಬೇಸಿಗೆ ಶಿಬಿರ ಆಯೋಜಿಸುವುದು ಸಹಜ. ಆದರೆ ಈ ಬಾರಿ ವಿಶೇಷವಾಗಿದೆ. ಬಾಲ್ಯದಿಂದಲೇ ಸಂವಿಧಾನದ ಅರಿವು ಮೂಡಿಸುವುದು, ಸಂವಿಧಾನದ ಬಗ್ಗೆ ಪ್ರೀತಿ, ಗೌರವ ಹೆಚ್ಚಾಗಲಿ ಎಂಬ ಆಶಯದೊಂದಿಗೆ ರಂಗಭೂಮಿ ಕೇಂದ್ರಿತ “ನಮ್ಮ ಸಂವಿಧಾನ ನಮ್ಮ ಕಲರವ’ ಹೆಸರಿನಲ್ಲಿನ ಏ. 10ರಿಂದ ಆರಂಭವಾಗಿರುವ ಶಿಬಿರ ಮೇ 5ರವರೆಗೆ ನಡೆಯಲಿದೆ.
ಶಿಬಿರದಲ್ಲಿನ 6 ವರ್ಷದಿಂದ 15 ವರ್ಷದವರೆಗಿನ ಮಕ್ಕಳನ್ನು ತಂಡಗಳಾಗಿ ವಿಂಗಡಿಸಿ ಅವರಿಗೆ ನಾಟಕಗಳನ್ನು ಕಲಿಸಲಾಗುತ್ತಿದೆ. ಇಡೀ ವರ್ಷ ಶಾಲೆಗಳಲ್ಲಿ ಅಭ್ಯಾಸ ಮಾಡಿದ ಮಕ್ಕಳು ಬೇಸಿಗೆ ಶಿಬಿರದಲ್ಲಿ ಹೊಸತನ ಕಲಿಯುವ ಹಂಬಲದಲ್ಲಿರುತ್ತಾರೆ. ಹೀಗಾಗಿ ಪಾಠ ಮಾಡದೆ ಪ್ರಾತ್ಯಕ್ಷಿಕೆಗಳ ಮೂಲಕವೇ ಕಲೆಗಳನ್ನು ಹೇಳಿ ಕೊಡಲಾಗುತ್ತಿದೆ. ನಾಟಕ, ಹಾಡು, ನೃತ್ಯ, ಚಿತ್ರಕಲೆ, ಸಿನಿಮಾ ಮಾತ್ರವಲ್ಲದೆ ಡೊಳ್ಳು ಕುಣಿತ, ಮಲ್ಲಕಂಬ, ಜಗ್ಗಲಗಿ, ಹೆಜ್ಜೆಮೇಳ, ಹಾಸ್ಯ, ಸುಡುಗಾಡ ಸಿದ್ಧರ ಕಲೆ ಅಂತಹ ಕಲೆಗಳನ್ನು ಅದೇ ಕಲಾವಿದರ ಮೂಲಕ ಮಕ್ಕಳ ಮನಸ್ಸು ತಲುಪುವ ಪ್ರಯತ್ನ ಮಾಡಲಾಗುತ್ತಿದೆ.
ಪೇಪರ್ ಕ್ರಾಫ್ಟ್, ಮಣ್ಣಿಗೆ ಸಂಬಂಧಿಸಿದ ಆಟಗಳು, ಬಣ್ಣಗಳ ಚಟುವಟಿಕೆ, ಕಥೆ ಹೇಳುವ ಮೂಲಕ ಮಕ್ಕಳನ್ನು ಆಕರ್ಷಿಸಲಾಗಿದೆ. ಬರೀ ಮನರಂಜನೆಗೆ ಮಾತ್ರ ಸೀಮಿತವಾಗದೆ, ಮಕ್ಕಳ ಭವಿಷ್ಯದ ಜೀವನಕ್ಕೆ ಅನುಕೂಲವಾಗುವ ಜೀವನ ಪಾಠಗಳ ಬಗ್ಗೆ ಸಹ ಅವರಲ್ಲಿ ಅರಿವು ಮೂಡಿಸಲಾಗುತ್ತಿದೆ. ಮಕ್ಕಳಿಗೆ ಸಂವಿಧಾನ ಬಗ್ಗೆ ಮಾಹಿತಿ, ಮಕ್ಕಳ ಹಕ್ಕುಗಳು, ಸಂಬಂಧಗಳ ಬಗ್ಗೆ, ಮನೆಮದ್ದು, ಮಾನಸಿಕ ಒತ್ತಡ ನಿರ್ವಹಣೆ, ಮೊಬೈಲ್ನಿಂದ ದೂರವಿರುವುದು..ಹೀಗೆ ಹತ್ತು ಹಲವು ಜೀವನ ಪಾಠಗಳ ಬಗ್ಗೆಯೂ ತಿಳಿವಳಿಕೆ ನೀಡುತ್ತಿರುವುದು ಈ ಬಾರಿಯ ಶಿಬಿರದ ವಿಶೇಷವಾಗಿದೆ.

ರಂಗಾಯಣ ನಿರ್ದೇಶಕ ಡಾ.ರಾಜು ತಾಳಿಕೋಟಿ ಸಹಕಾರ, ಆಡಳಿತಾಧಿಕಾರಿ ಶಶಿಕಲಾ ಹುಡೇದಮನಿ ಮಾರ್ಗದರ್ಶನದಲ್ಲಿನ ಶಿಬಿರಕ್ಕೆ ಪಾಲಕರು ಸಹಕಾರ ನೀಡಿದ್ದಾರೆ. ರಂಗಕರ್ಮಿಗಳಾದ ಗಂಗಾ ಕಾಳೆನ್ನವರ, ಶರಣು ಶೆಟ್ಟರ್, ಪೂಜಾ, ಹರಿಕುಮಾರ, ಶೃತಿ, ರಾಘವ ಕಮ್ಮಾರ ಸೇರಿ 11 ಜನರು ಶಿಬಿರ ನಿರ್ವಹಿಸುತ್ತಿದ್ದೇವೆ. ಮುಂದಿನ ದಿನಗಳಲ್ಲಿ ದೇಸಿ ಆಹಾರ ಮೇಳ, ಸಂತೆ, ಜಾತ್ರೆ, ರಥೋತ್ಸವ, ಅಗ್ನಿಶಾಮಕದಳದ ಪ್ರಾತ್ಯಕ್ಷಿತೆ, ಓಕಳಿ ಹಬ್ಬ, ಪವಾಡ ಬಯಲು ರಹಸ್ಯ ಹಾಗೂ ಧಾರವಾಡದ ಐತಿಹಾಸಿಕ ಪ್ರಮುಖ ಸ್ಥಳಗಳಿಗೆ ಪ್ರವಾಸ ಮಾಡಿಸುವ ಯೋಜನೆಯೂ ಇದೆ.
* ಲಕ್ಷ್ಮಣ ಪೀರಗಾರ, ಶಿಬಿರದ ನಿರ್ದೇಶಕ