ಜಿಲ್ಲಾಧಿಕಾರಿ ಡಾ. ಕೆ.ವಿದ್ಯಾಕುಮಾರಿ ಅಭಿಮತ
ರೈಲ್ವೆ ನಿಲ್ದಾಣದಲ್ಲಿ ಚೈಲ್ಡ್ ಹೆಲ್ಪ್ ಲೈನ್ ಉದ್ಘಾಟನೆ
ವಿಜಯವಾಣಿ ಸುದ್ದಿಜಾಲ ಉಡುಪಿ
ಕೆಲವು ನಿರಾಶ್ರಿತ ಮಕ್ಕಳು ಆಶ್ರಯ ಹಾಗೂ ಜೀವನೋಪಾಯಕ್ಕಾಗಿ ವಿವಿಧ ಭಾಗಗಳಿಗೆ ಪ್ರಯಾಣಿಸಲು ರೈಲು ಬಳಸುತ್ತಾರೆ. ಪ್ಲಾಟ್ಫಾಮ್ರ್ಗೆ ಬಂದಿಳಿದು ಆ ಊರು ಸೇರಿದ ಬಳಿಕ ಅವರು ನಿಂದನೆ, ಹಿಂಸೆ, ನಿರ್ಲಕ್ಷ್ಯ ಅಥವಾ ಶೋಷಣೆಗೆ ಒಳಗಾಗುವ ಸಾಧ್ಯತೆ ಇರುತ್ತದೆ. ವಿವಿಧ ಆರೋಗ್ಯ ಸಮಸ್ಯೆಯಿಂದಲೂ ಬಳಲಬಹುದು. ಅಥವಾ ತಮ್ಮ ಬಾಲ್ಯದಿಂದ ವಂಚಿತರಾಗಬಹುದು. ಅಂತಹ ಮಕ್ಕಳನ್ನು ರಕ್ಷಿಸಿ, ಪುನರ್ವಸತಿ ಕಲ್ಪಿಸಿ ಅನುಕೂಲ ಮಾಡಿಕೊಡುವುದು ನಮ್ಮೆಲ್ಲರ ಜವಾಬ್ದಾರಿ ಎಂದು ಜಿಲ್ಲಾಧಿಕಾರಿ ಡಾ. ಕೆ.ವಿದ್ಯಾಕುಮಾರಿ ಹೇಳಿದರು.

ಉಡುಪಿಯ ಇಂದ್ರಾಳಿ ರೈಲ್ವೆ ನಿಲ್ದಾಣದಲ್ಲಿ ಮಕ್ಕಳ ರಕ್ಷಣಾ ನಿರ್ದೇಶನಾಲಯ ಬೆಂಗಳೂರು, ಜಿಲ್ಲಾಡಳಿತ, ಜಿಪಂ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಉಡುಪಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಆಶ್ರಯದಲ್ಲಿ ಮೇ 17ರಂದು ಆಯೋಜಿಸಿದ್ದ ಅಂತಾಷ್ಟ್ರೀಯ ಮಕ್ಕಳ ಸಹಾಯವಾಣಿ ದಿನದ ನಿಮಿತ್ತ ರೈಲ್ವೆ ಚೈಲ್ಡ್ ಹೆಲ್ಪ್ ಲೈನ್ ಉದ್ಘಾಟಿಸಿ ಮಾತನಾಡಿದರು.
24×7 ಸಹಾಯವಾಣಿ
ಕುಟುಂಬದಿಂದ ಬೇರ್ಪಟ್ಟು ಅಥವಾ ಮನೆಗಳಿಂದ ಓಡಿ ಬಂದಿರುವ ಮಕ್ಕಳನ್ನು ರಕ್ಷಿಸಲು, ಅವರಿಗೆ ಸಹಾಯ ಮಾಡಲು ಅನುಕೂಲ ಆಗುವಂತೆ ದಿನದ 24 ಗಂಟೆಯೂ ಮಕ್ಕಳ ಸಹಾಯವಾಣಿ 1098/112 ಕಾರ್ಯನಿರ್ವಹಿಸಲಿದೆ. ಶಿಕ್ಷಣದಿಂದ ವಂಚಿತ, ಭಿಕ್ಷಾಟನೆ, ಮಾದಕ ವ್ಯಸನ, ಹಿಂಸೆ ಮತ್ತು ಲೈಂಗಿಕ ದೌರ್ಜನ್ಯಗಳಂತಹ ಸಂಕಷ್ಟದಲ್ಲಿ ಸಿಲುಕಿರುವ ಯಾವುದೇ ಮಗು ಕಂಡುಬಂದಲ್ಲಿ ಸಾರ್ವಜನಿಕರು ಸಹಾಯವಾಣಿ ಸಂಖ್ಯೆಗೆ ಉಚಿತ ಕರೆ ಮಾಡಿ ಮಾಹಿತಿ ನೀಡಬೇಕು ಎಂದರು.
ಜಿಲ್ಲಾ ಪೊಲೀಸ್ ವರಿಷ್ಠ ಡಾ. ಅರುಣ ಕೆ., ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನ್ಯಾಯಾಧೀಶ ಯೋಗೇಶ್ ಪಿ.ಆರ್., ಮಕ್ಕಳ ಕಲ್ಯಾಣ ಸಮಿತಿಯ ಅಧ್ಯಕ್ಷೆ ಜ್ಯೂಹಿ ದಾಮೋದರ, ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕಿ ಶ್ಯಾಮಲಾ ಸಿ.ಕೆ., ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ನಾಗರತ್ನಾ ನಾಯಕ, ಹಿರಿಯ ಮಕ್ಕಳ ಪೊಲೀಸ್ ಕಲ್ಯಾಣಾಧಿಕಾರಿ ಡಿ.ಟಿ. ಪ್ರಭು, ರೈಲ್ವೆ ಇಲಾಖೆಯ ಅಸಿಸ್ಟೆಂಟ್ ಟ್ರಾಫಿಕ್ ಮೆನೇಜರ್ ಗೋವರ್ದನ ಮೀನಾ, ಆರ್ಪಿಎಫ್ನ ಇನ್ಸ್ಪೆಕ್ಟರ್ ಮಧುಸೂದನ, ಆರ್ಪಿಎಫ್ ಸಿಬ್ಬಂದಿ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಮತ್ತು ಮಕ್ಕಳ ಸಹಾಯವಾಣಿ ಸಿಬ್ಬಂದಿ ಉಪಸ್ಥಿತರಿದ್ದರು.