ಚಿಕ್ಕೋಡಿ: ಕಾಂಗ್ರೆಸ್ ಮುಕ್ತ ಚಿಕ್ಕೋಡಿ ಜಿಲ್ಲೆಯನ್ನಾಗಿಸುವ ಶಕ್ತಿ ನೂತನ ಚಿಕ್ಕೋಡಿ ಬಿಜೆಪಿ ಜಿಲ್ಲಾಧ್ಯಕ್ಷರಿಗೆ ದೊರೆಯುವಂತಾಗಲಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ಕುಮಾರ್ ಕಟೀಲ್ ಆಶಿಸಿದರು.
ಅವರು ಬುಧವಾರ ಪಟ್ಟಣದ ಕೇಶವ ಕಲಾ ಭವನದಲ್ಲಿ ಭಾರತೀಯ ಜನತಾ ಪಾರ್ಟಿ ಆಯೋಜಿಸಿದ್ದ ಪಕ್ಷದ ನೂತನ ಜಿಲ್ಲಾಧ್ಯಕ್ಷರ ಪದಗ್ರಹಣ ಸಮಾರಂಭವನ್ನುದ್ದೇಶಿಸಿ ಮಾತನಾಡಿದರು. ಬಿಜೆಪಿಯಲ್ಲಿ ವ್ಯಕ್ತಿಗಿಂತ ಪಕ್ಷ ಶ್ರೇಷ್ಠವಾಗಿದೆ. ಪಕ್ಷ, ದೇಶ ಎಂದಾಗ ಎಲ್ಲರೂ ಒಂದಾಗಿ ಕೆಲಸ ಮಾಡಬೇಕು. ಅಧಿಕಾರಕ್ಕೆ ಅಂಟಿಕೊಳ್ಳದೆ ಪ್ರತಿಯೊಬ್ಬರೂ ಕೆಲಸ ಮಾಡಿದಾಗ ಬಿಜೆಪಿಗೆ ಬಲ ಬರಲಿದೆ ಎಂದರು.
ಕಾಂಗ್ರೆಸ್ ಪಕ್ಷ ಇಂದು ದಿವಾಳಿ ಅಂಚಿನಲ್ಲಿದ್ದು ಮುಳುಗುವ ಹಡಗಾಗಿದೆ. ಕೇವಲ ವೋಟ್ ಬ್ಯಾಂಕ್ಗಾಗಿ ಆಡಳಿತ ನಡೆಸಿ ರಾಷ್ಟ್ರ ವಿರೋಧಿ ಕೆಲಸ ಮಾಡುವುವವರ ಪರವಾಗಿದ್ದುಕೊಂಡು ಕೆಲಸ ಮಾಡುತ್ತಿದೆ ಎಂದು ಟೀಕಿಸಿದರು.
ದೇಶದಲ್ಲಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ, ರಾಜ್ಯದಲ್ಲಿ ರೈತಪರ ಕಾಳಜಿಯುಳ್ಳ ಸಿಎಂ ಬಿ.ಎಸ್. ಯಡಿಯೂರಪ್ಪನವರ ನೇತೃತ್ವದ ಸರ್ಕಾರ ಸುಸ್ಥಿತಿಯಲ್ಲಿದೆ. ಆದರೆ, ದ್ವೇಷದ ಮನೆಯಾಗಿ ಕಾಂಗ್ರೆಸ್ ಸುಟ್ಟು ಹೋಗಿದ್ದು, ಓರ್ವ ರಾಜ್ಯಾಧ್ಯಕ್ಷರನ್ನು ನೇಮಿಸುವಷ್ಟು ಪಕ್ಷ ತನ್ನ ಅಸ್ತಿತ್ವವನ್ನು ಕಳೆದುಕೊಂಡಿದೆ. ದೇಶದಲ್ಲಿ ಹಂಗಾಮಿ ರಾಷ್ಟ್ರಾಧ್ಯಕ್ಷರು ಕಾರ್ಯ ನಿರ್ವಹಿಸುವಂತಾಗಿದ್ದು ದುರದೃಷ್ಟಕರ ಸಂಗತಿ ಎಂದರು.
ಹಲವಾರು ವರ್ಷಗಳಿಂದ ಬಿಜೆಪಿ ಕಾರ್ಯಕರ್ತರು ತಮ್ಮ ರಕ್ತವನ್ನು ಬೆವರಂತೆ ಸುರಿಸಿ, ಪಕ್ಷವನ್ನು ಸುಭದ್ರವಾಗಿ ಕಟ್ಟಿಕೊಟ್ಟಿದ್ದು, ಇದೀಗ ದೇಶದಲ್ಲಿ ಬಿಜೆಪಿ ಸುವರ್ಣಯುಗದಲ್ಲಿದೆ. ಮುಂಬರುವ ಗ್ರಾಪಂ, ತಾಪಂ ಮತ್ತು ಜಿಪಂ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸಬೇಕು. ಈ ಮೂಲಕ ಬಿಜೆಪಿಯನ್ನು ಸ್ಥಳೀಯ ಆಡಳಿತಗಳಲ್ಲಿಯೂ ಅಧಿಕಾರಕ್ಕೆ ತರಬೇಕು. ಈ ನಿಟ್ಟಿನಲ್ಲಿ ಪ್ರತಿಯೊಬ್ಬ ಕಾರ್ಯಕರ್ತರು ಹಾಗೂ ಪದಾಧಿಕಾರಿಗಳು ಒಗ್ಗಟ್ಟಿನಿಂದ ಶ್ರಮಿಸಬೇಕು ಎಂದು ಕಾರ್ಯಕರ್ತರಿಗೆ ಹೇಳಿದರು. ಚಿಕ್ಕೋಡಿ ಸಂಸದ ಅಣ್ಣಾಸಾಹೇಬ ಜೊಲ್ಲೆ, ವಿಧಾನ ಪರಿಷತ್ ಆಡಳಿತ ಪಕ್ಷದ ಮುಖ್ಯ ಸಚೇತಕ ಮಹಾಂತೇಶ ಕವಟಗಿಮಠ, ಶಾಸಕರಾದ ಪಿ. ರಾಜೀವ, ಮಹೇಶ ಕುಮಠಳ್ಳಿ, ನಿಕಟಪೂರ್ವ ಅಧ್ಯಕ್ಷ ಶಶಿಕಾಂತ ನಾಯಕ್ ಮಾತನಾಡಿದರು. ಶಾಸಕರಾದ ಡಿ.ಎಂ. ಐಹೊಳೆ, ಮಹೇಶ ಟೆಂಗಿನಕಾಯಿ, ಬಸವರಾಜ ಯಕ್ಕಂಚಿ, ಚಿಕ್ಕೋಡಿ ಜಿಲ್ಲಾ ಚುನಾವಣಾಧಿಕಾರಿ ಡಿ.ಜೆ. ಗುಂಡೆ, ಮಾರುತಿ ಅಷ್ಟಗಿ, ಅಭಯ ಮಾನವಿ, ಮಹೇಶ ಭಾಥೆ, ಅಪ್ಪಾಸಾಹೇಬ ಚೌಗಲಾ, ರವಿ ಹಿರೇಮಠ, ಪ್ರಕಾಶ ಪಾಟೀಲ, ಜಯಕುಮಾರ ಖೋತ ಹಾಗೂ ಚಿಕ್ಕೋಡಿ ಜಿಲ್ಲೆಯ ಎಲ್ಲ ಮಂಡಳಗಳ ಅಧ್ಯಕ್ಷರು ಹಾಗೂ ಕಾಯಕರ್ತರು ಇದ್ದರು. ವಿಭಾಗ ಪ್ರಭಾರಿ ಈರಣ್ಣಾ ಕಡಾಡಿ ಸ್ವಾಗತಿಸಿದರು.
ನನ್ನ ಅಧಿಕಾರಾವಧಿಯಲ್ಲಿ ಚಿಕ್ಕೋಡಿ ಜಿಲ್ಲೆಯ ಎಲ್ಲ ಮಂಡಲಗಳ ಪದಾಧಿಕಾರಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು, ಹಿರಿಯರ ಮಾರ್ಗದರ್ಶನದಲ್ಲಿ ಪಕ್ಷವನ್ನು ಬೂತ್ ಮಟ್ಟದಿಂದ ಸಂಘಟಿಸುವ ಕೆಲಸ ಮಾಡುವೆ.
| ಡಾ. ರಾಜೇಶ ನೇರ್ಲಿ ಚಿಕ್ಕೋಡಿ ಜಿಲ್ಲಾ ಬಿಜೆಪಿ ನೂತನ ಜಿಲ್ಲಾಧ್ಯಕ್ಷ
ಬಿಜೆಪಿ ಪಕ್ಷದಲ್ಲಿ ಅನ್ಯೋನ್ಯತೆಯ ಪರಿವಾರವನ್ನು ಕಾಣುತ್ತೇವೆ. ಹಿರಿಯರ ತ್ಯಾಗ ಬಲಿದಾನಗಳಿಂದ ಇಂದು ದೇಶದಲ್ಲಿ ಬಿಜೆಪಿಯ ಓರ್ವ ಸಾಮಾನ್ಯ ಕಾರ್ಯಕರ್ತನೂ ಪಕ್ಷದ ರಾಜ್ಯಾಧ್ಯಕ್ಷನಾಗಬಲ್ಲ ಎನ್ನುವುದು ಸಾಬೀತಾಗಿದೆ.
| ಶಶಿಕಲಾ ಜೊಲ್ಲೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ