ಚಿದಾನಂದಮೂರ್ತಿ ಅವರು ಜೀವನದುದ್ದಕ್ಕೂ ಬ್ರಹ್ಮಚಾರಿಯಾಗಿಯೇ ಉಳಿದು ಸಮಾಜಸೇವೆ ಮಾಡಬೇಕೆಂದಿದ್ದರಂತೆ. ತಂದೆ-ತಾಯಿ ಎಷ್ಟೇ ಒತ್ತಡ ಮಾಡಿದರೂ ಮದುವೆಗೆ ಮನಸ್ಸು ಮಾಡಿರಲಿಲ್ಲ. ಈ ವಿಷಯದ ಬಗ್ಗೆ ಅವರೇ ಹೀಗೆ ಹೇಳಿಕೊಂಡಿದ್ದರು:
‘ನಾನೊಬ್ಬ ಉತ್ತಮ ಸಮಾಜಸೇವಕನಾಗಬಲ್ಲೆನೆಂಬ ಆತ್ಮವಿಶ್ವಾಸ ನನಗಿದ್ದರೂ ಮನುಷ್ಯನ ಸಹಜ ಲೈಂಗಿಕ ಪ್ರವೃತ್ತಿಯನ್ನು ಹತ್ತಿಕ್ಕುವುದರಲ್ಲೇ ನನ್ನ ಶ್ರಮದ ವಿನಿಯೋಗವಾದೀತೆಂಬ ಭಯ ಕಾಡತೊಡಗಿತು. ಬ್ರಹ್ಮಚರ್ಯವೇ ಮದುವೆಯೇ ಎಂಬ ಭಯಂಕರ ಒಳತೋಟಿಯಲ್ಲಿ ಸಿಲುಕಿ, ಪುಟ್ಟಪರ್ತಿಗೆ ಹೋಗಿ ಶ್ರೀ ಸಾಯಿಬಾಬಾ ಅವರನ್ನೂ ಭೇಟಿ ಮಾಡಿದೆ. ಅವರ ಆಶೀರ್ವಾದದ ಮಾತು ಬಹುಶಃ ನನ್ನ ಮನಸ್ಸಿನಲ್ಲೇ ಮದುವೆಯ ಪರವಾಗಿದ್ದ ನಿರ್ಣಯವನ್ನು ದೃಢಗೊಳಿಸಿತು.’ 1964ರ ಮೇ 13, ಬಸವ ಜಯಂತಿಯಂದು ಎಂ. ವಿಶಾಲಾಕ್ಷಿ ಅವರೊಂದಿಗೆ ನನ್ನ ಮದುವೆಯಾಯಿತು. ನಮಗೆ ಇಬ್ಬರು ಮಕ್ಕಳು: ಮಗಳು-ಶೋಭಾ, ಮಗ-ವಿನಯ್ಕುಮಾರ್.