ಚಾಮರಾಜನಗರ: ತಾಲೂಕಿನ ಹಳ್ಳಿಕೆರೆಹುಂಡಿ ಗ್ರಾಮದಲ್ಲಿ ವಿಜೃಂಭಣೆಯಿಂದ ಬಸವ ಜಯಂತಿ ಕಾರ್ಯಕ್ರಮ ಅದ್ದೂರಿಯಾಗಿ ಜರುಗಿತು.
ಗ್ರಾಮದಲ್ಲಿ ಇತ್ತೀಚಿಗೆ ಆಯೋಜಿಸಿದ್ದ ಬಸವಜಯಂತಿ ಕಾರ್ಯಕ್ರಮ ಅಂಗವಾಗಿ ಗ್ರಾಮದಲ್ಲಿ ಸಡಗರ, ಸಂಭ್ರಮ ಮನೆ ಮಾಡಿತ್ತು, ಪ್ರತಿ ಮನೆಮನೆಯಲ್ಲಿ ರಂಗೋಲಿ ಇಟ್ಟು ತಳಿರು ತೋರಣಗಳಿಂದ ಸಿಂಗಾರಗೊಳಿಸಲಾಗಿತ್ತು. ರಾತ್ರಿ 8 ಗಂಟೆ ವೇಳೆಯಲ್ಲಿ ಪ್ರಾರಂಭವಾದ ಶ್ರೀ ಬಸವೇಶ್ವರರ ಮೂರ್ತಿಯ ಮೆರವಣಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು.
ಭಕ್ತಿಭಾವದಿಂದ ಜೋಡಿ ಬಸವಗಳಿಗೆ ಮೊದಲು ಪೂಜೆ ನೀಡಿ ನಂತರ ಬಸವಮೂರ್ತಿಗೆ ಗ್ರಾಮಸ್ಥರು ಪೂಜೆ ಸಲ್ಲಿಸಿದರು. ಶ್ರೀ ಬಸವೇಶ್ವರ ಮೂರ್ತಿಯನ್ನು ಬಗೆಬಗೆಯ ಹೂವುಗಳಿಂದ ಅಲಂಕರಿಸಲಾಗಿತ್ತು. ವಿವಿಧ ಕಲಾ ತಂಡಗಳು ಮೆರವಣಿಗೆಯಲ್ಲಿ ಭಾಗವಹಿಸಿದ್ದವು.
ಗ್ರಾಮದ ಮದ್ಯ ಭಾಗದಲ್ಲಿ ಮಂಡಲ ರಚಿಸಿ ಮೂವರು ಮಾಡಿದ ವೀರಗಾಸೆ ನೃತ್ಯ ಎಲ್ಲರ ಮನಸೂರೆಗೊಂಡಿತ್ತು.
ಕಾರ್ಯಕ್ರಮದಲ್ಲಿ ಕೆರೆಹಳ್ಳಿ ಹುಂಡಿ ಹಾಗೂ ಅಕ್ಕಪಕ್ಕದ ಗ್ರಾಮಸ್ಥರು, ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.