ಚಾಮರಾಜನಗರ: ನಿಯಂತ್ರಣಕ್ಕೆ ಬಾರದ ಕರೊನಾ ಜಿಲ್ಲೆಯಲ್ಲಿ ದಿನೇ ದಿನೆ ಹೆಚ್ಚುತ್ತಿದ್ದು, ಭಾನುವಾರ 10 ಜನರಲ್ಲಿ ದೃಢಪಟ್ಟಿದೆ. ಸೋಂಕಿತರ ಸಂಖ್ಯೆ 173ಕ್ಕೆ ಏರಿಕೆಯಾಗಿದ್ದು, 96 ಪ್ರಕರಣಗಳು ಸಕ್ರಿಯವಾಗಿವೆ.

ಗುಣಮುಖರಾಗುವವರ ಸಂಖ್ಯೆಯಲ್ಲೂ ಭಾನುವಾರ ಏರಿಕೆ ಕಂಡಿದ್ದು, 28 ಜನರು ಗುಣಮುಖರಾಗಿದ್ದಾರೆ. ಒಟ್ಟು ಈವರೆಗೆ 77 ಜನರು ಕರೊನಾ ಗೆದ್ದು ಮನೆಗೆ ತೆರಳಿದ್ದಾರೆ.
ಭಾನುವಾರ ದೃಢಪಟ್ಟಿರುವ ಪ್ರಕರಣಗಳಲ್ಲಿ ಚಾಮರಾಜನಗರದ ಜ್ಯೋತಿಗೌಡನಪುರ(27 ವರ್ಷದ ಯುವಕ), ಬುಜಗನಪುರ(55 ವರ್ಷದ ಮಹಿಳೆ), ಕೊಳ್ಳೇಗಾಲ ತಾಲೂಕಿನ ಇಕ್ಕಡಹಳ್ಳಿ(19 ವರ್ಷದ ಯುವಕ), ಸತ್ತೇಗಾಲ(25 ವರ್ಷದ ಯುವಕ), ಕಣ್ಣೂರು (26 ವರ್ಷದ ಯುವಕ), ಕೊಂಗರಹಳ್ಳಿ(58 ವರ್ಷದ ವ್ಯಕ್ತಿ), ಯಳಂದೂರಿನ ಟಿಎಚ್ಒ ಕ್ವಾಟ್ರರ್ಸ್(40 ವರ್ಷದ ಮಹಿಳೆ ಮತ್ತು 32 ವರ್ಷದ ವ್ಯಕ್ತಿ), ಮಾಂಬಳ್ಳಿ( 39 ವರ್ಷದ ವ್ಯಕ್ತಿ), ಗುಂಡ್ಲುಪೇಟೆಯ ದೊಡ್ಡ ತುಪ್ಪೂರಿನಲ್ಲಿ 35 ವರ್ಷದ ವ್ಯಕ್ತಿಗೆ ಕರೊನಾ ದೃಢಪಟ್ಟಿದೆ.
ಭಾನುವಾರ 300 ಜನರ ಗಂಟಲು ದ್ರವ ಮಾದರಿಗಳನ್ನು ಪರೀಕ್ಷೆಗೊಳಪಡಿಸಲಾಗಿತ್ತು, ಅದರಲ್ಲಿ 290 ಜನರ ವರದಿ ನೆಗೆಟಿವ್ ಬಂದಿದ್ದು, 10 ಜನರಲ್ಲಿ ದೃಢಪಟ್ಟಿದೆ. ಸೋಂಕಿತರ ಪ್ರಾಥಮಿಕ (145) ಹಾಗೂ ದ್ವಿತೀಯ ಸಂಪರ್ಕದಲ್ಲಿದ್ದ 300 ಶಂಕಿತರ ಮೇಲೆ ನಿಗಾವಹಿಸಲಾಗಿದೆ.
28 ಜನ ಬಿಡುಗಡೆ: ಕರೊನಾ ಸೋಂಕಿಗೆ ತುತ್ತಾಗಿದ್ದವರಲ್ಲಿ ಭಾನುವಾರ 28 ಜನರು ಗುಣಮುಖರಾಗಿದ್ದು, ಚಾಮರಾಜನಗರದ 8 ಜನ, ಗುಂಡ್ಲುಪೇಟೆಯ 12 ಜನ, ಕೊಳ್ಳೇಗಾಲದ 4 ಜನ, ಯಳಂದೂರಿನ ಇಬ್ಬರು, ಹನೂರಿನ ಒಬ್ಬರು ಕರೊನಾ ಸೋಂಕಿನಿಂದ ಮುಕ್ತರಾಗಿದ್ದಾರೆ. ಇವರಲ್ಲಿ ಗುಂಡ್ಲುಪೇಟೆ ಹೌಸಿಂಗ್ ಬೋರ್ಡ್ನ ನಾಲ್ಕು ವರ್ಷದ ಹೆಣ್ಣು ಮಗು ಹಾಗೂ ಹನೂರು ತಾಲೂಕಿನ ಗೋಪಿಶೆಟ್ಟಿಯೂರು, ಚಾಮರಾಜನಗರದ ಸೋಮವಾರಪೇಟೆಯ 60 ವರ್ಷ ಮೇಲ್ಪಟ್ಟವರೂ ಕರೊನಾದಿಂದ ಗುಣಮುಖರಾಗಿದ್ದಾರೆ.
ಜಿಲ್ಲೆಯ 2ನೇ ಬಲಿ: ಕರೊನಾ ಸೋಂಕಿಗೆ ತುತ್ತಾಗಿ ಮೈಸೂರಿನ ಅಪೋಲೊ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಕೊಳ್ಳೇಗಾಲ ದೇವಾಂಗ ಬೀದಿಯ 70 ವರ್ಷದ ವೃದ್ಧ ಭಾನುವಾರ ಮೃತಪಟ್ಟಿದ್ದಾರೆ.
ಶನಿವಾರ ಇದೇ ತಾಲೂಕಿನ ಕೊಂಗರಹಳ್ಳಿಯ 58 ವರ್ಷದ ವ್ಯಕ್ತಿ ಶನಿವಾರ ಮೃತಪಟ್ಟಿದ್ದು, ಒಟ್ಟು ಜಿಲ್ಲೆಯಲ್ಲಿ ಕರೊನಾಗೆ ಇಬ್ಬರು ಬಲಿಯಾದಂತಾಗಿದೆ.