ಚಾಮರಾಜನಗರ: ತಾಲೂಕಿನ ಆನೆಮಡುವು ಕೆರೆಗೆ ನೀರು ಹರಿಸುವುದನ್ನು ಏಕಾಕಿ ಸ್ಥಗಿತಗೊಳಿಸಿದ್ದಕ್ಕೆ ಆಕ್ರೋಶ ವ್ಯಕ್ತಪಡಿಸಿ ವೀರನಗೆರೆ, ಉಡಿಗಾಲ ಗ್ರಾಮಸ್ಥರು ಬುಧವಾರ ಪ್ರತಿಭಟನೆ ನಡೆಸಿದರು.
ಗುಂಡ್ಲುಪೇಟೆ ತಾಲೂಕಿನ ಉತ್ತೂರು ಕೆರೆಯಿಂದ ಆನೆಮಡುವು ಕೆರೆಗೆ ನೀರು ತುಂಬಿಸುವ ಯೋಜನೆಗೆ ಇಂದು ಚಾಲನೆ ನೀಡಲು ನಿರ್ಧರಿಸಲಾಗಿತ್ತು. ಈ ಸಂಬಂಧ ಶಾಸಕ ಸಿ.ಪುಟ್ಟರಂಗಶೆಟ್ಟಿ ಎರಡು ದಿನಗಳ ಹಿಂದೆ ಕಾಮಗಾರಿ ವೀಕ್ಷಿಸಿ ಜ.1ರಂದು ಆನೆಮಡುವು ಕೆರೆಗೆ ನೀರು ಹರಿಸಲಾಗುವುದು ಎಂದು ಘೋಷಿಸಿದ್ದರು.
ಹಲವು ವರ್ಷಗಳ ನಂತರ ಈ ಭಾಗದ ಕೆರೆ ತುಂಬುತ್ತಿರುವುದಕ್ಕೆ ಸಹಜವಾಗಿಯೇ ರೈತರು ಸಂತಸಗೊಂಡಿದ್ದರು. ಅಕ್ಕ-ಪಕ್ಕದ ಗ್ರಾಮಸ್ಥರು ಮತ್ತು ರೈತರು ಉದ್ಘಾಟನಾ ಕಾರ್ಯಕ್ರಮಕ್ಕಾಗಿ ಸಿದ್ಧತೆ ಮಾಡಿಕೊಂಡಿದ್ದರು. ಅಲ್ಲದೆ ಅನ್ನಸಂತರ್ಪಣೆ ಮಾಡಲಲು ಮುಂದಾಗಿದ್ದರು. ಆದರೆ ಬುಧವಾರ ಬೆಳಗ್ಗೆ ಜಿಲ್ಲಾಡಳಿತ ಕಾರ್ಯಕ್ರಮ ಮುಂದೂಡಲಾಗಿದೆ ಎಂಬ ವಿಷಯ ಪ್ರಕಟಿಸಿತು. ಇದರಿಂದ ಆಕ್ರೋಶಗೊಂಡ ರೈತರು ಪ್ರತಿಭಟನೆಗೆ ಮುಂದಾದರು.
ಕಾಂಗ್ರೆಸ್ ಮುಖಂಡ ಸುರೇಶ್, ರೈತ ಸಂಘದ ಗುರುಸ್ವಾಮಿ, ನಂಜಪ್ಪ ಹಾಗೂ ಇತರರು ಇದ್ದರು.
ನೀರು ಹರಿಸುವ ಯೋಜನೆಯಲ್ಲೂ ರಾಜಕೀಯ?: ಇತ್ತೀಚೆಗಷ್ಟೆ ಗುಂಡ್ಲುಪೇಟೆ ಶಾಸಕ, ಬಿಜೆಪಿ ಮುಖಂಡ ನಿರಂಜನ್ಕುಮಾರ್ ಉತ್ತೂರು ಕೆರೆಯಿಂದ ವಡ್ಡಗೆರೆ ಕೆರೆಗೆ ನೀರು ಹರಿಸುವ ಯೋಜನೆಗೆ ಚಾಲನೆ ನೀಡಿದ್ದರು.
ಇದೇ ರೀತಿ ಚಾಮರಾಜನಗರ ಶಾಸಕ ಪುಟ್ಟರಂಗಶೆಟ್ಟಿ ಅವರು ತಮ್ಮ ವ್ಯಾಪ್ತಿಯ ಆನೆಮಡುವು ಕೆರೆಗೆ ನೀರು ಹರಿಸಿ ಜನಪ್ರಿಯತೆ ಗಳಿಸಲಿದ್ದಾರೆ ಎಂಬ ಕಾರಣಕ್ಕೆ ಇಂದು ಚಾಲನೆ ನೀಡಬೇಕಿದ್ದ ಕಾರ್ಯಕ್ರಮ ಮುಂದೂಡಲಾಗಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದ್ದಾರೆ.