Chai Wala Baba: ಕಳೆದ 40 ವರ್ಷಗಳಿಂದ ಚಹಾ ಮಾರುತ್ತಲೇ ‘ಚಾಯ್ ವಾಲಾ ಬಾಬಾ’ ಎಂಬ ಖ್ಯಾತಿ ಪಡೆದು, ಅದರಿಂದಲೇ ಜೀವನ ಸಾಗಿಸಿಕೊಂಡು ಬಂದಿರುವ ಉತ್ತರ ಪ್ರದೇಶದ ಪ್ರತಾಪ್ಗಢದ ಟೀ ಮಾರಾಟಗಾರ, ಇದೀಗ ಹೆಚ್ಚಿನ ಸಮಯ ನಾಗರಿಕ ಸೇವಾ ಆಕಾಂಕ್ಷಿಗಳಿಗೆ ಉಚಿತ ತರಬೇತಿ ನೀಡುವುದಾಗಿ ತಿಳಿಸಿದ್ದಾರೆ. ಸದಾ ಮೌನದಿಂದ ಇರುವ ಹಾಗೂ ಯಾವುದೇ ಘನ ಆಹಾರ ಸೇವಿಸದೆ, ದಿನಕ್ಕೆ 10 ಕಪ್ ಚಹಾ ಕುಡಿದೇ ಬದುಕು ದೂಡುತ್ತಿರುವ ಬಾಬಾರ ಪ್ರತಿಜ್ಞೆ ಇಂದಿಗೂ ಅನೇಕರಲ್ಲಿ ಹಲವು ಪ್ರಶ್ನೆಗಳನ್ನು ಕಾಡುವಂತೆ ಮಾಡಿದೆ. ಕೇವಲ ಟೀ ಮಾರುವ, ಕುಡಿಯುವ ಮಧ್ಯೆ ಅವರ ಬೋಧನೆಯ ವಿಶಿಷ್ಟ ವಿಧಾನವು ಇದೀಗ ಬಹುತೇಕರ ಗಮನ ಸೆಳೆದಿದೆ.
ಇದನ್ನೂ ಓದಿ: ನಿದ್ದೆ ಮಂಪರಿನಲ್ಲಿ ಸಾವಿರಕ್ಕೂ ಅಧಿಕ ಕಂಪನಿಗಳಿಗೆ ಅರ್ಜಿ ಹಾಕಿದ ಭೂಪ; AI ಕರಾಮತ್ತಿನಿಂದ ರಾತ್ರೋರಾತ್ರಿ ಚೇಂಜಾಯ್ತು ಈತನ ಲಕ್
4-5 ವರ್ಷಗಳಿಂದ ಸಂಪರ್ಕ
‘ಚಾಯ್ ವಾಲಾ ಬಾಬಾ’ ಎಂದೇ ಖ್ಯಾತಿ ಪಡೆದಿರುವ ದಿನೇಶ್ ಸ್ವರೂಪ್ ಬ್ರಹ್ಮಚಾರಿ, ಸರ್ಕಾರಿ ನೌಕರಿ ಗಿಟ್ಟಿಸಿಕೊಳ್ಳುವ ಹಂಬಲದಿಂದ ಕಷ್ಟಪಡುವ ವಿದ್ಯಾರ್ಥಿಗಳಿಗೆ ವಾಟ್ಸ್ಆ್ಯಪ್ ನಂಬರ್ ಮೂಲಕ ತಮ್ಮ ಜ್ಞಾನವನ್ನು ಹಂಚಿಕೊಳ್ಳುವ ಕೆಲಸದಲ್ಲಿ ತೊಡಗಿದ್ದಾರೆ. ಆಕಾಂಕ್ಷಿಗಳ ಓದಿಗೆ ಬೇಕಾದ ವಿಷಯಗಳು, ಸಾಮಾಗ್ರಿಗಳನ್ನು ಸಂದೇಶದಲ್ಲಿ ಕಳಿಸುತ್ತಾರೆ. ಇದರೊಟ್ಟಿಗೆ ವಿದ್ಯಾರ್ಥಿಗಳಿಗೆ ಇರುವ ಗೊಂದಲಗಳು ಮತ್ತು ಅವರು ಕೇಳುವ ಪ್ರಶ್ನೆಗಳಿಗೆ ಉತ್ತರಿಸುತ್ತಾರೆ ಎಂದು ವರದಿ ತಿಳಿಸಿದೆ.
ಉತ್ತಮ ಸಲಹೆ, ಮಾರ್ಗದರ್ಶನ
ಪ್ರಸ್ತುತ ಪ್ರಯಾಗ್ರಾಜ್ನಲ್ಲಿ ನಡೆಯಲಿರುವ ಮಹಾ ಕುಂಭ ಮೇಳದಲ್ಲಿ ಭಾಗಿಯಾಗಿರುವ ಚಾಯ್ವಾಲಾ ಬಾಬಾ, ಆಕಾಂಕ್ಷಿಗಳಿಗೆ ಅಧ್ಯಯನಕ್ಕೆ ಬೇಕಾದ ಸಾಮಾಗ್ರಿಗಳು ಮತ್ತು ಉಚಿತ ಕೋಚಿಂಗ್ ಕೊಡಲು ನಿರ್ಧರಿಸಿದ್ದಾರೆ. ಈ ಬಗ್ಗೆ ನಾಗರಿಕ ಸೇವಾ ಆಕಾಂಕ್ಷಿಯಾದ ರಾಜೇಶ್ ಸಿಂಗ್ ಎಂಬುವರು ANI ಸುದ್ದಿ ಸಂಸ್ಥೆಗೆ ಮಾತನಾಡಿ, “ನಾನು ಬಾಬಾ ಅವರೊಂದಿಗೆ ಸುಮಾರು ನಾಲ್ಕೈದು ವರ್ಷಗಳಿಂದ ಸಂಪರ್ಕದಲ್ಲಿದ್ದೇನೆ. ನಾವು ಅವರ ಶಿಷ್ಯರು. ಕಾಲಕಾಲಕ್ಕೆ, ನಮಗೆ ಸಹಾಯ ಬೇಕಾದಾಗಲೆಲ್ಲಾ ಅವರು ಉತ್ತಮ ಮಾರ್ಗದರ್ಶನ ನೀಡಿದ್ದಾರೆ ಹಾಗೂ ಇಂದಿಗೂ ನೀಡುತ್ತಲೇ ಬಂದಿದ್ದಾರೆ” ಎಂದು ಹೇಳಿದರು.
ಲಿಖಿತ ರೂಪದಲ್ಲೇ ಉತ್ತರ
“ಚಾಯ್ವಾಲಾ ಬಾಬಾ ಮೌನದಲ್ಲೇ ಇರ್ತಾರೆ. ನಮ್ಮೊಂದಿಗೆ ಅವರು ವ್ಯವಹರಿಸುವುದು ಕೇವಲ ಲಿಖಿತ ರೂಪದಲ್ಲಿ ಮಾತ್ರ. ಸಂದೇಶಗಳು ಅಥವಾ ಸನ್ನೆಗಳ ಮುಖಾಂತರವೇ ಅವರು ಹಲವು ವಿಷಯಗಳನ್ನು ನಮಗೆ ತಿಳಿಸುತ್ತಾರೆ. ಭಾಷೆಗೆ ಒಂದು ಮಾಧ್ಯಮ ಬೇಕು, ಅದು ಬರಹ ಅಥವಾ ಮೌಖಿಕವಾಗಿಯೂ ಇರಬಹುದು. ಗುರೂಜಿ ಮೌನವಾಗಿದ್ದಾರೆ, ಆದರೆ ನಾವು ಅವರ ಸನ್ನೆಗಳು ಮತ್ತು ವಾಟ್ಸಾಪ್ ಸಂದೇಶಗಳ ಮೂಲಕ ವಿಷಯಗಳನ್ನು ಅರ್ಥಮಾಡಿಕೊಳ್ಳುತ್ತೇವೆ. ನಮ್ಮಲ್ಲಿ ಉದ್ಭವಿಸುವ ಪ್ರಶ್ನೆಗಳನ್ನು ನಾವು ಅವರಿಗೆ ಬರೆಯಬಹುದು. ಅದಕ್ಕೆ ಅವರು ಲಿಖಿತ ರೂಪದಲ್ಲೇ ಉತ್ತರಿಸುತ್ತಾರೆ. ಲಿಖಿತ ಮಾಧ್ಯಮ ಉತ್ತಮ ಎಂದು ನಾವು ನಂಬುವುದಿಲ್ಲ. ಆದ್ರೆ, ಅದು ತನ್ನ ಉದ್ದೇಶವನ್ನು ಪೂರೈಸುತ್ತದೆ ಎಂಬುದನ್ನು ನಂಬಿದ್ದೇವೆ” ಎಂದು ಸಿಂಗ್ ಹೇಳಿದ್ದಾರೆ.
12 ವರ್ಷಕ್ಕೊಮ್ಮೆ ನಡೆಯುವ ಕುಂಭಮೇಳ
ಭಾರತದಲ್ಲಿ ನಡೆಯುವ ಅತಿ ದೊಡ್ಡ ಉತ್ಸವ ಎಂದರೆ ಅದು ಕುಂಭಮೇಳ. ಜಗತ್ತಿನಲ್ಲೇ ಅತೀ ದೊಡ್ಡ ಸಂಖ್ಯೆಯಲ್ಲಿ ಜನ ಸೇರುವ ಧಾರ್ಮಿಕ ಹಾಗೂ ಸಾಂಸ್ಕೃತಿಕ ಮೇಳವಾಗಿದೆ. ಪ್ರತಿ 12 ವರ್ಷಕ್ಕೊಮ್ಮೆ ಕುಂಭಮೇಳ ನಡೆಯುತ್ತದೆ. ಆದರೆ, ಈ ಬಾರಿ ಪ್ರಯಾಗರಾಜ್ನಲ್ಲಿ ನಡೆಯುತ್ತಿರುವುದು ಮಹಾ ಕುಂಭಮೇಳ. ಇದು 144 ವರ್ಷಗಳಿಗೊಮ್ಮೆ ಬರುವ ಅತಿ ಅಪರೂಪದ ಘಟನೆಯಾಗಿದೆ. ಪಸ್ತುತ ಚಾಯ್ ವಾಲಾ ಬಾಬಾ ಕೂಡ ಅಲ್ಲೇ ವಾಸ್ತವ್ಯ ಹೂಡಿದ್ದು, ಕುಂಭಮೇಳದಲ್ಲಿ ಭಾಗಿಯಾಗಲಿದ್ದಾರೆ ಎಂದು ಹೇಳಲಾಗಿದೆ,(ಏಜೆನ್ಸೀಸ್).