ಉಡುಪಿ: ಬ್ರಾಹ್ಮಣರು ಮತ್ತು ಹಿಂದೂ ಸಮಾಜದ ವಿವಿಧ ವರ್ಗಗಳ ಜನಿವಾರಧಾರಿಗಳ ತ್ರಿಕರಣ ಶುದ್ಧಗೈಯುವ ಪವಿತ್ರ ದಾರ ಜನಿವಾರ. ಸಿಇಟಿ ಪರೀಾ ಕೇಂದ್ರಗಳಲ್ಲಿ ಜನಿವಾರ ತುಂಡು ಮಾಡಿರುವುದು ಮತ್ತು ವಿಪ್ರ ವಿದ್ಯಾರ್ಥಿಗಳಿಗೆ ಪ್ರವೇಶ ನಿಷೇಧಿಸಿರುವುದು ಖಂಡನೀಯ. ಈ ಹೀನ ಕೃತ್ಯಕ್ಕೆ ಪ್ರಚೋದನೆ ನೀಡಿದ ವ್ಯಕ್ತಿಗಳ ಮೇಲೆ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಉಡುಪಿ ತಾಲೂಕು ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ಶ್ರೀಕಾಂತ ಉಪಾಧ್ಯಾಯ ಆಗ್ರಹಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇತ್ತೀಚಿನ ದಿನಗಳಲ್ಲಿ ಬ್ರಾಹ್ಮಣ ಸಮಾಜದ ನೈತಿಕತೆಯ ಮೇಲೆ ಕ್ರೌರ್ಯ, ದಬ್ಬಾಳಿಕೆ ಮಿತಿ ಮೀರಿದ ವಾತಾವರಣ ನಿಮಾರ್ಣವಾಗುತ್ತಿದೆ. ಸರ್ಕಾರ ಇನ್ನಾದರೂ ಎಚ್ಚೆತ್ತು ಇಂತಹ ದುರ್ಘಟನೆಗಳು ಪನರ್ಘಟಿಸದಂತೆ ನೋಡಿಕೊಳ್ಳಬೇಕು. ಪರೀಕ್ಷೆಗೂ ಜನಿವಾರಕ್ಕೂ ಸಂಬಂಧವಿಲ್ಲ. ಜನಿವಾರದಿಂದ ಕಾಪಿ ಮಾಡಲು ಸಾಧ್ಯವಿಲ್ಲ. ವಿಪ್ರರು ಮಾತ್ರವಲ್ಲ ಹಿಂದೂ ಧರ್ಮದಲ್ಲಿ ಇತರ ಜಾತಿವರ್ಗದವರೂ ಜನಿವಾರ ಧರಿಸುತ್ತಾರೆ ಎಂಬುದನ್ನು ಸರ್ಕಾರ ತಿಳಿದುಕೊಳ್ಳಬೇಕು ಎಂದರು.
ಪರೀಕ್ಷೆ ಪೂರ್ವನಿರ್ಧರಿತ ನೀತಿ ಸಂಹಿತೆ ಇದೆ. ಆದರೆ ಧಾರ್ಮಿಕ ಕಟ್ಟುಪಾಡುಗಳ ವಿರುದ್ಧ ಕೆಲಸ ಮಾಡಲು ಕಾಣದ ಕೈಗಳು ಪ್ರಯತ್ನಿಸುತ್ತಿವೆ. ಹೀಗಾಗಿ ಎಲ್ಲಾ ಸನಾತನ ಹಿಂದೂ ಧರ್ಮದವರು ಒಟ್ಟು ಸೇರಿ ಪ್ರತಿಭಟಿಸಬೇಕಾಗಿದೆ. ಪರೀಕ್ಷಾ ವಂಚಿತ ಎಲ್ಲಾ ವಿದ್ಯಾರ್ಥಿಗಳಿಗೆ ಪುನ@ ಪರೀಕ್ಷೆಗೆ ಅವಕಾಶ ಮಾಡಿಕೊಟ್ಟು ಭವಿಷ್ಯ ರೂಪಿಸಲು ನೆರವಾಗಬೇಕು. ದಬ್ಬಾಳಿಕೆಯನ್ನು ತೋರಿಸಿದ ಅಧಿಕಾರಿವರ್ಗಕ್ಕೆ ಶಿಕ್ಷೆಯಾಗಬೇಕು ಎಂದರು.
ಜಿಲ್ಲಾ ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ಸಂದೀಪ್ ಕುಮಾರ್ ಮಂಜ, ಜಿಲ್ಲಾ ಯುವ ಬ್ರಾಹ್ಮಣ ಪರಿಷತ್ ಅಧ್ಯಕ್ಷ ಚಂದ್ರಕಾಂತ್ ಭಟ್, ತುಳು ಶಿವಳ್ಳಿ ಮಾಧ್ವ ಮಹಾಮಂಡಳಿ ಅಧ್ಯಕ್ಷ ಜಯರಾಮ ಆಚಾರ್ಯ, ಜಿಲ್ಲಾ ಸ್ಥಾನಿಕ ಬ್ರಾಹ್ಮಣ ಸಮಾಜ ಅಧ್ಯಕ್ಷ ಗಣೇಶ್ ಹೆಬ್ಬಾರ್, ಮಹಾಮಂಡಳಿ ಅಧ್ಯಕ್ಷ ಮಂಜುನಾಥ ಹೆಬ್ಬಾರ್, ಕೂಟ ಮಹಾಜಗತ್ತು ಅಧ್ಯಕ್ಷ ವೈ. ಗಣೇಶ್, ಕರಾಡ ಬ್ರಾಹ್ಮಣ ಸಮಾಜ ಅಧ್ಯಕ್ಷ ಪಾಂಡುರಂಗ ಲಾಗ್ಟನ್ಕರ್ ಮೊದಲಾದವರಿದ್ದರು.