ಬೆಂಗಳೂರು: ರಾಜ್ಯದಲ್ಲಿ ನಡೆದ ಸಾಮಾಜಿಕ, ಆರ್ಥಿಕ ಸಮೀಕ್ಷೆಯಲ್ಲಿ ರೆಡ್ಡಿ ಜನಾಂಗದ ಜನಸಂಖ್ಯೆ ಕಡಿಮೆ ಇದ್ದು, ರೆಡ್ಡಿ ಜನರ ಹಿತಾಸಕ್ತಿಗೆ ವ್ಯತಿರಿಕ್ತ ತೀರ್ಮಾನ ಕೈಗೊಂಡಲ್ಲಿ ಸರ್ಕಾರದ ವಿರುದ್ಧ ಉಗ್ರ ಹೋರಾಟ ಮಾಡುವುದಾಗಿ ಕರ್ನಾಟಕ ರಾಜ್ಯ ರೆಡ್ಡಿ ಜನಸಂಘ ಎಚ್ಚರಿಕೆ ನೀಡಿದೆ.
ಸಂಘದ ಆಡಳಿತ ಮಂಡಳಿಯಲ್ಲಿ ಕೈಗೊಂಡ ನಿರ್ಣಯದಂತೆ ರಾಜ್ಯದ ಎಲ್ಲಾ ಜಿಲ್ಲಾ, ತಾಲ್ಲೂಕು ಸಂಘದ ಅಧ್ಯಕ್ಷರು, ಪದಾಧಿಕಾರಿಗಳ ಸಭೆಯಲ್ಲಿ ಅಭಿಪ್ರಾಯ ಸಂಗ್ರಹಿಸಿದ ನಂತರ ಕರ್ನಾಟಕ ರೆಡ್ಡಿ ಜನಸಂಘದ ಅಧ್ಯಕ್ಷ ಜಯರಾಮರೆಡ್ಡಿ ಮಾತನಾಡಿ ರಾಜ್ಯದಲ್ಲಿ ವಾಸ್ತವವಾಗಿ ನಮ್ಮ ಜನಾಂಗದ ಜನಸಂಖ್ಯೆ 35 ರಿಂದ 40 ಲಕ್ಷದಷ್ಟಿದೆ. ಆದರೆ ವರದಿಯಲ್ಲಿ ಕೇವಲ 7.5 ಲಕ್ಷ ತೋರಿಸಿದ್ದಾರೆ. ನಮ್ಮ ಸಂಘದಿಂದಲೇ ರೆಡ್ಡಿ ಜನಾಂಗದ ಗಣತಿ ಮಾಡುತ್ತೇವೆ ಎಂದರು.
ಸಂಘದ ಸಲಹಾ ಮಂಡಳಿ ಸಭೆಯಲ್ಲಿ ಸೂಕ್ತ ತೀರ್ಮಾನ ಕೈಗೊಂಡು ಸರ್ಕಾರಕ್ಕೆ ಶಿಫಾರಸ್ಸು ಮಾಡುತ್ತೇವೆ. ನಮ್ಮ ಹಿತಾಸಕ್ತಿಗೆ ವಿರುದ್ಧವಾಗಿ ಸರ್ಕಾರ ನಡೆದುಕೊಂಡರೆ ಹೋರಾಟ ಮಾಡುತ್ತೇವೆ. ಸಮೀಕ್ಷೆಯಲ್ಲಿ ನಮ್ಮ ಸಮುದಾಯದ ಜನಸಂಖ್ಯೆಯನ್ನು ಅತ್ಯಂತ ಕಡಿಮೆ ತೋರಿಸಲಾಗಿದೆ ಎಂದು ದೂರಿದರು.
ವಾಸ್ತವಿಕ ಅಂಕಿ-ಅಂಶಗಳಿಲ್ಲ
ವಾಸ್ತವಿಕ ಅಂಕಿ-ಅಂಶಗಳಿಲ್ಲವೆಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ, ಇತರೆ ಸಚಿವರು ಮತ್ತು ಪಕ್ಷಾತೀತವಾಗಿ ಎಲ್ಲಾ ಹಾಲಿ, ಮಾಜಿ, ಶಾಸಕರು, ಮತ್ತಿತರ ಮುಖಂಡರನ್ನು ಭೇಟಿ ಮಾಡಿ ಗಮನಕ್ಕೆ ತರುವ ಜತೆಗೆ ಸಭೆಯ ಅಭಿಪ್ರಾಯಗಳನ್ನು ತಿಳಿಸಿ, ನಂತರ ಹೋರಾಟವನ್ನು ಸೂಕ್ತ ರೀತಿಯಲ್ಲಿ ರೂಪಿಸುತ್ತೇವೆ ಎಂದರು.
ರೆಡ್ಡಿ ಜನಾಂಗಕ್ಕಾಗಿ ಪ್ರತ್ಯೇಕ ನಿಗಮ ಸ್ಥಾಪಿಸಬೇಕು. ನಮ್ಮ ಸಮುದಾಯವನ್ನು ಕೇಂದ್ರದ ಒಬಿಸಿ ಪಟ್ಟಿಗೆ ಸೇರಿಸುವಂತೆ ಸಿದ್ದರಾಮಯ್ಯ ಅವರಿಗೆ ಈಗಾಗಲೇ ಮನವಿ ಸಲ್ಲಿಸಿದ್ದೇವೆ. ಸಂಘದ ಶತಮಾನೋತ್ಸವಕ್ಕೆ ಮುನ್ನ ಈ ಬೇಡಿಕೆಗಳನ್ನು ಕಾಲಮಿತಿಯಲ್ಲಿ ಈಡೇರಿಸಬೇಕು ಎಂದು ಜಯರಾಮರೆಡ್ಡಿ ಒತ್ತಾಯಿಸಿದರು.
ಸಭೆಯಲ್ಲಿ ಸಂಘದ ಉಪಾಧ್ಯಕ್ಷರಾದ ವೆಂಕಟಶಿವಾ ರೆಡ್ಡಿ, ಕೃಷ್ಣಾ ರೆಡ್ಡಿ, ಪ್ರಧಾನ ಕಾರ್ಯದರ್ಶಿ ಶೇಖರ್ ರೆಡ್ಡಿ, ಜಿಲ್ಲಾ, ತಾಲ್ಲೂಕು ಘಟಕದ ಅಧ್ಯಕ್ಷರು, ಸಂಘದ ಪದಾಧಿಕಾರಿಗಳು, ಜಿಲ್ಲಾ ಪ್ರತಿನಿಧಿಗಳು ಸೇರಿ 450 ಕ್ಕೂ ಅಧಿಕ ಮಂದಿ ನಾಯಕರು ಸಭೆಯಲ್ಲಿ ಪಾಲ್ಗೊಂಡಿದ್ದರು