ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಭಾರಿ ಕೋಲಾಹಲ ಸೃಷ್ಟಿಸಿದ್ದ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರದ್ದು ಎನ್ನಲಾದ ಅಶ್ಲೀಲ ಸಿಡಿ ಪ್ರಕರಣ ಮತ್ತೊಂದು ತಿರುವು ಪಡೆದಿದೆ. ಯುವತಿ ಹಾಗೂ ಇತರ ಆರೋಪಿಗಳು ಸೇರಿಕೊಂಡು ಮಾಜಿ ಸಚಿವರಿಗೆ ಬ್ಲ್ಯಾಕ್ಮೇಲ್ ಮಾಡಿ ಹಣ ಪಡೆದಿರುವುದಕ್ಕೆ ಎಸ್ಐಟಿ ತನಿಖೆಯಲ್ಲಿ ಸಾಕ್ಷ್ಯಾಧಾರ ಸಿಕ್ಕಿದೆ ಎಂದು ಗೊತ್ತಾಗಿದೆ.
ಪ್ರಕರಣದ ತನಿಖೆ ಪೂರ್ಣಗೊಂಡಿದ್ದು, ಯುವತಿ ನೀಡಿದ ದೂರಿನಲ್ಲಿ ತನಿಖಾಧಿಕಾರಿಗಳು ‘ಬಿ’ ವರದಿ ಸಲ್ಲಿಸುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ. ಆದರೆ, ಜಾರಕಿಹೊಳಿ ನೀಡಿದ್ದ ಬ್ಲ್ಯಾಕ್ಮೇಲ್ ಕೇಸ್ನಲ್ಲಿ ಯುವತಿ ಹಾಗೂ ಶಂಕಿತರಾದ ನರೇಶ್ ಗೌಡ, ಶ್ರವಣ್ ವಿರುದ್ಧ ಸಾಕ್ಷ್ಯ ಸಮೇತ ದೋಷಾರೋಪ ಪಟ್ಟಿ ಸಲ್ಲಿಸಲು ಸಿದ್ಧತೆ ಮಾಡಿಕೊಂಡಿದೆ ಎಂದು ತಿಳಿದು ಬಂದಿದೆ. ಪ್ರಕರಣದ ಅಂತಿಮ ಹಂತದ ಚಾರ್ಜ್ಶೀಟ್ ರೆಡಿಯಾಗಿದ್ದು, ಕೋರ್ಟ್ ಸೂಚನೆಗಾಗಿ ಎಸ್ಐಟಿ ತಂಡ ಕಾದು ಕುಳಿತಿದೆ.
ಸಂಚು ರೂಪಿಸಿ ಕೃತ್ಯ?: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಮೊಬೈಲ್ ಪರಿಶೀಲಿಸಿದಾಗ ಕಾಲ್ ಡಿಟೇಲ್ಸ್ನಲ್ಲಿ ಯುವತಿಯೇ ಹೆಚ್ಚು ಬಾರಿ ಕರೆ ಮಾಡಿರುವುದು ಗೊತ್ತಾಗಿದೆ. ಯುವತಿ ವ್ಯಾನಿಟಿ ಬ್ಯಾಗ್ನಲ್ಲಿ ಕ್ಯಾಮರಾ ಇಟ್ಟು ಜಾರಕಿಹೊಳಿ ಅವರೊಂದಿಗೆ ಕಳೆದ ಖಾಸಗಿ ಕ್ಷಣದ ವಿಡಿಯೋ ಸೆರೆಹಿಡಿದಿದ್ದಳು. ಶಂಕಿತರಿಗೆ ಈ ಬಗ್ಗೆ ಮಾಹಿತಿ ನೀಡಿ ಜಾರಕಿಹೊಳಿ ವಾಟ್ಸ್ಆಪ್ಗೂ ಕಳುಹಿಸಿದ್ದಳು. ಈ ನಡುವೆ ಮೂರನೇ ವ್ಯಕ್ತಿಯೊಬ್ಬ ಜಾರಕಿಹೊಳಿ ಆಪ್ತರೊಬ್ಬರಿಗೆ ಇದೇ ವಿಡಿಯೋ ಕಳುಹಿಸಿ ಹಣಕ್ಕೆ ಬೇಡಿಕೆಯಿಟ್ಟದ್ದ. ಎಲ್ಲಿ ವಿಡಿಯೋ ಬಹಿರಂಗಗೊಳ್ಳುತ್ತದೋ ಎಂಬ ಭೀತಿಯಿಂದ ಜಾರಕಿಹೊಳಿ ಬೇರೆಯವರ ಮೂಲಕ ಒಂದಿಷ್ಟು ಹಣ ಕೊಟ್ಟಿದ್ದರು ಎನ್ನಲಾಗಿದೆ.
ಸಾಕ್ಷ್ಯಾಧಾರಗಳೇನು?
- ಸಿಡಿ ಬಹಿರಂಗಪಡಿಸಿದ ದಿನವೇ ಯುವತಿ ಹಾಗೂ ಶಂಕಿತರ ನಡುವೆ ಹಲವು ಬಾರಿ ಮೊಬೈಲ್ ಸಂಭಾಷಣೆ ನಡೆದಿರುವುದು.
- ಶಂಕಿತರು ಹಾಗೂ ಯುವತಿಯ ಬ್ಯಾಂಕ್ ಖಾತೆಗೆ ಹಣ ಜಮೆಯಾಗಿರುವುದು
- ಸಿಡಿ ಬಿಡುಗಡೆ ಬಳಿಕ ಈ ತಂಡದಲ್ಲಿದ್ದವರು ವೈ-ಫೈ ಬಳಸಿಕೊಂಡು ಕರೆ ಮಾಡಿ ಮಾತುಕತೆ ನಡೆಸಿದ್ದು.
- ಆರೋಪಿಗಳ ವಿರುದ್ಧ 17 ಜನ ಸಾಕ್ಷ್ಯ ನುಡಿದಿರುವುದು.
- ಯುವತಿಯ ಆರ್ಟಿನಗರದ ಮನೆಯಲ್ಲಿ 9.20 ಲಕ್ಷ ರೂ. ಪತ್ತೆಯಾಗಿರುವುದು.
- ಸಿಡಿಯಲ್ಲಿ ಸೆರೆಯಾದ ದೃಶ್ಯದಲ್ಲಿ ಇಬ್ಬರೂ ಮಾತುಕತೆ ನಡೆಸಿರುವುದು.
- ಮಹಜರು ವೇಳೆ ಯುವತಿ ವಿರುದ್ಧ ಸಿಕ್ಕ ಮಹತ್ವದ ದಾಖಲೆಗಳು.
ಮುಖ್ಯಸ್ಥರ ಗೈರಿನಲ್ಲಿ ತನಿಖೆ ಸಮರ್ಥನೀಯವೇ?
ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣದ ತನಿಖೆಯನ್ನು ವಿಶೇಷ ತನಿಖಾ ತಂಡದ (ಎಸ್ಐಟಿ) ಮುಖ್ಯಸ್ಥ ಸೌಮೇಂದು ಮುಖರ್ಜಿ ಅನುಪಸ್ಥಿತಿಯಲ್ಲಿ ನಡೆಸುತ್ತಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿರುವ ಹೈಕೋರ್ಟ್, ಈ ಬಗ್ಗೆ ವಿವರಣೆ ನೀಡುವಂತೆ ಸರ್ಕಾರಕ್ಕೆ ನಿರ್ದೇಶಿಸಿದೆ.
ಪ್ರಕರಣದ ಸಂಬಂಧ ಸಲ್ಲಿಕೆಯಾಗಿರುವ 3 ಅರ್ಜಿಗಳನ್ನೂ ಮಂಗಳವಾರ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕ್ ನೇತೃತ್ವದ ವಿಭಾಗೀಯಪೀಠ, ಜು.19ರಂದು ಎಸ್ಐಟಿ ಉಸ್ತುವಾರಿಯಾಗಿರುವ ಅಪರಾಧ ವಿಭಾಗದ ಜಂಟಿ ಆಯುಕ್ತ ಸಂದೀಪ್ ಪಾಟೀಲ್ ಹೈಕೋರ್ಟ್ಗೆ ವರದಿ ಸಲ್ಲಿಸಿದ್ದಾರೆ. ಅದರಲ್ಲಿ ಸೌಮೇಂದು ಮುಖರ್ಜಿ ಸಹಿ ಇಲ್ಲ. ಎಸ್ಐಟಿ ಮುಖ್ಯಸ್ಥ ದೀರ್ಘಕಾಲದ ರಜೆಯಲ್ಲಿದ್ದರೆ ಅವರ ಸ್ಥಾನಕ್ಕೆ ಮತ್ತೊಬ್ಬ ಹಿರಿಯ ಅಧಿಕಾರಿಯನ್ನು ನೇಮಕ ಮಾಡಬಹುದಿತ್ತಲ್ಲವೇ, ಮುಖ್ಯಸ್ಥರ ಅನುಪಸ್ಥಿತಿಯಲ್ಲಿ ತನಿಖೆ ನಡೆಸಬಹುದೇ, ಆ ತನಿಖೆ ಸಮರ್ಥನೀಯವೇ ಎಂದು ಪ್ರಶ್ನಿಸಿತು.
ಮತ್ತೊಂದೆಡೆ ಯುವತಿ ಪರ ಹಿರಿಯ ವಕೀಲೆ ಇಂದಿರಾ ಜೈಸಿಂಗ್ ವಾದ ಮಂಡಿಸಿ, ತನಿಖೆ ಪೂರ್ಣಗೊಳ್ಳುವವರೆಗೆ ಮಾಧ್ಯಮಗಳಿಗೆ ಮಾಹಿತಿ ನೀಡದಂತೆ ಸುತ್ತೋಲೆ ಹೊರಡಿಸಲಾಗಿದ್ದರೂ ತನಿಖಾ ವರದಿಯಲ್ಲಿರುವ ವಿವರಗಳು ಪತ್ರಿಕೆಯೊಂದರಲ್ಲಿ ಪ್ರಕಟಗೊಂಡಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದರು.
ತಾತ ಸಿಎಂ ಆಗಿದ್ದರು, ಈಗ ತಂದೆಯೂ ಸಿಎಂ; ಮೊಮ್ಮಗ ಕೂಡ ರಾಜಕೀಯಕ್ಕೆ ಬರ್ತಾರಾ?
ನಿಯೋಜಿತ ಸಿಎಂ ಬಸವರಾಜ ಬೊಮ್ಮಾಯಿ ಇಂಜಿನಿಯರಿಂಗ್ ಪದವೀಧರ, ಜಲಸಂಪನ್ಮೂಲ ವಿಷಯತಜ್ಞ