ಮೋರಟಗಿ: ಸಾರಿಗೆ ಬಸ್ ನಿಲುಗಡೆಗೆ ಆಗ್ರಹಿಸಿ ಸಿಂದಗಿ ತಾಲೂಕಿನ ಯರಗಲ್ ಕೆ.ಡಿ. ಗ್ರಾಮಸ್ಥರು ಗುರುವಾರ ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟಿಸಿದರು.
ರೈತ ಸಂಘದ ರಾಜ್ಯ ಕಾರ್ಯದರ್ಶಿ ಪೀರು ಕೆರೂರ ಮಾತನಾಡಿ, ಗ್ರಾಮದಲ್ಲಿ ಎರಡು ಸಾವಿರ ಜನಸಂಖ್ಯೆ ಇದೆ. ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಖಾಸಗಿ ಶಾಲೆಗಳು, ಪಿಯು ಕಾಲೇಜ್ ಇದ್ದು, ಸುತ್ತಲಿನ ಹತ್ತಾರು ಹಳ್ಳಿಯ ಮಕ್ಕಳು ಕಲಿಯಲು ಬರುತ್ತಾರೆ. ಗ್ರಾಮದಿಂದ ನಿತ್ಯ ಕೂಲಿ ಕಾರ್ಮಿಕರು ದುಡಿಯಲು ಹೋಗುತ್ತಾರೆ.
ವಿಜಯಪುರ ವಿಭಾಗದ ಬಸ್ಗಳು ಮಾತ್ರ ನಿಲ್ಲುತ್ತಿವೆ. ಕಲಬುರಗಿ ವಿಭಾಗದ ಬಸ್ಗಳು ನಿಲ್ಲಿಸುತ್ತಿಲ್ಲ. ಈಗಾಗಲೇ ಸಿಂದಗಿ, ವಿಜಯಪುರ, ಕಲಬುರಗಿ ಸಾರಿಗೆ ಅಧಿಕಾರಿಗಳಿಗೆ ಲಿಖಿತ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಸಿಂದಗಿ ಪಿಎಸ್ಐ ಮುಶಾಫಿರ್ ಅವರು ಸಂಬಂಧಿತ ಅಧಿಕಾರಿಗಳೊಂದಿಗೆ ಮಾತನಾಡಿದರು. ಸಿಂದಗಿ ಘಟಕ ವ್ಯವಸ್ಥಾಪಕ ರೇವಣಸಿದ್ದಪ್ಪ ಖೈನೂರ ಅವರು ಸ್ಥಳಕ್ಕೆ ಆಗಮಿಸಿ ಸಮಸ್ಯೆ ಈಡೇರಿಸುವ ಭರವಸೆ ನೀಡಿದ ನಂತರ ಪ್ರತಿಭಟನೆ ಕೈಬಿಡಲಾಯಿತು. ರಸ್ತೆ ತಡೆಯಿಂದಾಗಿ ಕೆಲ ಸಮಯ ಸಂಚಾರಕ್ಕೆ ತೊಂದರೆಯಾಯಿತು.
ಗ್ರಾಮದ ಪ್ರಮುಖರಾದ ಚಂದ್ರಾಮ ಯಂಕಂಚಿ, ರಾಮಚಂದ್ರ ಸೊನ್ನದ, ಪೀರಪ್ಪ ಯಂಕಂಚಿ, ಪರುವ ಯಂಕಂಚಿ, ವಿಶ್ವನಾಥ ಯಂಕಂಚಿ, ರಾಮಚಂದ್ರ ಹುಡೇದ, ಮುತ್ತಣ್ಣ ಯಂಕಂಚಿ, ಸಂಜು ಹೊಸಮನಿ, ಭೀಮಣ್ಣ ಹೊಸಮನಿ, ರಾಜು ಹೊಸಮನಿ, ರೇವಪ್ಪ ಹೊಸಮನಿ, ದುಳಪ್ಪ ಹೊಸಮನಿ ಪಾಲ್ಗೊಂಡಿದ್ದರು.