ಸರಗೂರು: ಲಂಕೆ ಗ್ರಾಮಕ್ಕೆ ಸಾರಿಗೆ ಬಸ್ ಸೌಲಭ್ಯ ಕಲ್ಪಿಸಿಕೊಡುವಂತೆ ಕರ್ನಾಟಕ ಭೀಮಸೇನೆ ಸಂಘಟನೆ ವತಿಯಿಂದ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರಿಗೆ ಮನವಿ ಸಲ್ಲಿಸಿದ ಹಿನ್ನೆಲೆಯಲ್ಲಿ ಗ್ರಾಮಕ್ಕೆ ಬಸ್ ಸಂಚಾರ ಆರಂಭಿಸಲಾಗಿದೆ.
ತಾಲೂಕಿನ ಲಂಕೆ ಗ್ರಾಮಕ್ಕೆ ನಂಜನಗೂಡು ತಾಲೂಕಿನ ಹುಲ್ಲಹಳ್ಳಿ ಹಾಗೂ ಸರಗೂರು ಮಾರ್ಗವಾಗಿ ಬಸ್ ವ್ಯವಸ್ಥೆ ಇಲ್ಲದೆ ಶಾಲೆ, ಕಾಲೇಜುಗಳಿಗೆ ತೆರಳಲು ವಿದ್ಯಾರ್ಥಿಗಳು ಪರದಾಡುವಂತಾಗಿತ್ತು. ಹಾಗಾಗಿ ಸಂಘಟನೆ ಅಧ್ಯಕ್ಷ ಶಂಕರ್ ರಾಮಲಿಂಗಯ್ಯ ನೇತೃತ್ವದಲ್ಲಿ ಪದಾಧಿಕಾರಿಗಳಾದ ಅಶೋಕ ಕುಮಾರ್, ಮಂಜುನಾಥ, ಸಂಪತ್ ಕುಮಾರ್, ದಯಾನಂದ, ಶಿವರಾಜು, ಶಾನು, ಆದರ್ಶ, ಸತೀಶ್, ಇ.ಕರಿಯಪ್ಪ, ಮಹಾದೇವ ಪ್ರಸಾದ್, ಮಹಾದೇವ ಸ್ವಾಮಿ ಬೆಂಗಳೂರಿನಲ್ಲಿ ಸಚಿವ ರಾಮಲಿಂಗಾರೆಡ್ಡಿ ಅವರನ್ನು ಭೇಟಿ ಮಾಡಿ ಬಸ್ ಸೌಕರ್ಯ ಕಲ್ಪಿಸಿಕೊಡುವಂತೆ ಕೆಲ ದಿನಗಳ ಹಿಂದೆ ಮನವಿ ಸಲ್ಲಿಸಿದ್ದರು.
ಮನವಿ ಸಲ್ಲಿಸಿದ 23 ದಿನದೊಳಗೆ ಚಾಮರಾಜನಗರ ವಿಭಾಗ ನಂಜನಗೂಡು ಘಟಕದ ಅಧಿಕಾರಿಗಳು ಬಸ್ ಸೌಲಭ್ಯ ಕಲ್ಪಿಸಿದ್ದಾರೆ ಎಂದು ಸಂಘಟನೆ ಪದಾಧಿಕಾರಿಗಳು ತಿಳಿಸಿದ್ದಾರೆ.