ಮಂಡ್ಯ: ಎಷ್ಟೇ ವರ್ಷ ಕಳೆದರೂ ಗೌತಮ ಬುದ್ಧರ ಸಾಧನೆ, ಸಹನೆಯನ್ನು ಇನ್ನೂ ದೇಶ, ವಿದೇಶದ ಜನರು ನೆನಪಿಟ್ಟಿಕೊಂಡಿದ್ದಾರೆಂದರೆ ಸಮಾಜಕ್ಕೆ ಅವರು ನೀಡಿದ ಕೊಡುಗೆ ಅಪಾರ ಎಂದು ಅಪರ ಜಿಲ್ಲಾಧಿಕಾರಿ ಬಿ.ಸಿ.ಶಿವಾನಂದಮೂರ್ತಿ ಬಣ್ಣಿಸಿದರು.
ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಆಯೋಜಿಸಲಾಗಿದ್ದ ಭಗವಾನ್ ಬುದ್ಧ ಜಯಂತ್ಯುತ್ಸವ ಉದ್ಘಾಟಿಸಿ ಮಾತನಾಡಿದ ಅವರು, ಸಕಲ ಸಂಪತ್ತು ರಾಜ ವೈಭೋಗವನ್ನು ಜ್ಞಾನ, ನೆಮ್ಮದಿ, ಶಾಂತಿಗಾಗಿ ತೋರೆದವರು ಭಗವಾನ್ ಬುದ್ಧ. ಅವರು ತೋರಿದ ಜ್ಞಾನದ ಮಾರ್ಗದಲ್ಲಿಯೇ ಮುಂದೆ ಸಾಗೋಣ ಎಂದರು.
ಗೌತಮ ಬುದ್ಧರ ಮಾರ್ಗದಲ್ಲಿ ಸಾಗಿದರೆ ಬದುಕಿನಲ್ಲಿ ಸುಖ, ಶಾಂತಿ, ನೆಮ್ಮದಿ ಕಾಣಬಹುದು. ಬುದ್ಧ ಅವರು ಅತ್ಯಂತ ಸರಳವಾಗಿ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕಾದ ನೈತಿಕ ಮೌಲ್ಯಗಳ ಕುರಿತು ತಿಳಿಸಿದ್ದಾರೆ. ಶಾಂತಿ ಮತ್ತು ನೆಮ್ಮದಿಯ ಮುಂದೆ ಯಾವುದೂ ದೊಡ್ಡದಲ್ಲ ಎಂದು ಅವರ ಪಂಚಶೀಲ ತತ್ವಗಳು ಹೇಳುತ್ತವೆ ಎಂದು ಹೇಳಿದರು.
ಕೊಳ್ಳೇಗಾಲದ ಚನ್ನಲಿಂಗನಹಳ್ಳಿಯ ಜೇತವನ ಬುದ್ಧವಿಹಾರದ ಭಂತೆ ಮನೋರಖ್ಖಿತ ಬಿಕ್ಕು ಸ್ವಾಮೀಜಿ ಮಾತನಾಡಿ, ಇದೇ ಮೊದಲ ಬಾರಿಗೆ ರಾಜ್ಯಸರ್ಕಾರದಿಂದ ಜಯಂತಿ ಆಚರಿಸಲು ಆದೇಶ ಹೊರಡಿಸಿರುವುದಕ್ಕೆ ಧನ್ಯವಾದ ತಿಳಿಸುತ್ತೇನೆ. ಸತ್ತ ನಂತರ ಪಡೆಯುವುದು ನಿಬ್ಬಣ ಅಲ್ಲ. ಲೋಭ ಮೋಹ ದ್ವೇಷವಿಲ್ಲದೆ ಬದುಕುವುದು ನಿಬ್ಬಣ ಎಂದರು.
ಪಾಶ್ಚಿಮಾತ್ಯ ದೇಶಗಳಲ್ಲಿ ಜನರು ಬುದ್ಧನ ತತ್ವ ಸಂದೇಶ ಮತ್ತು ಅವರ ವಿಚಾರಗಳ ಪ್ರಭಾವಕ್ಕೊಳಗಾಗಿದ್ದಾರೆ. ಮಾತ್ರವಲ್ಲದೆ ಬುದ್ಧ ಪಥವನ್ನು ಅನುಸರಿಸುತ್ತಿದ್ದಾರೆ. ಪ್ರಪಂಚದಲ್ಲಿ 300ಕ್ಕೂ ಹೆಚ್ಚು ಧರ್ಮಗಳಿವೆ. ಧರ್ಮವು ಮನುಷ್ಯ ಮತ್ತು ದೇವರ ನಡುವಿನ ಸಂಬಂಧದ ಕುರಿತು ಹೇಳುತ್ತದೆ. ಆದರೆ ಧಮ್ಮ ಮನುಷ್ಯ ಮತ್ತು ಅವನ ಮನಸ್ಸಿನ ನುಡುವಿನ ಸಂಬಂಧ ತಿಳಿಸುತ್ತದೆ. ಬುದ್ಧಿಸಂ ಧರ್ಮವಲ್ಲ. ಮನುಷ್ಯನ ಇಚ್ಚಾಶಕ್ತಿಗಿಂತ ಮಿಗಿಲಾದದ್ದು ಯಾವುದು ಇಲ್ಲ. ನಾವೆಲ್ಲರೂ ಗೌತಮ ಬುದ್ಧರ ಪಂಚಶೀಲ ತತ್ವಗಳನ್ನು ಪಾಲಿಸಿದರೆ ಆದರ ಅರಿವು, ಯಶಸ್ಸಿನ ಮಾರ್ಗವನ್ನು ತಿಳಿಯಬಹುದು. ಹಾಗಾಗಿ ಬುದ್ಧನ ತತ್ವಗಳನ್ನು ಪಾಲಿಸಿ ಎಂದು ಹೇಳಿದರು.
ಮೈಸೂರು ವಿಶ್ವವಿದ್ಯಾನಿಲಯದ ಡಾ. ಬಿ.ಆರ್.ಅಂಬೇಡ್ಕರ್ ಸಂಶೋಧನಾ ಮತ್ತು ವಿಸ್ತರಣಾ ಕೇಂದ್ರದ ಅಧ್ಯಾಪಕಿ ಡಾ.ಎಚ್.ಎಸ್.ಕಲಾವತಿ ಮಾತನಾಡಿ, ಬುದ್ಧನನ್ನು ಕೇವಲ ಸಮುದಾಯಗಳಿಗೆ ಸೀಮಿತ ಮಾಡಬೇಡಿ. ಅವ ಪ್ರವಚನ ಕೇಳಲು ಬಡವರಿಂದ ಶ್ರೀಮಂತರವರೆಗೂ ಜನ ಸೇರುತ್ತಿದ್ದರು. ಅವರ ಧಮ್ಮಕ್ಕೆ ಅಷ್ಟು ಶಕ್ತಿ ಇತ್ತು, ಸಹಾಯ, ಕರುಣೆ, ಪ್ರೀತಿ, ದಯೆ, ಸಹನೆ ಮಾನವೀಯ ಮೌಲ್ಯಗಳನ್ನು ಗೌತಮ ಬುದ್ಧ ಹೊಂದಿದ್ದರು ಎಂದು ತಿಳಿಸಿದರು.
ಡಾ.ಬಿ.ಆರ್.ಅಂಬೇಡ್ಕರ್ ಸಹ ನನ್ನ ಮೊದಲ ಗುರು ಗೌತಮ ಬುದ್ಧ ಎಂದಿದ್ದರು. ಸಹಸ್ರಾರೂ ವರ್ಷದಿಂದ ಹಿಂದುಳಿದಿದ್ದ ಬುದ್ಧಿಸಂ ಅನ್ನು ಡಾ.ಬಿ.ಆರ್.ಅಂಬೇಡ್ಕರ್ ಅವರು ಭಾರತಾದ್ಯಂತ ಮತ್ತೆ ಪಸರಿಸುತ್ತರೆ. ಬುದ್ಧ ಇಲ್ಲದೆ ಅಂಬೇಡ್ಕರ್ ಇಲ್ಲ, ಅಂಬೇಡ್ಕರ್ ಇಲ್ಲದೆ ಬುದ್ಧ ಇಲ್ಲ. ಜನರು ಮೌಢ್ಯದ ಸುಳಿಯಲ್ಲಿ ಸಿಲುಕಿದಾಗ ಏಷ್ಯಾದ ಬೆಳಕಾದ ಗೌತಮ ಬುದ್ಧ ಯಾರು ಏನೇ ಹೇಳಿದರೂ ಸ್ವತಃ ನಾನೇ ಹೇಳಿದರು ಪ್ರಶ್ನಿಸದೇ ಯಾವುದನ್ನು ಒಪ್ಪಿಕೊಳ್ಳಬೇಡಿ, ಪ್ರಶ್ನಿಸುವುದನ್ನು ತಿಳಿಯಿರಿ ಎಂದವರು ಬುದ್ಧ. ಜ್ಞಾನ ಯಾರ ಮನೆಯ ಆಸ್ತಿಯಲ್ಲ. ಅದನ್ನು ಅರಿತುಕೊಳ್ಳುವುದರ ಮೂಲಕ ನೀವು ಬುದ್ಧರಾಗಿ ಎಂದು ಹೇಳಿದರು.
ಮಂಡ್ಯ ಉಪವಿಭಾಗಾಧಿಕಾರಿ ಶಿವಮೂರ್ತಿ, ತಹಸೀಲ್ದಾರ್ ಡಾ.ಶಿವಕುಮಾರ್ ಬಿರಾದಾರ್, ಬೌದ್ಧ ಮಹಾಸಭಾದ ರಾಜ್ಯ ಉಪಾಧ್ಯಕ್ಷ ಶಿವರಾಜ್, ಜಿಲ್ಲಾಧ್ಯಕ್ಷ ಪ್ರೊ.ಎಂ.ವೆಂಕಟೇಶ್, ದಸಂಸ ವೆಂಕಟಗಿರಿಯ್ಯ, ನಗರಸಭೆ ಮಾಜಿ ಅಧ್ಯಕ್ಷೆ ವಿಜಯಲಕ್ಷ್ಮೀ, ಮುಖಂಡರಾದ ಕುಮಾರಿ, ಅಮ್ಜದ್ ಪಾಷಾ ಇತರರಿದ್ದರು.
ಮೆರವಣಿಗೆ: ಜಯಂತ್ಯುತ್ಸವದ ಅಂಗವಾಗಿ ಜಿಲ್ಲಾಧಿಕಾರಿ ಕಚೇರಿ ಮುಂಭಾಗದ ಉದ್ಯಾನದಲ್ಲಿರುವ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಲಾಯಿತು. ನಂತರ ವರ್ಣರಂಜಿತ ರಥದ ಮೇಲೆ ಇರಿಸಲಾಗಿದ್ದ ಭಗವಾನ್ ಬುದ್ಧರ ಪುತ್ತಳಿಗೆ ತಹಸೀಲ್ದಾರ್ ಡಾ.ಶಿವಕುಮಾರ್ ಬಿರಾದಾರ್ ಪುಷ್ಪಾರ್ಚನೆ ಸಲ್ಲಿಸಿದರು. ಜಿಲ್ಲಾಧಿಕಾರಿ ಕಚೇರಿಯಿಂದ ಡಾ.ಬಿ.ಆರ್.ಅಂಬೇಡ್ಕರ್ ಭವನದವರೆಗೆ ಮೆರವಣಿಗೆ ನಡೆಯಿತು.
