ಬೆಂಗಳೂರು ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿ ಡಾ. ಎಸ್.ಎಂ. ಜಯಕರ ಸೇವೆಯನ್ನು ಪರಿಗಣಿಸಿ ನ್ಯಾಷನಲ್ ಕೆಡೆಟ್ ಕಾರ್ಪ್ಸ್ ಗೌರವ ಕರ್ನಲ್ ಪದವಿ ಪ್ರದಾನ ಮಾಡಿತು.

ಜ್ಞಾನಭಾರತಿ ಆವರಣದ ವಿ.ಬಿ. ಕುಟೀನೋ ಸಭಾಂಗಣದಲ್ಲಿ ಸೋಮವಾರ ನಡೆದ ಕಾರ್ಯಕ್ರಮದಲ್ಲಿ ಕರ್ನಾಟಕ ಮತ್ತು ಗೋವಾ ಡೈರೆಕ್ಟರೇಟ್ನ ಡೆಪ್ಯುಟಿ ಡೈರೆಕ್ಟರ್ ಜನರಲ್ ಎಸ್. ಬಿ. ಅರುಣ್ ಕುಮಾರ್ ಅವರು ಡಾ. ಜಯಕರ ಅವರಿಗೆ ಗೌರವ ಕರ್ನಲ್ ಪದವಿ ಪ್ರದಾನ ಮಾಡಿದರು.
ಬಳಿಕ ಮಾತನಾಡಿದ ಡಾ. ಜಯಕರ, ದೇಶದ ಅತಿದೊಡ್ಡ ರಾಷ್ಟ್ರೀಯ ಸಂಘಟನೆಯಾದ ಎನ್ಸಿಸಿ ಯಿಂದ ಈ ಗೌರವ ಪಡೆದಿರುವುದು ಸಾಕಷ್ಟು ಹೆಮ್ಮೆ ತಂದಿದೆ. ವಿದ್ಯಾರ್ಥಿಗಳಲ್ಲಿ ಶಿಸ್ತು, ಸಂಯಮ, ಏಕತೆ, ರಾಷ್ಟ್ರಪ್ರೇಮ, ಧೈರ್ಯ, ಶಕ್ತಿಯನ್ನು ತುಂಬಿ ದೇಶದ ಅತ್ಯುತ್ತಮ ಪ್ರಜೆಗಳನ್ನಾಗಿ ನಿರ್ಮಿಸುವಲ್ಲಿ ಎನ್ಸಿಸಿ ಪಾತ್ರ ದೊಡ್ಡದು ಎಂದು ಪ್ರಶಂಸಿದರು.
ಎಸ್. ಬಿ. ಅರುಣ್ಕುಮಾರ್ ಮಾತನಾಡಿ, ಡಾ. ಜಯಕರ ಅವರ ಜ್ಞಾನ, ಅನುಭವ ವಿದ್ಯಾರ್ಥಿಗಳಿಗೆ ಸ್ಪೂರ್ತಿ ಮತ್ತು ಸಹಕಾರಿಯಾಗಲಿದೆ. ಕುಲಪತಿ ಹುದ್ದೆ ಜತೆಗೆ ಗೌರವ ಕರ್ನಲ್ ಹೆಚ್ಚುವರಿ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿಭಾಯಿಸಲಿದ್ದಾರೆ. ಹಾಗೆಯೇ ವಿಶ್ವವಿದ್ಯಾಲಯದ ವ್ಯಾಪ್ತಿಯಲ್ಲಿ ಎನ್ ಸಿ ಸಿ ಗೆ ಬೇಕಾದ ಮೂಲಸೌಕರ್ಯ ಕಲ್ಪಿಸುವ ಭರವಸೆ ನೀಡಿದ್ದಾರೆ ಎಂದರು.
ಈ ವೇಳೆ ಕುಲಸಚಿವ ಶೇಕ್ ಲತೀಫ್, ಲೆಫ್ಟಿನೆಂಟ್ ಕರ್ನಲ್ ವಿನಯ್ ಅಹ್ಲುವಾಲಿಯ ಸೇರಿ ಹಿರಿಯ ಅಧಿಕಾರಿಗಳು ಮತ್ತು ಉಪನ್ಯಾಸಕರು ಉಪಸ್ಥಿತರಿದ್ದರು.