ಬೆಂಗಳೂರು: ಬಿ.ಎಸ್.ಯಡಿಯೂರಪ್ಪ ಆಶೀರ್ವಾದದಿಂದ ಶಾಸಕಾಂಗ ಪಕ್ಷದ ನಾಯಕನಾಗಿ ಆಯ್ಕೆಯಾಗಿದ್ದೇನೆ. ಅವರ ಮಾರ್ಗದರ್ಶನದಲ್ಲಿ ಮುನ್ನಡೆಯುತ್ತೇನೆ ಎಂದು ನಿಯೋಜಿತ ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು. ಯಡಿಯೂರಪ್ಪ ಅವರ ತ್ಯಾಗಮಯ ನಿರ್ಣಯದಿಂದ ನಾನು ಶಾಸಕಾಂಗ ಪಕ್ಷದ ನಾಯಕನಾಗಿದ್ದೇನೆ. 40 ವರ್ಷ ಕಾಲ ಯಡಿಯೂರಪ್ಪ ಹಗಲು-ರಾತ್ರಿ ಎನ್ನದೆ ಬೆವರು ಹರಿಸಿ ಬಿಜೆಪಿ ಕಟ್ಟಿ ಬೆಳೆಸಿದ್ದಾರೆ. ಈ ಪಕ್ಷಕ್ಕೆ ತನ್ನದೇ ಆದ ಪರಂಪರೆ, ಮೌಲ್ಯವಿದೆ. ಆ ಮುಖಾಂತರ ರಾಜ್ಯದಲ್ಲಿ ನಾವು ಆಳುತ್ತಿದ್ದೇವೆ. ಯಡಿಯೂರಪ್ಪ ಅವರು 2 ವರ್ಷ ಅತ್ಯಂತ ಕಷ್ಟ ಪರಿಸ್ಥಿತಿಯಲ್ಲಿ ಆಡಳಿತ ನಡೆಸಿದ್ದಾರೆ. 2 ಬಾರಿ ಕೋವಿಡ್, 2 ಬಾರಿ ಪ್ರವಾಹ ಎದುರಿಸಿದ್ದಾರೆ. ಕಷ್ಟಕರ ಪರಿಸ್ಥಿತಿಯಲ್ಲೂ ರಾಜ್ಯದ ಹಣಕಾಸು ನಿರ್ವಹಣೆ ಮಾಡಿದ್ದಾರೆ. ಈ ಎಲ್ಲ ಹಿನ್ನೆಲೆಯಲ್ಲಿ ನಾನು ಶಾಸಕಾಂಗ ಪಕ್ಷದ ನಾಯಕನಾಗಿ ಕೆಲಸ ಮಾಡಬೇಕಿದೆ. ಯಡಿಯೂರಪ್ಪ ನನಗೆ ಮಾರ್ಗದರ್ಶನ ಮಾಡಿದ್ದಾರೆ. ಅವರ ಹೆಜ್ಜೆಯಲ್ಲಿ ಹೆಜ್ಜೆ ಇಟ್ಟು ಬಡವರು, ರೈತರು, ದೀನ-ದಲಿತರು, ಹಿಂದುಳಿದ ವರ್ಗ, ಮಹಿಳೆಯರು ಮತ್ತು ಯುವಕರ ಕಲ್ಯಾಣಕ್ಕಾಗಿ, ರಾಜ್ಯದ ಹಣಕಾಸು ನಿರ್ವಹಣೆ, ಜನಪರ, ನ್ಯಾಯಸಮ್ಮತ ಆಡಳಿತ ಕೊಡುವ ಸಂಕಲ್ಪ ಮಾಡಿದ್ದೇನೆ. ಯಡಿಯೂರಪ್ಪ ನಾಯಕತ್ವದಲ್ಲಿ ಹೊಸ ಸರ್ಕಾರ ಶಕ್ತಿಯುತವಾಗಿ ಮುನ್ನಡೆಯಲಿದೆ ಎಂದು ಬೊಮ್ಮಾಯಿ ವಿಶ್ವಾಸ ವ್ಯಕ್ತಪಡಿಸಿದರು.

ಲವಲವಿಕೆಯಲ್ಲಿ ದಿನ ಕಳೆದ ಬಿಎಸ್ವೈ
ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಬಿ.ಎಸ್.ಯಡಿಯೂರಪ್ಪ ಅವರ ಕಾವೇರಿ ನಿವಾಸ ಮಂಗಳವಾರ ರಾಜಕೀಯ ಚಟುವಟಿಕೆಗಳ ಕೇಂದ್ರವಾಗಿ ಮಾರ್ಪಟ್ಟಿತ್ತು. ಯಡಿಯೂರಪ್ಪ ದುಗುಡದಲ್ಲಿದ್ದಾರೆ ಎಂದು ಭಾವಿಸಿ ಕಾವೇರಿಗೆ ಭೇಟಿ ನೀಡಿದವರಿಗೆ ಅಲ್ಲಿ ಅಚ್ಚರಿ ಕಾದಿತ್ತು. ಆರಾಮವಾಗಿ ರಿಲ್ಯಾಕ್ಸ್ ಮೂಡಿನಲ್ಲಿದ್ದ ಸಿಎಂ ಎಲ್ಲರೊಂದಿಗೆ ಬೆರೆತರು. ಆರಂಭದಲ್ಲಿ ಮಾಜಿ ಶಾಸಕ ಜೀವರಾಜ್, ಗುಪ್ತಚರ ಇಲಾಖೆ ಮುಖ್ಯಸ್ಥ ದಯಾನಂದ್ ಆಗಮಿಸಿದ್ದರು. ಗಂಟೆ 9 ದಾಟುತ್ತಿದ್ದಂತೆ ಮನೆಗೆ ಆಗಮಿಸುವವರ ಸಂಖ್ಯೆ ಹೆಚ್ಚಾಯಿತು. ಮಾಜಿ ಸಚಿವರು, ಶಾಸಕರು ಬಿಎಸ್ವೈ ಸುತ್ತುವರಿದು ಮಾತಿಗಿಳಿದರು. ಕೆಲವರು ತಮ್ಮನ್ನು ಸಂಪುಟದಲ್ಲಿ ಪರಿಗಣಿಸುವಂತೆ ವರಿಷ್ಠರಿಗೆ ತಿಳಿಸುವಂತೆ ಮನವಿಯನ್ನೂ ಮಾಡಿದರು. ವಲಸಿಗ ಶಾಸಕರು ಹಾಗೂ ತಮ್ಮ ಆಪ್ತ ಶಾಸಕರ ಕೋರಿಕೆ ಆಲಿಸಿದ ಬಿಎಸ್ವೈ, ಸೂಕ್ತ ಸಂದರ್ಭದಲ್ಲಿ ವ್ಯವಸ್ಥೆ ಮಾಡುವುದಾಗಿ ಭರವಸೆ ನೀಡಿದರೆಂದು ಪ್ರತ್ಯಕ್ಷದರ್ಶಿಗಳು ತಿಳಿಸಿದರು.
ಸಂಪುಟ ರಚನೆ ಒಂದು ವಾರ ತಡ
ಬಸವರಾಜ ಬೊಮ್ಮಾಯಿ ನೇತೃತ್ವದ ಸಚಿವ ಸಂಪುಟ ರಚನೆ ಒಂದು ವಾರ ತಡವಾಗುವ ಸಾಧ್ಯತೆಗಳಿವೆ. ಬುಧವಾರ ಮುಖ್ಯಮಂತ್ರಿಯಾಗಿ ಬೊಮ್ಮಾಯಿ ಮಾತ್ರ ಅಧಿಕಾರ ಸ್ವೀಕರಿಸಲಿದ್ದಾರೆ. ಆ ನಂತರ ಅವರು ದೆಹಲಿಗೆ ಹೋಗಿ ಹೈಕಮಾಂಡ್ ಜತೆ ಚರ್ಚೆ ಮಾಡಬೇಕಾಗಿದೆ. ಯಡಿಯೂರಪ್ಪ ಸಂಪುಟದಲ್ಲಿದ್ದ ಅನೇಕರನ್ನು ಕೈಬಿಟ್ಟು ಹೊಸಬರನ್ನು ಆಯ್ಕೆ ಮಾಡಬೇಕಾಗಿದೆ. ಸಂಘ ಹಾಗೂ ಎಲ್ಲ ಮುಖಂಡರ ಜತೆಗೆ ಚರ್ಚೆ ಮಾಡಿ ಅಂತಿಮಗೊಳಿಸಬೇಕಾಗುತ್ತದೆ. ಆದ್ದರಿಂದ ಈ ಎಲ್ಲ ಪ್ರಕ್ರಿಯೆ ಮುಗಿಯಲು ಒಂದು ವಾರವಾಗುತ್ತದೆ ಎಂಬುದು ಬಿಜೆಪಿ ಉನ್ನತ ಮೂಲಗಳ ಮಾಹಿತಿ.
ಸಿಟಿ ರವಿಗೆ ಶಾಕ್
ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಅವರನ್ನು ಪಕ್ಷದ ಸಭೆಯಿಂದ ಹೊರ ಕಳಿಸಿದ ಪ್ರಸಂಗ ನಡೆದಿದೆ. ಶಾಸಕಾಂಗ ಪಕ್ಷದ ನೂತನ ಆಯ್ಕೆಗೆ ಮುನ್ನ ಕುಮಾರಕೃಪ ಅತಿಥಿ ಗೃಹದಲ್ಲಿ ಪಕ್ಷದ ವರಿಷ್ಠರ ಪ್ರತಿನಿಧಿ ವೀಕ್ಷಕ ಧಮೇಂದ್ರ ಪ್ರಧಾನ್, ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಸಿ.ಟಿ.ರವಿ ಕೂಡ ಜತೆಗಿದ್ದರು. ಆದರೆ ಚರ್ಚೆಗೆ ಮುನ್ನ ಸಿ.ಟಿ.ರವಿ ಅವರನ್ನು ಹೊರಕಳಿಸಿ ಸಭೆ ನಡೆಸಲಾಯಿತು ಎಂದು ತಿಳಿದುಬಂದಿದೆ. ಯಾವ ಕಾರಣಕ್ಕೆ ಹೊರ ಕಳಿಸಲಾಯಿತೆಂದು ಗೊತ್ತಾಗಿಲ್ಲ.
ತಾತ ಸಿಎಂ ಆಗಿದ್ದರು, ಈಗ ತಂದೆಯೂ ಸಿಎಂ; ಮೊಮ್ಮಗ ಕೂಡ ರಾಜಕೀಯಕ್ಕೆ ಬರ್ತಾರಾ?